ಚೆನ್ನೈ: ಐಪಿಎಲ್ಗೆ ಕಾವೇರಿ ಬಿಸಿ!
Team Udayavani, Apr 10, 2018, 6:20 AM IST
ಚೆನ್ನೈ: ಕಾವೇರಿ ವಿವಾದದ ಬಿಸಿ ಐಪಿಎಲ್ಗೂ ತಟ್ಟುವ ಸಂಭವವಿದೆ. ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ಶೀಘ್ರವೇ ರಚಿಸಬೇಕೆಂದು ಆಗ್ರಹಿಸಿ ತಮಿಳಿಗರು ಮಂಗಳವಾರ ಚೆನ್ನೈಯಲ್ಲಿ ನಡೆಯಲಿರುವ ಚೆನ್ನೈ-ಕೆಕೆಆರ್ ನಡುವಿನ ಪಂದ್ಯದ ವೇಳೆ ಪ್ರತಿಭಟಿಸುವ ಸಾಧ್ಯತೆ ತೀವ್ರವಾಗಿದೆ.
ಈ ಬಗ್ಗೆ ಅಲ್ಲಿನ ಮೀನುಗಾರಿಕಾ ಸಚಿವರು ಪ್ರತಿಕ್ರಿಯಿಸಿ, “ತಮಿಳಿಗರ ಭಾವನೆಯನ್ನು ಗೌರವಿಸಿ ಇಲ್ಲಿ ಪಂದ್ಯ ನಡೆಯದಂತೆ ಬಿಸಿಸಿಐ ನೋಡಿಕೊಂಡರೆ ಒಳ್ಳೆಯದು. ಆದರೆ ಒಂದು ವೇಳೆ ಪಂದ್ಯ ನಡೆಯುವುದಾದರೂ ಇಲ್ಲಿನ ಸರಕಾರ ಮಾರ್ಗದರ್ಶನದ ಮೇರೆಗೆ ಬೇಕಾದ ಎಲ್ಲಾ ರೀತಿಯ ರಕ್ಷಣೆ ಒದಗಿಸಲು ತಯಾರಿದೆ’ ಎಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 2 ವರ್ಷಗಳ ನಿಷೇಧ ಕಳಚಿಕೊಂಡು 2018ರ ಐಪಿಎಲ್ಗೆ ಮರಳಿದೆ. ಮಂಗಳವಾರ ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಆದರೆ ತಮಿಳುಪರ ಸಂಘಟನೆಯೊಂದು ಪ್ರತಿಭಟನೆ ಮೂಲಕ ಪಂದ್ಯಕ್ಕೆ ತಡೆಯೊಡ್ಡುವುದಾಗಿ ಹೇಳಿದೆ.