ನಾವು ಗೋವಾದಲ್ಲಿ ಗೆದ್ದರೆ ರೈತರ ಸಾಲಮನ್ನಾ ಮಾಡುವುದು ಖಂಡಿತ: ರಾಹುಲ್ ಗಾಂಧಿ
Team Udayavani, Oct 30, 2021, 5:22 PM IST
ಪಣಜಿ: ನಾವು ಛತ್ತೀಸ್ ಗಢದಲ್ಲಿ ಚುನಾವಣೆ ಎದುರಿಸಿದ್ದೇವೆ, ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನೂ ನೀಡಿದ್ದೇವೆ. ನಾವು ಪಂಜಾಬ್ ಮತ್ತು ಕರ್ನಾಟಕ್ಕೆ ತೆರಳಿದೆವು ಅಲ್ಲಿಯೂ ಕೂಡ ಅದೇ ರೀತಿಯ ಭರವಸೆ ನೀಡಿದ್ದೆವು. ನಾವು ನೀಡುವ ಭರವಸೆ ಕೇವಲ ಭರವಸೆಗಳಲ್ಲ, ಅವು ಸತ್ಯವಾಗಿರುತ್ತದೆ ಎಂದು ಹೇಳಿ ಕಾಂಗ್ರೇಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಗೋವಾದಲ್ಲಿಯೂ ಕೂಡ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ.
ಪಣಜಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ- ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ದರ ಪ್ರತಿ ಬ್ಯಾರಲ್ಗೆ 140 ಡಾಲರ್ಗೆ ತಲುಪಿತ್ತು. ಇಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ದರ ಕಡಿಮೆ ಯಿರುವಾಗಲೂ ಕೇಂದ್ರವು ಹೆಚ್ಚಿನ ದರದಲ್ಲಿ ಪೆಟ್ರೋಲ್ ಡೀಸೆಲ್ ಖರೀದಿ ಮಾಡಲಾಗುತ್ತಿದೆ. ಇಂಧನದ ಮೇಲೆ ಭಾರತದಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ನೀವು ನನ್ನನ್ನು ನಿಮ್ಮ ಕುಟುಂಬದ ಒಬ್ಬ ಸದಸ್ಯನೆಂದು ಭಾವಿಸಬೇಕು ಎಂಬುದು ನನ್ನ ಇಚ್ಛೆಯಾಗಿದೆ. ಯಾರೂ ಕೂಡ ನಾಚಿಕೆ ಪಡುವ ಅಗತ್ಯವಿಲ್ಲ. ಇಲ್ಲಿ ನಿಮಗೆ ಏನು ಅಭಿವೃದ್ಧಿಯಾಗಬೇಕಿದೆ ಎಂಬುದನ್ನು ನನಗೆ ಹೇಳಿರಿ. ಗೋವಾದಲ್ಲಿ ಮಹತ್ವದ ವಿಷಯವೆಂದರೆ ಪರಿಸರ ರಕ್ಷಣೆ, ಪರಿಸರ ರಕ್ಷಣೆ ಇಲ್ಲಿನ ಮಹತ್ವದ ವಿಷಯವಾಗಿದೆ. ನಾವು ಗೋವಾವನ್ನು ಮಾಲಿನ್ಯಗೊಳ್ಳಲು ಬಿಡುವುದಿಲ್ಲ. ನಾವು ಇಲ್ಲಿ ಯಾವ ಭರವಸೆ ನೀಡುತ್ತೇವೆಯೋ ಅದನ್ನು ಖಂಡಿತವಾಗಿಯೂ ಈಡೇರಿಸಲಿದ್ದೇವೆ ಎಂದು ರಾಹುಲ್ ಗಾಂಧಿ ನುಡಿದರು.