ಟಿಡಿಪಿಗೆ ಮತ್ತೊಂದು ಶಾಕ್ : ಬಿಜೆಪಿ ಸೇರಿದ ಆದಿನಾರಾಯಣ ರೆಡ್ಡಿ
Team Udayavani, Oct 21, 2019, 9:24 PM IST
ಹೊಸದಿಲ್ಲಿ: ಟಿಡಿಪಿ ಮಾಜಿ ನಾಯಕ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಆದಿನಾರಾಯಣ ರೆಡ್ಡಿ ಅವರು ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೂಲಕ ಟಿಡಿಪಿ ನಾಯಕರ ಪಕ್ಷಾಂತರ ಪರ್ವ ಮುಂದುವರೆದಿದೆ. ಪಕ್ಷ ತೊರೆದ ಆದಿನಾರಾಯಣ ರೆಡ್ಡಿ ಅವರು ಚಂದ್ರಬಾಬು ನಾಯ್ಡು ಅವರ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಅವರು ಸೋಮವಾರ ಕೇಸರಿ ಪಕ್ಷಕ್ಕೆ ಸೇರಿದ್ದಾರೆ.
ಪಕ್ಷ ಸೇರಿದ ಬಳಿಕ ಬಿಜೆಪಿ ಹಾಗೂ ಕೇಂದ್ರ ಸರಕಾರದ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯವನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರಕಾರ ಸಿದ್ಧವಾಗಿದ್ದು, ಅದಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಹೇಳಿದ್ದಾರೆ.
ರೆಡ್ಡಿ ಅವರು ಆಂಧ್ರದ ಕಡಪ ಜಿಲ್ಲೆಯ ಪ್ರಬಲ ನಾಯಕರಾಗಿದ್ದಾರೆ. ಕಾಂಗ್ರೆಸ್ ಸರಕಾರ ಇರುವಾಗ ಶಾಸಕರಾಗಿದ್ದ ಅವರು, ರಾಜ್ಯ ವಿಭಜನೆಯ ಬಳಿಕ ಜಗನ್ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಸೇರಿದ್ದರು. ಬಳಿಕ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಸೇರಿದ್ದರು. ಇದೀಗ ಈ ಮೂರು ಪಕ್ಷದ ಬಳಿಕ ಬಿಜೆಪಿ ಸೇರಿದ್ದಾರೆ.