ಕಾಂಗ್ರೆಸ್ ಪಕ್ಷಕ್ಕೂ ಪ್ರತ್ಯೇಕ ಧರ್ಮಕ್ಕೂ ಸಂಬಂಧವಿಲ್ಲ
Team Udayavani, Dec 26, 2017, 11:25 AM IST
ಬೆಂಗಳೂರು: “ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೂ ಕಾಂಗ್ರೆಸ್ಗೂ ಯಾವುದೇ ಸಂಬಂಧ ಇಲ್ಲ ‘ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ವಿಜಯಪುರದ ಬಾಲಕಿ ದಾನಮ್ಮ ಕುಟುಂಬಕ್ಕೆ ಪಕ್ಷದ ವತಿಯಿಂದ 2 ಲಕ್ಷ ರೂ.ಚೆಕ್ ನೀಡಿ ನಂತರ ಮಾತನಾಡಿದರು,
ಪ್ರತ್ಯೇಕ ಧರ್ಮದ ವಿವಾದ ಕುರಿತು ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದೆ. ಈ ವಿಷಯದಲ್ಲಿ ಪಕ್ಷ ಮಧ್ಯೆ ಪ್ರವೇಶಿಸುವುದಿಲ್ಲ. ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವ ಸಚಿವರು ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ. ಅವರು ಸರ್ಕಾರದ ಭಾಗವಾಗಿದ್ದಾರೆ. ಪಕ್ಷಕ್ಕೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಸಚಿವರು ಒಂದು ಸಮುದಾಯದ ಮುಖಂಡರಾಗಿರುವುದರಿಂದ ಅವರು ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಕೂಡ ಹೋರಾಟದಲ್ಲಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ಅದನ್ನು ಪ್ರಶ್ನೆ ಮಾಡುವ ಅಧಿಕಾರ ಪಕ್ಷಕ್ಕಿಲ್ಲ. ಅವರು ಪ್ರತ್ಯೇಕ ಧರ್ಮದ ಮಾನ್ಯತೆಗೆ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಬಹುದು. ಆದರೆ, ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹದಾಯಿ ಬಿಜೆಪಿ ನಿಲುವು ಪ್ರಕಟಿಸಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದದ ಕುರಿತು ಬಿಜೆಪಿ ನಾಯಕರು ತಮ್ಮ ನಿಲುವು ಪ್ರಕಟಿಸಲಿ ಎಂದು ಪರಮೇಶ್ವರ್ ಆಗ್ರಹಿಸಿದ್ದಾರೆ. ಗೋವಾ ಮುಖ್ಯಮಂತ್ರಿ ನಮ್ಮ ಸರ್ಕಾರಕ್ಕೆ ಪತ್ರ ಬರೆದು ಅಧಿಕೃತ ಮಾತುಕತೆಗೆ ಕರೆಯಲಿ. ಅದರ ಬದಲು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದರೆ, ಅದಕ್ಕೆ ಕಾನೂನಿನ ಮಾನ್ಯತೆ ದೊರೆಯುವುದಿಲ್ಲ ಎಂದರು.
ರಾಜ್ಯ ಬಿಜೆಪಿ ನಾಯಕರು ಗೋವಾ ಮುಖ್ಯಮಂತ್ರಿಯ ಪತ್ರ ಹಿಡಿದುಕೊಂಡು ಉತ್ತರ ಕರ್ನಾಟಕ ಭಾಗದ ಜನರನ್ನು ಯಾಮಾರಿಸಿದ್ದಾರೆ. ಅದು ಅತ್ತಲೂ ಇಲ್ಲ. ಇತ್ತಲೂ ಇಲ್ಲ ಎನ್ನುವಂತಾಗಿದೆ. ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದ್ದು, ಅದರ ಫಲವನ್ನು ಬಿಜೆಪಿ ಅನುಭವಿಸಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ಕೇಂದ್ರದಿಂದ ಮಾನ್ಯತೆ ಪಡೆದರೆ ದೀಡ್ ನಮಸ್ಕಾರ: ಹೊರಟ್ಟಿ
ಬೆಂಗಳೂರು: ಬಿಜೆಪಿ ಬೆಂಬಲಿತ ಸ್ವಾಮೀಜಿಗಳು ವೀರಶೈವ ಲಿಂಗಾಯತ ಒಂದೇ ಧರ್ಮವೆಂದು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದರೆ ಸ್ವಾಮೀಜಿಗಳಿಗೆ ದೀಡ್ ನಮಸ್ಕಾರ ಹಾಕುತ್ತೇವೆೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ವೇದಿಕೆಯ ಅಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪಂಚ ಪೀಠಾಧೀಶರು ಸೇರಿ ಕೆಲವು ಮಠಾಧೀಶರು ಪ್ರತ್ಯೇಕ ಧರ್ಮದ ಹೋರಾಟದ ದಾರಿ ತಪ್ಪಿಸುತ್ತಿದ್ದಾರೆ. ಕೆಲವು ಸ್ವಾಮೀಜಿಗಳಿಂದಲೇ ಹೋರಾಟಕ್ಕೆ ಹಿನ್ನೆಡೆಯಾಗುತ್ತಿದೆ. ಈಗಾಗಲೇ ವೀರಶೈವ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಹೀಗಾಗಿ ಸಮುದಾಯದ ಹಿತದೃಷ್ಠಿಯಿಂದ ಒಂದು ಬಾರಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.
