ಸೇತುಸಮುದ್ರಕ್ಕೆ ಬಿಜೆಪಿ ಬೆಂಬಲ
Team Udayavani, Jan 13, 2023, 6:20 AM IST
ಚೆನ್ನೈ: ಸ್ಥಗಿತಗೊಂಡಿರುವ ಸೇತು ಸಮುದ್ರ ಯೋಜನೆಯನ್ನು ಕೇಂದ್ರ ಸರಕಾರ ಪುನರಾರಂಭಿಸೇಕು ಎಂದು ತಮಿಳುನಾಡಿನ ಎಲ್ಲ ಪಕ್ಷಗಳು ಆಗ್ರಹಿಸಿವೆ.
ಈ ಬಗ್ಗೆ ಗುರುವಾರ ಚೆನ್ನೈಯಲ್ಲಿ ಸಿಎಂ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಸಭೆಯೂ ನಡೆದಿದೆ. ಇದುವರೆಗೆ ಯೋಜನೆಯ ಬಗ್ಗೆ ಆಕ್ಷೇಪ ಮಾಡುತ್ತಿದ್ದ ಬಿಜೆಪಿ ಕೂಡ ನಿರ್ಣಯದ ಪರ ಬೆಂಬಲ ನೀಡಿದೆ. ಶ್ರೀಲಂಕಾವನ್ನು ಬಳಸಿ ಬರುವ ಅಗತ್ಯವಿಲ್ಲದೆ, ಭಾರತದ ಪಶ್ಚಿಮ ಮತ್ತು ಪೂರ್ವ ಕರಾವಳಿಗಳ ನಡುವೆ ಸಮುದ್ರ ಸಂಪರ್ಕವನ್ನು ಸೃಷ್ಟಿಸುವ ಯೋಜನೆ ಇದಾಗಿದೆ. ಇದರಿಂದ ಪ್ರಯಾಣ ಸಮಯ ಮತ್ತು ದೂರ ತಗ್ಗಲಿದೆ. ಇದೇ ವೇಳೆ ರಾಮಸೇತು ಅನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆ ಮಾಡಬೇಕೆಂದು ಬಿಜೆಪಿ ನಾಯಕ ಡಾ| ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಪಿಐಎಲ್ ಸಂಬಂಧ ಫೆಬ್ರವರಿ ಎರಡನೇ ವಾರದಲ್ಲಿ ವಿಚಾರಣೆ ಆರಂಭಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.