ನಿನ್ನ ಮೆದುಳನ್ನು ಎಲ್ಲಿಂದ ತಂದೆ? ; ಕಾಂಗ್ರೆಸ್ ವಕ್ತಾರನಿಗೆ ಅದ್ನಾನ್ ಸಾಮಿ ಕಟು ಉತ್ತರ
Team Udayavani, Jan 28, 2020, 6:48 AM IST
ಹೊಸದಿಲ್ಲಿ: ಪಾಕಿಸ್ಥಾನ ಮೂಲದ ಗಾಯಕ ಅದ್ನಾನ್ ಸಾಮಿಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಕಟಿಸಿದ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿದೆ. ಸಾಮಿಗೆ ಪದ್ಮಶ್ರೀ ನೀಡಿದ್ದನ್ನು ವ್ಯಂಗ್ಯವಾಡಿದ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ಗೆ, ಸ್ವತಃ ಸಾಮಿ ಕಟುವಾದ ಉತ್ತರ ನೀಡಿದ್ದಾರೆ.
‘ಏ ಮಗು ನಿನ್ನ ಮೆದುಳನ್ನು ಕ್ಲಿಯರೆನ್ಸ್ ಸೇಲ್ನಿಂದ ತಂದಿಧ್ದೋ ಅಥವಾ ಸೌಂದರ್ಯ ಸಾಧನಗಳ ಅಂಗಡಿಯಿಂದ ತಂದಿದ್ದೋ? ತಂದೆಯ ಕೃತ್ಯಕ್ಕೆ ಮಗನನ್ನು ಬಾಧ್ಯಸ್ಥನನ್ನಾಗಿ ಮಾಡಬೇಕು ಅಥವಾ ದಂಡ ಹಾಕಬೇಕು ಅನ್ನುವುದನ್ನಾ ನಿನಗೆ ಬರ್ಕ್ಲಿಯಲ್ಲಿ ಕಲಿಸಿ ಕೊಟ್ಟಿದ್ದು? ನೀನೂ ಒಬ್ಬ ವಕೀಲನ? ಕಾನೂನು ಶಾಲೆಯಲ್ಲಿ ಅದನ್ನೇ ಕಲಿಸಿ ಕೊಟ್ಟಿದ್ದಾ? ಒಳಿತಾಗಲಪ್ಪಾ!’ ಹೀಗೆಂದು ಸಾಮಿ ಟ್ವೀಟ್ ಮಾಡಿದ್ದಾರೆ.
ಲಂಡನ್ನಿನ ಬರ್ಕ್ಲಿ ವಿವಿಯಲ್ಲಿ ಪದವಿ ಪಡೆದು ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿರುವ ಜೈವೀರ್ ಶೆರ್ಗಿಲ್, ಸಾಮಿಯ ಪಾಕ್ ಮೂಲವನ್ನು ಪ್ರಶ್ನಿಸಿದ್ದರು. ‘ಕಾರ್ಗಿಲ್ ಯದ್ಧವೀರ, ನಿವೃತ್ತ ಸೇನಾಧಿಕಾರಿ, ಭಾರತಕ್ಕಾಗಿ ಹೋರಾಡಿದ ಮೊಹಮ್ಮದ್ ಸನಾವುಲ್ಲಾರನ್ನು ವಿದೇಶಿ ಪ್ರಜೆ ಎಂದು ಘೋಷಿಸಲಾಗಿದೆ. ಅದೇ ಪಾಕಿಸ್ಥಾನಕ್ಕಾಗಿ ಯುದ್ಧ ಮಾಡಿದ ಕುಟುಂಬದಿಂದ ಬಂದ ಅದ್ನಾನ್ ಸಾಮಿಗೆ ಪದ್ಮಶ್ರೀ ನೀಡಲಾಗಿದೆ. ಇದು ಎನ್ಆರ್ಸಿ ಜಾದೂ ಮತ್ತು ಸರಕಾರದ ಚಮಚಾಗಿರಿ!’ ಎಂದು ಶೆರ್ಗಿಲ್ ಟ್ವೀಟ್ ಮಾಡಿದ್ದರು.
ಮೂಲತಃ ಅದ್ನಾನ್ ಸಾಮಿ ಪಾಕಿಸ್ಥಾನದ ವಾಯುಪಡೆ ಯೋಧರ ಪುತ್ರ. ಲಂಡನ್ನಿನಲ್ಲಿ ಹುಟ್ಟಿದ ಅವರು, 2015ರಲ್ಲಿ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿ, 2016ರಲ್ಲಿ ಪೌರತ್ವ ಪಡೆದುಕೊಂಡರು. ಸಾಮಿಗೆ ಪದ್ಮಶ್ರೀ ನೀಡಿರುವುದನ್ನು ಬಿಜೆಪಿ, ಎಲ್ಜೆಪಿ ಸಮರ್ಥಿಸಿಕೊಂಡಿದ್ದು, ಪ್ರಶಸ್ತಿಗೆ ಅವರು ಅರ್ಹರು ಎಂದಿದೆ. ಎನ್ಸಿಪಿ ಮತ್ತು ಕಾಂಗ್ರೆಸ್ ಇದನ್ನು 130 ಕೋ. ಭಾರತೀಯರಿಗೆ ಮಾಡಿದ ಅವಮಾನ ಎಂದಿದೆ.