ಪ್ರತ್ಯೇಕ ಧರ್ಮದ ಹೋರಾಟ ಕೇವಲ ಚುನಾವಣೆಗಾಗಿ ನಡೆಯುತ್ತಿಲ್ಲ. ಸಚಿವ ಎಂ.ಬಿ. ಪಾಟೀಲ್ ಹೋರಾಟ ಕೈ ಬಿಟ್ಟರೂ ನಾವು ಚುನಾವಣೆ ನಂತರವೂ ಹೋರಾಟ ಮುಂದುವರಿಸುತ್ತೇವೆ. ರಾಜ್ಯ ಸರ್ಕಾರ ಅಲ್ಪ ಸಂಖ್ಯಾತ ಆಯೋಗದ ಮೂಲಕ ತಜ್ಞರ ಸಮಿತಿ ರಚಿಸಿದೆ.
ಸಮಿತಿಯಲ್ಲಿ ಎಲ್ಲರೂ ಪರಿಣಿತರೇ ಇದ್ದಾರೆ. ಅವರ ವರದಿಯ ಬಗ್ಗೆ ವೀರಶೈವ ಮಹಾಸಭೆ ಅಧ್ಯಕ್ಷರು ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಸರಿಯಲ್ಲ. ಆಯೋಗದ ವರದಿಯೇ ಅಂತಿಮವಲ್ಲ. ವರದಿ ನಂತರ ರಾಜ್ಯ ಸಚಿವ ಸಂಪುಟ ಸಾಧಕ ಬಾಧಕಗಳ ಬಗ್ಗೆ ತೀರ್ಮಾನ ಮಾಡಬೇಕು ಎಂದರು.
ಕೆಲವು ಸ್ವಾಮೀಜಿಗಳು ಸಿದ್ದರಾಮಯ್ಯ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಹಾವನೂರ್ ಆಯೋಗ ರಚಿಸಿದಾಗ ಪಂಚ ಪೀಠಾಧೀಶರು ವಿರೋಧ ಪಡಿಸದೇ ಸುಮ್ಮನೆ ಕುಳಿತಿದ್ದೇಕೆ ಎಂದು ಪ್ರಶ್ನಿಸಿದರು.
ಆಂದೋಲ ಮಠದ ಸ್ವಾಮೀಜಿ ಗದಗಿನ ತೋಂಟದಾರ್ಯ ಸ್ವಾಮೀಜಿ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ತೋಂಟದಾರ್ಯ ಶ್ರೀಗಳು ಜಾತಿ ರಹಿತ ಸಮಾಜ ನಿರ್ಮಾಣ ಮಾಡಲು ನಿರಂತರ ಹೋರಾಟ ಮಾಡುತ್ತಿದ್ದಾರೆ. ತುಮಕೂರಿನ ಸಿದ್ಧಗಂಗಾ ಶ್ರೀಗಳನ್ನು ಹೊರತು ಪಡಿಸಿ ಯಾವ ಸ್ವಾಮೀಜಿಯನ್ನೂ ದೇವರೆಂದು ನಾನು ನಂಬುವುದಿಲ್ಲ ಎಂದರು.
ಬಾಗೇವಾಡಿಯ ಶಿವ ಪ್ರಕಾಶ ಸ್ವಾಮೀಜಿ ಲಿಂಗಾಯತ ಹೆಣ್ಣು ಮಕ್ಕಳು ಕುಂಕುಮ, ತಾಳಿ ತೆಗೆದು ಹಾಕಲಿ ಎಂದು ಹೇಳಿದ್ದಾರೆ. ನಾವು ತಾಳಿ ತೆಗೆಸುತ್ತೇವೆ, ನೀವು ಚುನಾವಣೆ ಎದುರಿಸಿ ವಿಧಾನಸೌಧಕ್ಕೆ ಬನ್ನಿ ಎಂದು ಹೊರಟ್ಟಿ ಸವಾಲು ಹಾಕಿದರು.
