ಫೈನಲ್ ಸನಿಹ ರಾಜ್ಯಕ್ಕೆ ಹೃದಯಾಘಾತ
Team Udayavani, Dec 22, 2017, 9:21 AM IST
ಕೋಲ್ಕತಾ: ಕರ್ನಾಟಕದ 2017-18ನೇ ಸಾಲಿನ ರಣಜಿ ಹೋರಾಟ ಸೆಮಿಫೈನಲಿಗೆ ಕೊನೆಗೊಂಡಿದೆ. ಅಂತಿಮ ದಿನದಾಟದಲ್ಲಿ ಆತಂಕದ ಕ್ಷಣಗಳನ್ನೆದುರಿಸಿಯೂ 5 ರನ್ನುಗಳ ಗೆಲುವು ಸಾಧಿಸಿದ ವಿದರ್ಭ ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ನೆಗೆದ ಸಾಧನೆಗೈದಿದೆ.
ಕೋಲ್ಕತಾದ “ಈಡನ್ ಗಾರ್ಡನ್ಸ್’ನಲ್ಲಿ ನಡೆದ ಸೆಮಿಫೈನಲ್ನಲ್ಲಿ ಗೆಲುವಿಗಾಗಿ 198 ರನ್ ಗುರಿ ಪಡೆದ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ 4ನೇ ದಿನದಾಟದಲ್ಲಿ 7 ವಿಕೆಟಿಗೆ 111 ರನ್ ಗಳಿಸಿ ಸೋಲಿನತ್ತ ಮುಖ ಮಾಡಿತ್ತು. ಆದರೆ ಅಂತಿಮ ದಿನ ರಾಜ್ಯ ತಂಡ ಸುಲಭದಲ್ಲೇನೂ ಶರಣಾಗಲಿಲ್ಲ. ಅಷ್ಟೇಕೆ, ಒಂದು ಹಂತದಲ್ಲಿ ಅಚ್ಚರಿಯ ಗೆಲುವು ಸಾಧಿಸುವ ಮಟ್ಟಕ್ಕೂ ಏರಿತ್ತು. ಆದರೆ ಐದೇ ರನ್ನಿನಿಂದ ಅದೃಷ್ಟ ಕೈಕೊಟ್ಟಿತು. 192ರ ತನಕ ಬಂದು ಸೋಲೊಪ್ಪಿಕೊಂಡಿತು. ಲೀಗ್ ಹಂತ ದಲ್ಲಿ ಕರ್ನಾಟಕ “ಎ’ ವಿಭಾಗದ ಅಗ್ರ ಸ್ಥಾನಿಯಾಗಿದ್ದರೆ, ವಿದರ್ಭ “ಡಿ’ ವಿಭಾಗದ ಅಗ್ರ ತಂಡವಾಗಿ ಹೊರಹೊಮ್ಮಿತ್ತು.
ಫೈನಲ್ ಮುಖಾಮುಖೀ ಡಿ. 29ರಿಂದ ಇಂದೋರ್ನಲ್ಲಿ ಆರಂಭವಾಗಲಿದ್ದು, ವಿದರ್ಭ ತಂಡ ದಿಲ್ಲಿಯನ್ನು ಎದುರಿಸಲಿದೆ. ಎರಡೂ ತಂಡಗಳು ಅಜೇಯವಾಗಿ ಪ್ರಶಸ್ತಿ ಸುತ್ತಿಗೆ ಆಗಮಿಸಿದ್ದು, ಇತ್ತಂಡಗಳ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ.
ಗುರ್ಬಾನಿ ಗುದ್ದು !
ಕರ್ನಾಟಕವನ್ನು ಕಾಡಿದವರು ನಾಗ್ಪುರದ ಬಲಗೈ ಮಧ್ಯಮ ವೇಗಿ ರಜನೀಶ್ ಗುರ್ಬಾನಿ. ಅಂತಿಮ ದಿನ ದಾಟದಲ್ಲಿ ಅವರು ಉಳಿದ ಮೂರೂ ವಿಕೆಟ್ಗಳನ್ನು ಉಡಾಯಿಸಿದರು. ಗುರ್ಬಾನಿ ಸಾಧನೆ 68ಕ್ಕೆ 7 ವಿಕೆಟ್. ಕೇವಲ 9ನೇ ಪ್ರಥಮ ದರ್ಜೆ ಪಂದ್ಯವಾಡುತ್ತಿರುವ ಗುರ್ಬಾನಿ ಅವರ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ಇದಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಅವರು 5 ವಿಕೆಟ್ ಉಡಾಯಿಸಿದ್ದರು. ಪಂದ್ಯವೊಂದರಲ್ಲಿ ಮೊದಲ ಬಾರಿಗೆ 12 ವಿಕೆಟ್ ಉರುಳಿಸಿದ ಗುರ್ಬಾನಿ ಅರ್ಹವಾಗಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. 9 ಪ್ರಥಮ ದರ್ಜೆ ಪಂದ್ಯ ಗಳಿಂದ ಗುರ್ಬಾನಿ ಒಟ್ಟು 44 ವಿಕೆಟ್ ಉರುಳಿಸಿದ್ದಾರೆ.
