ಟ್ವಿಟರ್ ಖಾತೆದಾರರೇ ಎಚ್ಚರ
Team Udayavani, Sep 22, 2017, 11:50 AM IST
ಹೊಸದಿಲ್ಲಿ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಭೇಟಿ ನಂತರ ಹಾಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುವಂತಹ ಬರಹ, ವಿರೂಪ ಚಿತ್ರಗಳನ್ನು ಪೋಸ್ಟ್ ಮಾಡುವ ಖಯಾಲಿ ಎಲ್ಲೆ ಮೀರಿದೆ. ಇಂಥ ವಿಕೃತ ಮನಸ್ಥಿತಿ ಪ್ರದರ್ಶಿಸುತ್ತಿರುವವರ ಬಗ್ಗೆ ಕೇಂದ್ರ, ರಾಜ್ಯ ಸರಕಾರ ಈಗ ಜಂಟಿಯಾಗಿ ಕಾರ್ಯಾಚರಣೆ ಗಿಳಿದಿವೆ. ಸರಕಾರಗಳು ಟ್ವಿಟರ್ ಬಳಕೆದಾರರ ಬಗ್ಗೆ ಮಾಹಿತಿ ಕೇಳಿವೆ.
ಸಚಿವಾಲಯ ಕೇಳುತ್ತಿರುವುದೇನು?
ಐಟಿ ಕಾಯ್ದೆ (2000) ಸೆಕ್ಷನ್ 69ಎ ಅಡಿಯಲ್ಲಿ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆಕ್ಷೇಪಾರ್ಹ ಖಾತೆಗಳ ವಿವರ ಕೇಳಿದೆ ಎಂದು ಟ್ವಿಟರ್ ಮೂಲಗಳು ತಿಳಿಸಿದ್ದು, ಅವುಗಳ ಪೈಕಿ 60 ಖಾತೆದಾರರ ಟ್ವಿಟರ್ ವಾಲ್ನಿಂದ ಆಕ್ಷೇಪಾರ್ಹ ಪೋಸ್ಟ್ಗಳನ್ನು ಕಿತ್ತೆಸೆಯಲಾಗಿದೆ. ನಮ್ಮ ನಿಯಮಾವಳಿಯಂತೆ 16 ಮಂದಿ ಖಾತೆದಾರರನ್ನು ಅಮಾನತು ಮಾಡಲಾಗಿದೆ. ಸರಕಾರ ಕೇಳಿದ ವಿವರ ನೀಡಲಾಗಿದೆ.