ಇನ್ನೂ ತಗ್ಗದ ಮುಂಗಾರು ಪ್ರಕೋಪ
Team Udayavani, Aug 11, 2019, 5:54 AM IST
ಹೊಸದಿಲ್ಲಿ: ಕೇರಳ ಸಹಿತ ಹಲವು ರಾಜ್ಯ ಗಳಲ್ಲಿ ಮಳೆ ಪ್ರಕೋಪ ನಿಂತಿಲ್ಲ. ಮಹಾರಾಷ್ಟ್ರದಲ್ಲಿ 2005ರ ಪ್ರವಾಹಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯದ್ದು ಹೆಚ್ಚು ಭೀಕರವಾಗಿದೆ. ಮಳೆಯಿಂದಾಗಿ ಕೇರಳದಲ್ಲಿ 50, ಗುಜರಾತ್ನಲ್ಲಿ 19 ಮಂದಿ ಅಸುನೀಗಿದ್ದಾರೆ. ಕೇರಳದ ವಯನಾಡ್ ಅತ್ಯಂತ ಹೆಚ್ಚು ಹಾನಿಗೀಡಾದ ಪ್ರದೇಶವಾಗಿದೆ. ಭೂಕುಸಿತ ಉಂಟಾಗಿರುವ ಮಲಪ್ಪುರಂ ಮತ್ತು ವಯನಾಡ್ನಲ್ಲಿ ಹಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
2005ಕ್ಕಿಂತ ಹೆಚ್ಚು: ಪಶ್ಚಿಮ ಮಹಾರಾಷ್ಟ್ರದಲ್ಲಿ ಪ್ರವಾಹದಿಂದ ಒಟ್ಟು 4.25 ಲಕ್ಷ ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಕೊಲ್ಹಾಪುರ ಮತ್ತು ಸಾಂಗ್ಲಿ ಜಿಲ್ಲೆಯಿಂದಲೇ 3.78 ಲಕ್ಷ ಮಂದಿ ಇದ್ದಾರೆ. 69 ತಾಲೂಕುಗಳ 761 ಗ್ರಾಮಗಳು ಪ್ರವಾಹ ಪೀಡಿತ ವಾಗಿವೆ. ಸಿಎಂ ದೇವೇಂದ್ರ ಫಡ್ನವಿಸ್ ಸಾಂಗ್ಲಿ ಜಿಲ್ಲೆ ಯಲ್ಲಿ ಸಂತ್ರಸ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 2005ರಲ್ಲಿ ಉಂಟಾಗಿದ್ದ ಪ್ರವಾಹಕ್ಕಿಂತ ಹಾಲಿ ಸಾಲಿನ ಪ್ರವಾಹದಿಂದಾಗಿ ಹಾನಿಯೇ ಹೆಚ್ಚು ಎಂದಿದ್ದಾರೆ. 27, 468 ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆ ಹಾನಿಯಾಗಿರುವ ಬಗ್ಗೆ ಮಾಹಿತಿ ಇದೆ. 484 ಕಿ.ಮೀ. ದೂರದ ರಸ್ತೆ ದುರಸ್ತಿಯಾಗಬೇಕಿದೆ ಎಂದಿದ್ದಾರೆ.
ಭಾವಚಿತ್ರದ ವಿವಾದ: ಸಾಂಗ್ಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಂತ್ರಸ್ತರಿಗೆ ವಿತರಿಸಲಾಗಿರುವ ಆಹಾರ ಧಾನ್ಯಗಳ ಬ್ಯಾಗ್ನಲ್ಲಿ ಸಿಎಂ ಫಡ್ನವೀಸ್, ಇಚಲಕರಂಜಿಯ ಬಿಜೆಪಿ ಶಾಸಕ ಸುರೇಶ್ ಹಲ್ವಂಕರ್ ಫೋಟೋ ಮುದ್ರಿತವಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಕ್ರಮವನ್ನು ಸಮರ್ಥಿಸಿ ಕೊಂಡಿರುವ ಶಾಸಕ, ಸರಕಾರದ ವತಿಯಿಂದ ನೆರವು ನೀಡಲಾಗುತ್ತಿದೆ ಎನ್ನುವುದನ್ನು ಪುಷ್ಟೀಕರಿಸುವುದಕ್ಕೆ ಭಾವ ಚಿತ್ರ ಮುದ್ರಿಸಲಾಗಿದೆ ಎಂದಿದ್ದಾರೆ. ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಈ ಕ್ರಮವನ್ನು ಟೀಕಿಸಿ, ಮೊದಲು ಸರಕಾರ ಸರಿಯಾದ ರೀತಿಯಲ್ಲಿ ನೆರವು ನೀಡಲಿ, ಅನಂತರ ಪ್ರಚಾರ ಮಾಡಲಿ ಎಂದಿದ್ದಾರೆ.