ಮಿಥುನ್ ದಿಟ್ಟ ಆಟ
ನಾಯಕ ವಿನಯ್ ಕುಮಾರ್, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಮತ್ತು ಅಭಿಮನ್ಯು ಮಿಥುನ್ ಸೇರಿಕೊಂಡು ಅಂತಿಮ ದಿನದಾಟದಲ್ಲಿ ದಿಟ್ಟ ಬ್ಯಾಟಿಂಗ್ ಹೋರಾಟ ತೋರ್ಪಡಿಸಿದ್ದನ್ನು ಮರೆಯುವಂತಿಲ್ಲ. 111ರಿಂದ ಸ್ಕೋರ್ಬೋರ್ಡ್ ಬೆಳೆಸತೊಡಗಿದ ವಿನಯ್-ಗೋಪಾಲ್ ಇದಕ್ಕೆ 30 ರನ್ ಸೇರಿಸಿದರು. ಸ್ಕೋರ್ 141ಕ್ಕೆ ಏರಿದಾಗ ಕರ್ನಾಟಕಕ್ಕೆ ದಿನದ ಮೊದಲ ಆಘಾತ ಎದುರಾಯಿತು. 48 ಎಸೆತಗಳಿಂದ ಸರ್ವಾಧಿಕ 36 ರನ್ ಮಾಡಿದ (48 ಎಸೆತ, 5 ಬೌಂಡರಿ, 1 ಸಿಕ್ಸರ್) ವಿನಯ್, ಕೀಪರ್ ವಾಡ್ಕರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ವಿದರ್ಭ ಇನ್ನೊಂದು ಮೆಟ್ಟಿಲೇರಿ ನಿಂತಿತು.
ಆದರೆ 10ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಅಭಿಮನ್ಯು ಮಿಥುನ್ ಹೆಸರಿಗೆ ತಕ್ಕ ಹೋರಾಟ ನಡೆಸಿದರು. ಆಕ್ರಮಣಕಾರಿ ಆಟದ ಮೂಲಕ ಕರ್ನಾಟಕದ ಪಾಳೆಯದಲ್ಲಿ ಸಂಭ್ರಮದ ವಾತಾವರಣ ಮೂಡಿಸಿದರು. ಇನ್ನೊಂದೆಡೆ ಶ್ರೇಯಸ್ ಗೋಪಾಲ್ ಬಹಳ ಎಚ್ಚರಿಕೆಯಿಂದ ಕ್ರೀಸ್ ಕಾಯ್ದುಕೊಂಡಿದ್ದರು. 9ನೇ ವಿಕೆಟಿಗೆ 48 ರನ್ ಹರಿದು ಬಂದಾಗ ವಿದರ್ಭಕ್ಕೆ ಮೊದಲ ಸಲ ಸೋಲಿನ ಭೀತಿ ಎದುರಾದದ್ದು ಸುಳ್ಳಲ್ಲ!
ಕರ್ನಾಟಕದ ಗೆಲುವಿಗೆ ಇನ್ನೇನು 9 ರನ್ ಬೇಕೆನ್ನುವಾಗ ಗುರ್ಬಾನಿ ದೊಡ್ಡ ಬೇಟೆಯಾಡಿದರು; 26 ಎಸೆತಗಳಿಂದ 33 ರನ್ (5 ಬೌಂಡರಿ) ಮಾಡಿದ ಮಿಥುನ್ ಅವರನ್ನು ಪೆವಿಲಿಯನ್ನಿಗೆ ಮರಳಿಸಿದರು. ಕೊನೆಯವರಾಗಿ ಬಂದ ಶ್ರೀನಾಥ್ ಅರವಿಂದ್ ಮೇಲೆ ಹೆಚ್ಚಿನ ಭರವಸೆ ಇಡುವ ಹಾಗಿರಲಿಲ್ಲ. 7 ಎಸೆತ ನಿಭಾಯಿಸಿ 3 ರನ್ ಮಾಡಿದ ಅರವಿಂದ್, ಗಲ್ಲಿ ಕ್ಷೇತ್ರರಕ್ಷಕ ವಾಂಖೇಡೆ ಪಡೆದ ಅದ್ಭುತ ಕ್ಯಾಚ್ಗೆ ಬಲಿಯಾದರು. ವಿದರ್ಭ ಇತಿಹಾಸ ನಿರ್ಮಿಸಿತು. ಆಗ ಶ್ರೇಯಸ್ ಗೋಪಾಲ್ 24 ರನ್ ಗಳಿಸಿ ಅಜೇಯರಾಗಿದ್ದರು. (56 ಎಸೆತ, 4 ಬೌಂಡರಿ).
