ಭಾರಿ ಮಳೆ: ದೂದ್ ಸಾಗರ ಜಲಪಾತದಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ
Team Udayavani, Oct 15, 2022, 9:36 AM IST
ಪಣಜಿ: ಬೆಳಗಾವಿ ಭಾಗದಲ್ಲಿ ಅ.14ರ ಶುಕ್ರವಾರ ಭಾರಿ ಮಳೆಯಾದ ಪರಿಣಾಮ ಗೋವಾದ ದೂದ್ ಸಾಗರ ಜಲಪಾತ ವೀಕ್ಷಣೆಗೆ ತೆರಳಿದ್ದ ಹಲವು ಜನ ಪ್ರವಾಸಿಗರು ಜಲಪಾತದ ಬಳಿ ಸಿಲುಕಿದ ಘಟನೆ ನಡೆದಿದೆ.
ದೂದ್ ಸಾಗರ ಜಲಪಾತದ ನೀರಿನ ಹರಿವು ದಿಡೀರ್ ಹೆಚ್ಚಾದ ಪರಿಣಾಮ ಜಲಪಾತದ ಬಳಿ ತೆರಳಲು ಹಾಕಿದ್ದ ಕಾಲು ಸಂಕ ಕೊಚ್ಚಿ ಹೋಗಿದೆ. ಇದರಿಂದಾಗಿ ಜಲಪಾತ ವೀಕ್ಷಣೆಗೆ ಜಲಪಾತದ ಬಳಿ ತೆರಳಿದ್ದ ಹಲವು ಜನ ಪ್ರವಾಸಿಗರು ವಾಪಸ್ಸು ಬರಲಾರದೆ ಸಿಕ್ಕಿ ಹಾಕಿಕೊಂಡಿದ್ದರು.
ಬಳಿಕ ರಕ್ಷಣಾ ತಂಡ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ರಕ್ಷಣೆ ಮಾಡಿದರು. ಅದೃಷ್ಟವಶಾತ್ ಜಲಪಾತದ ನೀರಿನ ಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದ್ದರೂ ಕೂಡ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಇನ್ನೂ ಹಲವು ದಿನ ಮಳೆಯಿರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಜಗತ್ಪ್ರಸಿದ್ಧ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಸೂಕ್ತ.