ಕೇರಳದ 8 ಜಿಲ್ಲೆಗಳಿಗೆ ರೆಡ್ ಅಲರ್ಟ್
ಕೇರಳದಲ್ಲಿ ಕಳೆದ ವರ್ಷದಷ್ಟೇ ಭೀಕರ ಪ್ರವಾಹ ಈ ಬಾರಿಯೂ ಉಂಟಾಗಿದೆ. ಮಳೆ, ಪ್ರವಾಹ, ಭೂಕುಸಿತದಿಂದ ಇದುವರೆಗೆ 57 ಮಂದಿ ಅಸುನೀಗಿದ್ದಾರೆ. ಮಲಪ್ಪು ರಂನ ಲ್ಲಿ 19, ಕಲ್ಲಿ ಕೋ ಟೆ ಯಲ್ಲಿ 14, ವಯನಾ ಡ್ನ ಲ್ಲಿ 10 ಮಂದಿ ಅಸು ನಿಧೀಗಿ ದ್ದಾರೆ. ಐಎಂಡಿ ಮುನ್ನೆಚ್ಚರಿಕೆ ಪ್ರಕಾರ, ವಯನಾಡ್, ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಮತ್ತು 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ 204 ಮಿ.ಮೀ.ಗಿಂತಲೂ ಅಧಿಕ ಮಳೆಯಾಗಲಿದೆ. ಹೀಗಾಗಿ ಜನರು ಮನೆಯೊಳಗೇ ಇರುವಂತೆ ಎಚ್ಚರಿಕೆ ನೀಡಿದೆ. ಎರ್ನಾಕುಳಂ, ಇಡುಕ್ಕಿ, ಪಾಲಕ್ಕಾಡ್, ಮಲ ಪ್ಪುರಂ, ಕಣ್ಣೂರ್ಗಳ ಲ್ಲಿ ರೆಡ್ ಅಲರ್ಟ್ ಘೋಷಿಸ ಲಾಗಿದೆ. ಹೆಚ್ಚಿನ ಸ್ಥಳಗಳಲ್ಲಿ ಇನ್ನೂ ನೀರಿನ ಮಟ್ಟ ಇಳಿಕೆಯಾಗಿಲ್ಲ. 2 ದಿನಗಳ ಅವಧಿಯಲ್ಲಿ 80 ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದೆ.
ಕ್ರೆಸ್ಟ್ಗೇಟ್ ಓಪನ್: ವಯನಾಡ್ನ ಕಲ್ಪೆಟ್ಟಾದಲ್ಲಿರುವ ಬಾಣಾಸುರಸಾಗರ ಡ್ಯಾಮ್ನ 4 ಕ್ರಸ್ಟ್ಗೇಟ್ಗಳನ್ನು ತೆರೆಯ ಲಾಗಿದೆ. ಏಷ್ಯಾದ ಮತ್ತು ದೇಶದಲ್ಲಿಯೇ ಅತಿ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.
1 ಸಾವಿರ ಶಿಬಿರಗಳು: 1,138 ನಿರಾಶ್ರಿತರ ಶಿಬಿರಗಳನ್ನು ತೆರೆಯ ಲಾಗಿದ್ದು, ಅದರಲ್ಲಿ 1.65ಲಕ್ಷ ಮಂದಿ ಆಶ್ರಯ ಪಡೆದಿದ್ದಾರೆ.
6 ಶವಗಳು ಹೊರಕ್ಕೆ: ಮಲಪ್ಪುರ ಜಿಲ್ಲೆಯ ಕವಲಪ್ಪಾರ ಮತ್ತು ವಯನಾಡ್ ಜಿಲ್ಲೆಯ ಪೂತ್ತುಮಲ ಜಿಲ್ಲೆಯಲ್ಲಿ ಭೂಕುಸಿತ ಪ್ರಕರಣಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕವಲಪ್ಪಾರದಲ್ಲಿ ಶನಿವಾರ ಸಂಜೆವರೆಗೆ ನಡೆಸಲಾದ ಕಾರ್ಯಾಚರಣೆಯಲ್ಲಿ 6 ಶವಗಳನ್ನು ಹೊರ ತೆಗೆಯ ಲಾಗಿದೆ. ಇದಲ್ಲದೆ, 2 ಬಾರಿ ಭೂಕುಸಿತ ಉಂಟಾಗಿದೆ.
ಭಯ ಬೇಡ: ತಿರುವಂತಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಎಲ್ಲ ಅಣೆಕಟ್ಟುಗಳು ತುಂಬಿಲ್ಲ. ಹೀಗಾಗಿ ಕ್ರಸ್ಟ್ಗೇಟ್ ತೆರೆದಿಲ್ಲ. ಈ ವರ್ಷ ಶೇ.30ರಷ್ಟು ಅಣೆಕಟ್ಟುಗಳು ಮಾತ್ರ ತುಂಬಿವೆ ಎಂದಿದ್ದಾರೆ.
ರೈಲು ಸಂಚಾರ ರದ್ದು
ರೈಲು ಹಳಿಗಳಲ್ಲಿ ನೀರು ನುಗ್ಗಿದ್ದರಿಂದ ಹಾಗೂ ಮರಗಳು ಧರೆಗುರುಳಿದ ಕಾರಣ ಹೆಚ್ಚಿನ ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಇದರ ಹೊರತಾ ಗಿಯೂ ದಕ್ಷಿಣ ರೈಲ್ವೇ ಸಾಧ್ಯವಿರುವಷ್ಟು ಕಡೆಗೆ ವಿಶೇಷ ರೈಲು ಓಡಿಸಲು ಸಿದ§ತೆ ಮಾಡಿಕೊಂಡಿದೆ.
