ಸುಜಯ್ ಕಲ್ಯಾಣ
Team Udayavani, Feb 17, 2017, 3:45 AM IST
“ನಮ್ಮ ಸೋಶಿಯಲ್ ಟೀಚರ್ ಸಾವಿತ್ರಮ್ಮ ಏನ್ ಹೇಳಿದ್ದಾರೆ ಹೇಳು, ನಾವು ಆಟವಾಡಿ ಬಿಟ್ಟಿರೋ ಬೊಂಬೆನಾ ಬಡಮಕ್ಕಳಿಗೆ ದಾನ ಮಾಡ್ಬೇಕುಂತಾ… ‘
– ನೀವು ಈ ವಾರ ತೆರೆಕಾಣುತ್ತಿರುವ “ಶ್ರೀನಿವಾಸ ಕಲ್ಯಾಣ’ ಚಿತ್ರದ ಟ್ರೇಲರ್ ನೋಡಿದ್ದರೆ ನಾಯಕನ ಪಕ್ಕದಲ್ಲಿ ಕುಳಿತ ಆತನ ಸ್ನೇಹಿತನೊಬ್ಬ ಈ ಡೈಲಾಗ್ ಹೇಳಿರುವುದನ್ನು ನೀವು ನೋಡಿರುತ್ತೀರಿ. ಲಾಂಗ್ ಶಾಟ್ನಲ್ಲಿ ನಟ ಶರಣ್ನಂತೆ ಕಾಣುವ ಆ ವ್ಯಕ್ತಿ ವಿಭಿನ್ನ ಮ್ಯಾನರೀಸಂ ಮೂಲಕ ಸಿನಿಮಾದುದ್ದಕ್ಕೂ ನಗಿಸಿದ್ದಾರಂತೆ. ಅವರು ಹೆಸರು ಸುಜಯ್
ಶಾಸ್ತ್ರೀ. ಸುಜಯ್ ಶಾಸ್ತ್ರೀಯನ್ನು ಖಂಡಿತಾ ನೀವು ನೋಡಿರುತ್ತೀರಿ. ಅದು ಕಿರುತೆರೆಯಲ್ಲಿ. ಕಿರುತೆರೆಯ “ಪಾಂಡುರಂಗ ವಿಠಲ’ ಧಾರಾವಾಹಿ ಮೂಲಕ ಮನೆಮಂದಿಗೆ ಪರಿಚಿರಾದ ಸುಜಯ್, ಆ ನಂತರ “ಓಂ ಶಕ್ತಿ ಓಂ ಶಾಂತಿ’ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಧಾರಾವಾಹಿಯಲ್ಲಿ ನಟಿಸಿದವರಿಗೆ ಸಿನಿಮಾದಲ್ಲಿ ಬೇಗನೇ ಅವಕಾಶ ಸಿಗುತ್ತದೆ ಎಂಬ ಮಾತಿನಂತೆ ಸುಜಯ್ಗೂ ಬೇಗನೇ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. “ಶ್ರೀನಿವಾಸ ಕಲ್ಯಾಣ’ದಲ್ಲಿ ಆರಂಭದಿಂದ ಕೊನೆವರೆಗೂ ನಾಯಕನ ಜೊತೆ ಜೊತೆಗೆ ಟ್ರಾವೆಲ್ ಮಾಡುವ ಪಾತ್ರವಂತೆ.
ಎಡವಟ್ಟು ಮಾಡಿಕೊಮಡು ಕೊನೆಗೆ ಪ್ರಾಯಶ್ಚಿತದ ಬಗ್ಗೆ ಯೋಚನೆ ಮಾಡುವ ಪಾತ್ರದಲ್ಲಿ ಸುಜಯ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೇಲರ್ ನೋಡಿದವರು ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದು ಸುಜಯ್ ವಿಶ್ವಾಸವನ್ನು ಹೆಚ್ಚಿಸಿದೆ. ಈ ಸಿನಿಮಾ ಮೂಲಕ ಚಿತ್ರರಂಗದಲ್ಲಿ ನೆಲೆ ನಿಲ್ಲುವ ವಿಶ್ವಾಸ ಕೂಡಾ ಸುಜಯ್ಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಕನಸು ಹೊತ್ತಿರುವ ಸುಜಯ್
ಈಗ “ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.
– ರವಿ ರೈ