ಭಯೋತ್ಪಾದನೆಗೆ ಬೆಂಬಲ ನಿಲ್ಲಿಸದಿದ್ದರೆ ಪಾಕ್ ಹಲವು ಭಾಗಗಳಾಗಿ ಒಡೆದುಹೋಗುತ್ತದೆ
Team Udayavani, Sep 15, 2019, 8:10 AM IST
ಸೂರತ್: ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಪಾಕಿಸ್ಥಾನ ಕೂಡಲೇ ನಿಲ್ಲಿಸದಿದ್ದರೇ ಅದು ಹಲವಾರು ಭಾಗಗಳಾಗಿ ಒಡೆಯುತ್ತದೆ ಎಂದು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ತಿಳಿಸಿದ್ದಾರೆ.
ಸೂರತ್ ನಲ್ಲಿ ನಡೆದ ಭಾರತೀಯ ವಿರ್ ಜವಾನ್ ಟ್ರಸ್ಟ್ ನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಬಂದರುಗಳಲ್ಲಿ ಭಯೋತ್ಪಾದಕರಿಗೆ ರಕ್ಷಣೆ ನೀಡುವ ಕೆಲಸವನ್ನು ಪಾಕಿಸ್ಥಾನ ಮಾಡುತ್ತಿದೆ. 1971 ರಲ್ಲಿ ಧರ್ಮದ ಆಧಾರದ ಮೇಲೆ ರೂಪುಗೊಂಡ ಪಾಕಿಸ್ಥಾನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಧರ್ಮವನ್ನು ಆಧರಿಸಿದ ರಾಜಕೀಯವು ಪಾಕಿಸ್ತಾನದಲ್ಲಿ ಮುಂದುವರಿದರೇ ಅದು ಹಲವಾರು ಭಾಗಗಳಾಗಿ ವಿಂಗಡಣೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಅದ್ದರಿಂದ ಕೂಡಲೇ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೇ ಭವಿಷ್ಯದಲ್ಲಿ ಹಲವಾರು ಭಾಗಗಳಾಗಿ ಒಡೆದು ಹೋಗುತ್ತದೆ ಎಂದು ಪಾಕಿಸ್ಥಾನಕ್ಕೆ ಕಠಿಣ ಎಚ್ಚರಿಕೆ ರವಾನಿಸಿದ್ದಾರೆ.
ಜಮ್ಮು-ಕಾಶ್ಮೀರದ ವಿಷಯದಲ್ಲಿ ಪ್ರಧಾನಿ ಮೋದಿ ಅವರ ದೃಢ ನಿಲುವನ್ನು ಪುನರುಚ್ಚರಿಸಿದ ಅವರು, ಭಾರತದ ಮತ್ತು ಪಾಕಿಸ್ಥಾನದ ನಡುವೆ ಮಾತುಕತೆ ನಡೆದರೇ ಅದು ಕೇವಲ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಓಕೆ) ವಿಷಯದಲ್ಲಿ ಮಾತ್ರ. 370ನೇ ವಿಧಿಯನ್ನು ಭಾರತ ರದ್ದು ಮಾಡಿರುವುದು ಪಾಕಿಸ್ಥಾನಕ್ಕೆ ಜೀರ್ಣಿಸಿಕೊಳ್ಳಲು ಆಗದ ವಿಷಯ. ಅದ್ದರಿಂದ ಆಗಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾಗಿಲು ಬಡಿಯುತ್ತಿದೆ. ತನ್ನ ಸ್ವಂತ ಭೂಮಿಯಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಮಾನವ ಹಕ್ಕುಗಳ ಕುರಿತು ಪಾಕಿಸ್ಥಾನ ಮಾತನಾಡುವುದು ಹಾಸ್ಯಸ್ಪದ ಎಂದು ಕಿಡಿಕಾರಿದ್ದಾರೆ.