ತಜ್ಞರ ಸಮಿತಿಗೆ ತೀರ್ಮಾನ ಮಾಡುವ ಅಧಿಕಾರವಿಲ್ಲ: ಜಾಮದಾರ್
“ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಕುರಿತು ರಾಜ್ಯ ಅಲ್ಪ ಸಂಖ್ಯಾತ ಆಯೋಗ ರಚಿಸಿರುವ ಸಮಿತಿಗೆ ಯಾವುದೇ ಧರ್ಮದ ಪರವಾಗಿ ಶಿಫಾರಸು ಮಾಡುವ ಅಧಿಕಾರ ಇಲ್ಲ’ ಎಂದು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ವೇದಿಕೆ ಸಂಚಾಲಕ ಎಸ್.ಎಂ. ಜಾಮದಾರ್ ಹೇಳಿದ್ದಾರೆ.
ತಜ್ಞರ ಸಮಿತಿ ದಾಖಲೆಗಳ ಆಧಾರದಲ್ಲಿ ವರದಿ ಸಿದ್ಧಪಡಿಸಿ ಅಲ್ಪ ಸಂಖ್ಯಾತ ಆಯೋಗಕ್ಕೆ ನೀಡುವ ಅಧಿಕಾರ ಮಾತ್ರ ಹೊಂದಿದೆ. ಸಮಿತಿ ನೀಡುವ ವರದಿ ಆಧರಿಸಿ ಅಲ್ಪ ಸಂಖ್ಯಾತ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಬಹುದು. ಆದರೆ, ರಾಜ್ಯ ಸರ್ಕಾರ ಆಯೋಗದ ವರದಿಯನ್ನು ಒಪ್ಪಿಕೊಳ್ಳಬೇಕೆಂದೇನಿಲ್ಲ. ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆದಷ್ಟು ಬೇಗ ಮಾನ್ಯತೆ ನೀಡಬೇಕೆಂದು ಸರ್ಕಾರಕ್ಕೆ ಯಾವುದೇ ಗಡುವು ನೀಡುವುದಿಲ್ಲ. ನಮ್ಮ ಹೋರಾಟಕ್ಕೆ ಸೂಕ್ತ ದಾಖಲೆಗಳಿವೆ. ಸರ್ಕಾರಕ್ಕೆ ಮನವರಿಕೆಯಾದ ಮೇಲೆಯೇ ನಮಗೆ ಮಾನ್ಯತೆ ನೀಡಲಿ. ನಮ್ಮದು ಚುನಾವಣೆಗಾಗಿ ಹೋರಾಟ ಅಲ್ಲ ಎಂದು ಜಾಮದಾರ್ ಹೇಳಿದರು.
ಸರ್ಕಾರಕ್ಕೆ ಅಧಿಕಾರ ಇದೆ: ವೀರಶೈವ ಅಥವಾ ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಅಲ್ಪ ಸಂಖ್ಯಾತ ಆಯೋಗದ ಸೆಕ್ಷನ್ 2ರ ಪ್ರಕಾರ ಸರ್ಕಾರಕ್ಕೆ ಒಂದು ಸಮುದಾಯ ಅಲ್ಪ ಸಂಖ್ಯಾತರು ಎಂದು ಮನವರಿಕೆಯಾದರೆ, ಅಲ್ಪ ಸಂಖ್ಯಾತರ ಸವಲತ್ತುಗಳು ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ ಎಂದು ಹೇಳಿದರು.
ವೀರಶೈವ ಹಾಗೂ ಲಿಂಗಾಯತರು ಒಗ್ಗಟ್ಟಾಗಿ ಬಂದರೆ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಈಗಲೂ ರಾಜ್ಯ ಸರ್ಕಾರ ಬದ್ಧವಾಗಿದೆ. ಒಗ್ಗಟ್ಟಾಗಿ ಬಂದರೆ ಪ್ರತ್ಯೇಕ ಧರ್ಮದ ಮಾನ್ಯತೆಯೊಂದಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಕೂಡ ಆ ಧರ್ಮಕ್ಕೆ ದೊರೆಯಲಿದೆ
-ಎಚ್. ಆಂಜನೇಯ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ
ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
Shimoga; ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ
ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ
Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ
MUST WATCH
ಹೊಸ ಸೇರ್ಪಡೆ
BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ
Rabkavi-Banhatti ಮೋದಿ ಪ್ರಧಾನಿ; ಹರಕೆ ತೀರಿಸಿದ ಅಭಿಮಾನಿ
Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್
ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ
ಗೋಕಾಕ ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.