ಟೈ ಆದರೂ ಸಾಕಿತ್ತು!
ಪ್ರಸಕ್ತ ಋತುವಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಕಾಯ್ದುಕೊಂಡು ಬಂದ ಕರ್ನಾಟಕಕ್ಕೆ 198 ರನ್ ಗಳಿಸುವುದು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ. ಅರವಿಂದ್ ಹೊರತುಪಡಿಸಿ ಉಳಿದವರೆಲ್ಲ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಶತಕ ಬಾರಿಸಿದವರೇ ಆಗಿದ್ದರಿಂದ ಗೆಲುವಿನ ನಿರೀಕ್ಷೆ ದಟ್ಟವಾಗಿತ್ತು. ಕನಿಷ್ಠ 197 ರನ್ ಗಳಿಸಿ ಟೈ ಮಾಡಿಕೊಂಡರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಕರ್ನಾಟಕ ಫೈನಲ್ ಪ್ರವೇಶಿಸುತ್ತಿತ್ತು. ಆದರೆ ಅದೃಷ್ಟ ವಿದರ್ಭ ಪಾಳೆಯದಲ್ಲಿ ಲಂಗರು ಹಾಕಿತ್ತು!
ಸ್ಕೋರ್ಪಟ್ಟಿ
ವಿದರ್ಭ ಪ್ರಥಮ ಇನ್ನಿಂಗ್ಸ್ 185
ಕರ್ನಾಟಕ ಪ್ರಥಮ ಇನ್ನಿಂಗ್ಸ್ 301
ವಿದರ್ಭ ದ್ವಿತೀಯ ಇನ್ನಿಂಗ್ಸ್ 313
ಕರ್ನಾಟಕ ದ್ವಿತೀಯ ಇನ್ನಿಂಗ್ಸ್
(ಗೆಲುವಿನ ಗುರಿ: 198 ರನ್)
ಆರ್. ಸಮರ್ಥ್ ಎಲ್ಬಿಡಬ್ಲ್ಯು ನೆರಾಲ್ 24
ಮಾಯಾಂಕ್ ಅಗರ್ವಾಲ್ ಸಿ ಮತ್ತು ಬಿ ಯಾದವ್ 3
ಡಿ. ನಿಶ್ಚಲ್ ಸಿ ವಾಡ್ಕರ್ ಬಿ ನೆರಾಲ್ 7
ಕರುಣ್ ನಾಯರ್ ಸಿ ವಾಡ್ಕರ್ ಬಿ ಗುರ್ಬಾನಿ 30
ಸಿ.ಎಂ. ಗೌತಮ್ ಸಿ ವಾಡ್ಕರ್ ಬಿ ಗುರ್ಬಾನಿ 24
ಸ್ಟುವರ್ಟ್ ಬಿನ್ನಿ ಎಲ್ಬಿಡಬ್ಲ್ಯು ಗುರ್ಬಾನಿ 0
ವಿನಯ್ ಕುಮಾರ್ ಸಿ ವಾಡ್ಕರ್ ಬಿ ಗುರ್ಬಾನಿ 36
ಕೃಷ್ಣಪ್ಪ ಗೌತಮ್ ಎಲ್ಬಿಡಬ್ಲ್ಯು ಗುರ್ಬಾನಿ 1
ಶ್ರೇಯಸ್ ಗೋಪಾಲ್ ಔಟಾಗದೆ 24
ಅಭಿಮನ್ಯು ಮಿಥುನ್ ಸಿ ಸರ್ವಟೆ ಬಿ ಗುರ್ಬಾನಿ 33
ಶ್ರೀನಾಥ್ ಅರವಿಂದ್ ಸಿ ವಾಂಖೇಡೆ ಬಿ ಗುರ್ಬಾನಿ 2
ಇತರ 8
ಒಟ್ಟು (ಆಲೌಟ್) 192
ವಿಕೆಟ್ ಪತನ: 1-7, 2-35, 3-40, 4-81, 5-87, 6-100, 7-104, 8-141, 9-189.
ಬೌಲಿಂಗ್:
ಉಮೇಶ್ ಯಾದವ್ 20-3-65-1
ರಜನೀಶ್ ಗುರ್ಬಾನಿ 23.1-3-68-7
ಆದಿತ್ಯ ಸರ್ವಟೆ 6-2-14-0
ಸಿದ್ಧೇಶ್ ನೆರಾಲ್ 10-4-37-2
ಪಂದ್ಯಶ್ರೇಷ್ಠ: ರಜನೀಶ್ ಗುರ್ಬಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್