ಮಧ್ಯಪ್ರದೇಶದಲ್ಲಿ ಕಡಿಮೆ
ವಾರದಿಂದ ಧಾರಾಕಾರ ಸುರಿಯುತ್ತಿದ್ದ ಮಳೆ ಶನಿವಾರ ಮಧ್ಯಪ್ರದೇಶದಲ್ಲಿ ಕೊಂಚ ಬಿಡುವು ನೀಡಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ, ಮೂರು ದಿನಗಳ ಅನಂತರ ಮತ್ತೆ ಮಳೆ ಬಿರುಸಾಗಲಿದೆ. ಭೋಪಾಲದಲ್ಲಿರುವ ಬಡಾ ತಲಾಬ್ ಕೆರೆಯ 2 ಗೇಟ್ಗಳನ್ನು ತೆರೆದು ಹೆಚ್ಚುವರಿ ನೀರು ಹೊರಗೆ ಬಿಡಲಾಗುತ್ತಿದೆ.
ಗುಜರಾತ್ನಲ್ಲಿ 19 ಸಾವು
ಗುಜರಾತ್ನಲ್ಲಿ ಶುಕ್ರವಾರ, ಶನಿವಾರ ಸುರಿದ ಧಾರಾಕಾರ ಮಳೆಯಿಂದಾಗಿ 19 ಮಂದಿ ಅಸುನೀಗಿದ್ದಾರೆ. ಸೌರಾಷ್ಟ್ರ ಮತ್ತು ಕೇಂದ್ರ ಗುಜರಾತ್ನ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಗುಜರಾತ್ನಲ್ಲಿ ಶನಿವಾರ ಬೆಳಗ್ಗಿನ ವರೆಗೆ ಶೇ.77.80ರಷ್ಟು ಮಳೆಯಾಗಿದೆ. ರಾಜ್ಕೋಟ್ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಸೇನೆ, ಎನ್ಡಿಆರ್ಎಫ್ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ರಾಜ್ಕೋಟ್ ನಗರದಿಂದ 1, 200 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯ ಲಾಗಿದೆ. ರವಿವಾರ ಸೌರಾಷ್ಟ್ರ ಮತ್ತು ಕಛ… ಪ್ರದೇಶದಲ್ಲಿ ಧಾರಾಕಾರ ಮಳೆಯಾಗಲಿದೆ.
ಕೇರಳಕ್ಕೆ ಭೇಟಿ ಬೇಡ
ಪ್ರವಾಹದ ಹಿನ್ನೆಲೆಯಲ್ಲಿ ಕೇರಳಕ್ಕೆ ಭೇಟಿ ಬೇಡ. ಹೀಗೆಂದು ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ತನ್ನ ಪ್ರಜೆಗಳಿಗೆ ಸುತ್ತೋಲೆ ಹೊರಡಿಸಿದೆ. ತಿರುವನಂತಪುರ ದಲ್ಲಿರುವ ದೂತಾವಾಸದ ಕಚೇರಿ ಮೂಲಕ ಈ ಸುತ್ತೋಲೆ ಹೊರಡಿಸಲಾಗಿದೆ.
ಇಂದು ರಾಹುಲ್ ಭೇಟಿ
ವಯನಾಡ್ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ರವಿವಾರ ಸ್ವಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಅವರು ಪ್ರವಾಹದಿಂದ ನೊಂದಿರುವ ಕುಟುಂಬಗಳನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಲಿದ್ದಾರೆ. ಜತೆಗೆ ಜಿಲ್ಲಾಡಳಿತದಿಂದ ಒಟ್ಟಾರೆ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಇಂದಿನಿಂದ ವಿಮಾನ
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರವಿವಾರ ಮಧ್ಯಾಹ್ನದ ಬಳಿಕ ವಿಮಾನ ಸಂಚಾರ ಶುರುವಾಗಲಿದೆ. ಬೆಳಗ್ಗೆ 9 ಗಂಟೆಯಿಂದ ಚೆಕ್ ಇನ್ ಶುರುವಾಗಲಿದೆ ಎಂದಿದ್ದಾರೆ.
ಮರುಭೂಮಿಯಲ್ಲಿ ಮಳೆ
ಥಾರ್ ಮರುಭೂಮಿಯನ್ನು ಹೊಂದಿರುವ ರಾಜಸ್ಥಾನದಲ್ಲಿ ಶನಿವಾರ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ರವಿವಾರ ಕೂಡ ಧಾರಾಕಾರ ಮಳೆ ಮುಂದುವರಿಯಲಿದೆ. ಉದಯಪುರ, ದುಂಗರ್ಪುರ್, ಪ್ರತಾಪ್ಗ್ಢ, ಸಿರೋಹಿ ಜಿಲ್ಲೆಗಳಲ್ಲಿ 3ರಿಂದ 15 ಸೆಂ.ಮೀ. ಮಳೆಯಾಗಿದೆ.