ವಿವಾದಿತ ಸಾವರ್ಕರ್ ಪುಸ್ತಕ: ಜಟಾಪಟಿ
Team Udayavani, Jan 4, 2020, 9:08 AM IST
ಮುಂಬೈ/ಭೋಪಾಲ್: ಕಾಂಗ್ರೆಸ್ ಅಂಗಸಂಸ್ಥೆಯಾದ ಸೇವಾದಳವು, ಸಾವರ್ಕರ್ ಕುರಿತು ವಿವಾದಿತ ಪುಸ್ತಕ ಬಿಡುಗಡೆ ಮಾಡಿರುವುದು ಜಟಾಪಟಿಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಸರಕಾರ ರಚಿಸಿರುವ ಶಿವಸೇನೆ, ಸಾವರ್ಕರ್ರನ್ನು ಸಮರ್ಥಿಸಿ ಕೊಂಡು ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಬಿಜೆಪಿ ಕೂಡ ತರಾಟೆಗೆ ತೆಗೆದುಕೊಂಡಿದೆ.
ಮಧ್ಯಪ್ರದೇಶದಲ್ಲಿ ಸೇವಾದಳವು ತನ್ನ ತರಬೇತಿ ಶಿಬಿರದಲ್ಲಿ ‘ವೀರ ಸಾವರ್ಕರ್, ಕಿತ್ನೇವೀರ್’ ಎಂಬ ಶೀರ್ಷಿಕೆಯಡಿ ಪುಸ್ತಕ ವಿತರಿಸಿತ್ತು. ಅದರಲ್ಲಿ ‘ಸಾವರ್ಕರ್ ಹಾಗೂ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು. ಅಂಡಮಾನ್ ಜೈಲಿಂದ ಬಿಡುಗಡೆಯಾದ ಬಳಿಕ ಸಾವರ್ಕರ್ ಬ್ರಿಟಿಷರಿಂದ ಹಣ ಪಡೆದಿದ್ದರು’ ಎಂದು ಉಲ್ಲೇಖಿಸಲಾಗಿತ್ತು.ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್, ಈ ಪುಸ್ತಕವು ಕೊಳಕು ಮನಸ್ಥಿತಿಯಿಂದ ಕೂಡಿದೆ. ಸಾವರ್ಕರ್ ಅದ್ಭುತ ವ್ಯಕ್ತಿ. ಅಪ್ರತಿಮ ದೇಶಭಕ್ತನ ತೇಜೋವಧೆ ಮಾಡಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನೆಹರೂ ಹಾಗೂ ಗಾಂಧಿ ವ್ಯಕ್ತಿತ್ವ ತಿಳಿಯಲು ಕಾಂಗ್ರೆಸ್ಸಿಗರು ನೊಬೆಲ್ ಪುರಸ್ಕೃತ ಸಲ್ಮಾನ್ ರಶ್ದಿ ಬರೆದಿರುವ ‘ಮಿಡ್ ನೈಟ್ಸ್ ಚಿಲ್ಡ್ರನ್ಸ್’ ಪುಸ್ತಕ ಓದಬೇಕು. ಸ್ವಾತಂತ್ರ್ಯ ಹೋರಾಟ ವೇಳೆ ಕಾಂಗ್ರೆಸ್ ನಾಯಕರು ‘ಸುರಕ್ಷಿತ’ ಜೈಲುವಾಸ ಅನುಭವಿಸಿದ್ದರು. ಆದರೆ, ಸಾವರ್ಕರ್ ಅಂಡಮಾನ್ ಜೈಲಿನಲ್ಲಿ ಕರಿನೀರಿನ ಶಿಕ್ಷೆ ಅನುಭವಿಸಿದ್ದರು ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ತಿರುಗೇಟು ನೀಡಿದ್ದಾರೆ.