ನಿರ್ಭಯಾ ಹಂತಕನ ಹೊಸ ಅರ್ಜಿ: ಕಾನೂನು ಅವಕಾಶ ಬಳಕೆಗೆ ಪುನಃ ಅವಕಾಶ ನೀಡಬೇಕೆಂದು ಕೋರಿಕೆ
Team Udayavani, Mar 6, 2020, 9:37 PM IST
ನವದೆಹಲಿ: ನಿರ್ಭಯಾ ಹಂತಕರಲ್ಲೊಬ್ಬನಾದ ಮುಕೇಶ್ ಸಿಂಗ್, ಗಲ್ಲು ಶಿಕ್ಷೆಯಿಂದ ಪಾರಾಗಲು ತನಗಿರುವ ಕಾನೂನಾತ್ಮಕ ಅವಕಾಶಗಳೆಲ್ಲವನ್ನೂ ಮತ್ತೆ ಮೊದಲಿನಿಂದ ಉಪಯೋಗಿಸಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾನೆ.
2018ರಲ್ಲಿ ತನಗೆ ಮೊದಲ ಬಾರಿ ಗಲ್ಲು ಶಿಕ್ಷೆ ಜಾರಿಯಾಗಿದೆ. ಕಾನೂನಿನನ್ವಯ ಆ ಶಿಕ್ಷೆಯಿಂದ ಪಾರಾಗಲು ಇರುವ ಕಾನೂನು ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಲು ನನಗೆ 3 ವರ್ಷಗಳ ಕಾಲಾವಕಾಶವಿದೆ. ಆದರೆ, ಇದನ್ನು ಮುಚ್ಚಿಟ್ಟ ಕೇಂದ್ರ ಗೃಹ ಇಲಾಖೆ, ದೆಹಲಿ ಸರ್ಕಾರ, ಅಮಿಕಸ್ ಕ್ಯೂರಿಯಾಗಿರುವ ವೃಂದಾ ಗ್ರೋವರ್, ನನಗೆ ತಪ್ಪು ಮಾಹಿತಿ ನೀಡಿ, ಬೇಗ ಬೇಗನೇ ಕೆಲವು ಕ್ಯುರೇಟಿವ್ ಅರ್ಜಿಗಳಿಗೆ ಹಾಗೂ ಕೆಲವು ಮೇಲ್ಮನವಿಗಳಿಗೆ ಸಹಿ ಹಾಕಿಸಿಕೊಂಡು ಅವುಗಳನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದಾರೆ” ಎಂದು ಆತ ಆಪಾದಿಸಿದ್ದಾನೆ.
ವಿಶ್ವಸಂಸ್ಥೆಗೆ ಮನವಿ
ಹಂತಕರನ್ನು ಗಲ್ಲಿಗೇರಿಸಲಾಗುವ ಮಾ. 20ರ ದಿನವನ್ನು “ಅಂತಾರಾಷ್ಟ್ರೀಯ ಅತ್ಯಾಚಾರ ನಿಗ್ರಹ ದಿನ’ವೆಂದು ಘೋಷಿಸಬೇಕಾಗಿ ಭಾರತದ ಮಹಿಳಾ ಕಾರ್ಯಕರ್ತೆಯಾದ ಯೋಗಿತಾ ಭಯಾನಾ ಎಂಬುವರು ವಿಶ್ವಸಂಸ್ಥೆಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.