ಮದುವೆಯಾಗಲು ನಿರಾಕರಣೆ; ಯುವತಿಯನ್ನು ಚಲಿಸುತ್ತಿರುವ ರೈಲಿನ ಮುಂದೆ ತಳ್ಳಿದ ಯುವಕ !
Team Udayavani, Feb 21, 2021, 8:20 AM IST
ಮುಂಬೈ: ಮದುವೆಯಾಗಲು ನಿರಾಕರಿಸಿದಕ್ಕೆ 21 ವರ್ಷದ ಯುವತಿಯನ್ನು, ವ್ಯಕ್ತಿಯೋರ್ವ ಚಲಿಸುತ್ತಿರುವ ರೈಲಿನ ಮುಂದೆ ತಳ್ಳಿದ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ಖಾರ್ ರೈಲ್ವೇ ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದ್ದು ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅದಾಗ್ಯೂ ಚಲಿಸುತ್ತಿರುವ ರೈಲಿನ ಮುಂದೆ ಆಕೆ ಬಿದ್ದುದ್ದರಿಂದ ತಲೆಗೆ ಗಂಭಿರ ಗಾಯಗಳಾಗಿದ್ದು 12 ಹೊಲಿಗೆ ಹಾಕಲಾಗಿದೆ.
ಶುಕ್ರವಾರ (ಫೆ.19) ಈ ಘಟನೆ ನಡೆದಿದ್ದು, ದೃಶ್ಯಾವಳಿಯು ಸಿಸಿಟಿವಿಯಲ್ಲಿ ದಾಖಲಾಗಿದೆ. ಕೃತ್ಯ ಎಸಗಿದ ವ್ಯಕ್ತಿಯನ್ನು ವಡಾಳ ನಿವಾಸಿ ಸುಮೇಧ್ ಜಾಧವ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ದೂರ ಪ್ರಯಾಣದಿಂದ ಲಾಭ, ನಿರೀಕ್ಷಿತ ಆರ್ಥಿಕ ಪ್ರಗತಿ: ಹೇಗಿದೆ ಇಂದಿನ ದಿನಭವಿಷ್ಯ ?
ಆರೋಪಿ ಮತ್ತು ಯುವತಿ 2 ವರ್ಷದಿಂದ ಪರಿಚಿತರಾಗಿದ್ದು, ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಆದರೇ ಯುವಕ ದಿನಕಳೆದಂತೆ ಕುಡಿತದ ದಾಸನಾಗಿದ್ದಾನೆ. ಇದನ್ನು ತಿಳಿದ ಯುವತಿ ಆತನಿಂದ ದೂರವಾಗಿದ್ದಾಳೆ. ಅದಾಗ್ಯೂ ಆಕೆಯನ್ನು ಹಿಂಬಾಲಿಸುತ್ತಿದ್ದರಿಂದ ಯುವತಿ ಪ್ರಕರಣ ದಾಖಲು ಮಾಡಿದ್ದಳು ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಚೌಗುಲೆ ತಿಳಿಸಿದ್ದಾರೆ.
ಶುಕ್ರವಾರ ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಸುಮೇಧ್ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆದರೇ ಆಕೆ ನಿರಾಕರಿಸಿದ್ದರಿಂದ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಮಾತ್ರವಲ್ಲದೆ ರೈಲೊಂದು ನಿಲ್ದಾಣಕ್ಕೆ ಆಗಮಿಸುತ್ತಿರುವಾಗಲೇ ಆಕೆಯನ್ನು ತಳ್ಳಿದ್ದ. ಕೂಡಲೇ ಸ್ಥಳದಲ್ಲಿವರು ಆಕೆಯ ರಕ್ಷಣೆಗೆ ಧಾವಿಸಿದ್ದರು.
ಘಟನೆಯ ನಂತರ ಸುಮೇಧ್ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆತನನ್ನು ಕೃತ್ಯವೆಸಗಿದ 12 ಗಂಟೆಯೊಳಗೆ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೋವಿಡ್ ಸೋಂಕು ಹೆಚ್ಚಳ: 5 ರಾಜ್ಯಗಳ ಸ್ಥಿತಿ ಕಳವಳಕಾರಿ