ಆಗ್ರಾ ಆಗಲಿದೆಯೆ ಅಗ್ರವಾನ್? ಐತಿಹಾಸಿಕ ನಗರದ ಹೆಸರು ಬದಲಾವಣೆಗೆ ಯೋಗಿ ಚಿಂತನೆ
Team Udayavani, Nov 18, 2019, 7:37 PM IST
ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ಚದ ಭಾರತೀಯ ಜನತಾ ಪಕ್ಷ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹಲವಾರು ನಗರ ಮತ್ತು ಊರುಗಳ ಹೆಸರನ್ನು ಬದಲಾಯಿಸಿದೆ. ಇದಕ್ಕೆ ಇನ್ನೊಂದು ಸೇರ್ಪಡೆಯೆಂಬಂತೆ ಐತಿಹಾಸಿಕ ತಾಜ್ ಮಹಲ್ ಇರುವ ಆಗ್ರಾ ಜಿಲ್ಲೆಯ ಹೆಸರನ್ನು ಬದಲಾಯಿಸಲು ಯೋಗಿ ಸರಕಾರ ನಿರ್ಧರಿಸಿದೆ.
ಆಗ್ರಾ ಹೆಸರನ್ನು ಅಗ್ರವಾನ್ ಎಂದು ಬದಲಿಸಲು ಉದ್ದೇಶಿಸಿರುವ ಯೋಗಿ ಸರಕಾರ ಈ ಕುರಿತಾದಂತೆ ಆಗ್ರಾದಲ್ಲಿರುವ ಅಂಬೇಡ್ಕರ್ ವಿಶ್ವವಿದ್ಯಾನಿಲಯದಿಂದ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಲು ನಿರ್ಧರಿಸಿದೆ. ಈ ಹೆಸರಿನ ಐತಿಹಾಸಿಕ ಹಿನ್ನಲೆಯನ್ನು ಪರೀಕ್ಷಿಸುವಂತೆ ರಾಜ್ಯ ಸರಕಾರವು ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗಕ್ಕೆ ಸೂಚನೆ ನೀಡಿದ್ದು, ಸರಕಾರದ ಸೂಚನೆಯಂತೆ ಇಲ್ಲಿನ ಇತಿಹಾಸ ವಿಭಾಗದವರು ಈ ಪ್ರಸ್ತಾವನೆಯನ್ನು ಪರಿಗಣಿಸಿ ತಮ್ಮ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ.
ಬಹಳ ಹಿಂದೆ ಆಗ್ರಾವನ್ನು ಅಗ್ರವಾನ್ ಎಂದು ಕರೆಯಲಾಗುತ್ತಿದ್ದ ಕಾರಣ ಈ ಬದಲಾವಣೆಗೆ ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂಬ ಅಂಶವನ್ನು ಸರಕಾರಿ ಮೂಲಗಳು ಖಚಿತಪಡಿಸಿವೆ. ಹೀಗೆ ಅಗ್ರವಾನ್ ಆಗಿದ್ದ ಈ ನಗರ ಆಗ್ರಾ ಎಂದು ಬದಲುಗೊಂಡಿದ್ದು ಯಾವಾಗ ಮತ್ತು ಇದಕ್ಕೆ ಪ್ರಮುಖ ಕಾರಣಗಳೇನು ಎಂಬ ಅಂಶಗಳನ್ನು ಪತ್ತೆಮಾಡುವಂತೆ ಸರಕಾರವು ಇತಿಹಾಕಾರರಿಗೆ ಮತ್ತು ತಜ್ಞರಿಗೆ ಸೂಚನೆಯನ್ನು ನೀಡಿದೆ.
ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿರುವ ಯೋಗಿ ಸರಕಾರ ಇದಕ್ಕೂ ಮೊದಲು ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಿತ್ತು. ಬಳಿಕ ಐತಿಹಾಸಿಕ ಮೊಘಲ್ ಸರಾಯ್ ರೈಲು ನಿಲ್ದಾಣದ ಹೆಸರನ್ನು ದೀನ್ ದಯಾಳ್ ಉಪಾಧ್ಯಾಯ ಎಂದು ಮರು ನಾಮಕರಣ ಮಾಡಿದ್ದನ್ನು ಇಲ್ಲಿ ಉಲ್ಲೇಖಿಬಹುದಾಗಿದೆ.