ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರಿಗೆ ಪರಿಹಾರ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ
Team Udayavani, Jun 6, 2022, 10:06 PM IST
ಬೆಂಗಳೂರು: ರಾಜ್ಯದ ಸರಕಾರಿ ಪ್ರೌಢಶಾಲೆಗಳಲ್ಲಿ ಕೊರೊನಾ ವಾರಿಯರ್ಗಳಾಗಿ ಕಾರ್ಯ ನಿರ್ವಹಿಸಿ ಮೃತಪಟ್ಟಿರುವ ನೌಕರರಿಗೆ ಪರಿಹಾರ ನೀಡಲು 6.9 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ರಾಜ್ಯ ಸರಕಾರಿ ಪ್ರೌಢಶಾಲೆಗಳಲ್ಲಿ 2021-22ನೇ ಸಾಲಿನಲ್ಲಿ ಶಾಲೆಗಳ ನಿರ್ವಹಣೆಗೆ ಯಾವುದೇ ಅನುದಾನವನ್ನು ನಿಗದಿ ಮಾಡಿಲ್ಲ. ಇದರಿಂದಾಗಿ ವಿದ್ಯುತ್, ನೀರಿನ ವೆಚ್ಚ, ಶೌಚಾಲಯ ಸ್ವಚ್ಛತೆ ವೆಚ್ಚ, ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ನೌಕರರ ಶವ ಸಂಸ್ಕಾರಕ್ಕಾಗಿ ಸಹಾಯಧನ ಹಾಗೂ ಕೊರೊನಾ ವಾರಿಯರ್ಗಳಾಗಿ ಸೇವೆ ಸಲ್ಲಿಸಿ ಮೃತಪಟ್ಟಿರುವವರಿಗೆ ಪರಿಹಾರ ಕಲ್ಪಿಸಲು 29.25 ಕೋಟಿ ರೂ.ಗಳ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಅನುದಾನವನ್ನು 2022-23ನೇ ಸಾಲಿನಲ್ಲಿ ಪ್ರೌಢಶಾಲೆಗಳ ಸಾದಿಲ್ವಾರು ವೆಚ್ಚಕ್ಕಾಗಿ ಒಟ್ಟಾರೆ 24.76 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಇದರಲ್ಲಿಯೇ ಕೊರೊನಾದಿಂದ ಮೃತಪಟ್ಟ ಸರಕಾರಿ ನೌಕರರಿಗೂ ಪರಿಹಾರ ಧನ ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.