ಕಪಿಲ್ ಒಳಗೊಂಡ ತ್ರಿಸದಸ್ಯ ಸಮಿತಿಗೆ ನೂತನ ಕ್ರಿಕೆಟ್ ಕೋಚ್ ಜವಾಬ್ದಾರಿ
Team Udayavani, Jul 18, 2019, 5:49 AM IST
ಹೊಸದಿಲ್ಲಿ: ಮಾಜಿ ಕ್ರಿಕೆಟಿಗ ಕಪಿಲ್ದೇವ್ ಅವರನ್ನು ಒಳಗೊಂಡ ತ್ರಿಸದಸ್ಯರ ತಾತ್ಕಾಲಿಕ ಸಮಿತಿ ಭಾರತ ಕ್ರಿಕೆಟ್ ತಂಡದ ನೂತನ ತರಬೇತುದಾರನನ್ನು ನೇಮಕ ಮಾಡಲಿದೆ. ಮಂಗಳವಾರ ಬಿಸಿಸಿಐ ಭಾರತ ತಂಡದ ನೂತನ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು.
ಜು. 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈ ಬೆನ್ನಲ್ಲೇ ಕೋಚ್ ನೇಮಕಾತಿಯ ಜವಾಬ್ದಾರಿಯನ್ನು, ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಖ್ಯಾತಿಯ ಕಪ್ತಾನ ಕಪಿಲ್ದೇವ್ ನೇತೃತ್ವದ ತಾತ್ಕಾಲಿಕ ಸಮಿತಿಗೆ ನೀಡಲಾಗಿದೆ.
ಈ ಸಮಿತಿಯು ಮಾಜಿ ಕ್ರಿಕೆಟ್ ಆಟಗಾರ್ತಿ ಕರ್ನಾಟಕದ ಶಾಂತಾ ರಂಗಸ್ವಾಮಿ, ಮಾಜಿ ಆರಂಭಕಾರ ಅಂಶುಮನ್ ಗಾಯಕ್ವಾಡ್ ಒಳಗೊಂ ಡಿದೆ. ಈ ಹಿಂದೆ ಇದೇ ಸಮಿತಿ ಭಾರತ ಮಹಿಳಾ ತಂಡಕ್ಕೆ ಡಬ್ಲ್ಯು.ವಿ. ರಾಮನ್ ಅವರನ್ನು ಕೋಚ್ ಆಗಿ ನೇಮಕ ಮಾಡಿದ್ದನ್ನು ಸ್ಮರಿಸಬಹುದು.
ಶೀತಲ ಸಮರಕ್ಕೆ ದಾರಿ?
ಸಚಿನ್ , ಗಂಗೂಲಿ ಮತ್ತು ಲಕ್ಷ್ಮಣ್ ಮಾಜಿ ಆಟಗಾರರ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಇದ್ದರೂ ಕಪಿಲ್ದೇವ್ ಒಳಗೊಂಡ ತಾತ್ಕಾಲಿಕ ಸಮಿತಿಗೆ ಕೋಚ್ ನೇಮಕ ಆಯ್ಕೆಯ ಜವಾಬ್ದಾರಿಯನ್ನು ಬಿಸಿಸಿಐ ಆಡಳಿತಾಧಿಕಾರಿಗಳು ನೀಡಿರುವುದು ಇದೀಗ ಬಿಸಿಸಿಐನೊಳಗೆ ಶೀತಲ ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.