Mangaluru; ಯಾರ ರಕ್ತ ಪರೀಕ್ಷೆ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ: ಖರ್ಗೆ ತಿರುಗೇಟು
Team Udayavani, Apr 24, 2023, 6:41 PM IST
ಮಂಗಳೂರು: ಕಾಂಗ್ರೆಸ್ ಪಕ್ಷದ ತತ್ವ ಒಪ್ಪುವವರನ್ನು ನಾವು ಸ್ವಾಗತ ಮಾಡುತ್ತೇವೆ. ನಮ್ಮ ಪಕ್ಷವನ್ನ ನಿಯತ್ತಾಗಿ ಒಪ್ಪಿ, ನಾಯಕತ್ವ ಒಪ್ಪಿ ಬರುವವರಿಗೆ ಸ್ವಾಗತ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ‘ಶೆಟ್ಟರ್ ಅವರದ್ದು ಬಿಜೆಪಿ ರಕ್ತ, ಅವರು ಬಿಜೆಪಿಗೆ ವಾಪಾಸಾಗಲಿದ್ದಾರೆ’ ಎಂಬ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು. ‘ನಾನು ಭವಿಷ್ಯ ನುಡಿಯಲ್ಲ, ಯಾರ ರಕ್ತ ಪರೀಕ್ಷೆ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಪಕ್ಷದ ತತ್ವ, ನೀತಿ ಒಪ್ಪಿಕೊಂಡು ಬರುವವರಿಗೆ ಸ್ವಾಗತ ಇದೆ ಎಂದರು.
ಸಿದ್ದರಾಮಯ್ಯ ಲಿಂಗಾಯತ ಹೇಳಿಕೆಯಿಂದ ಬಿಜೆಪಿಗೆ ಲಾಭ ಎಂಬ ಸಿಎಂ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿ, ಹೇಳಿಕೆಯಿಂದ ಮತ ಬರುತ್ತದೆ ಅಂದರೆ ಅವರು ಏನೂ ಕೆಲಸ ಮಾಡಿಲ್ಲ ಎಂದರ್ಥ. ಕೆಲಸದಿಂದ ವೋಟ್ ಬರ್ತದೆ ಅಂತ ಬೊಮ್ಮಾಯಿ ಹೇಳಿಲ್ಲ. ಸಿದ್ದರಾಮಯ್ಯ ಹೇಳಿಕೆಯಿಂದ ಬರಲಿದೆ ಅಂದರೆ ಬಹಳ ಹತಾಶೆ ಎಂದರ್ಥ. ಸಹಜವಾಗಿ ಅವರು ಗೆಲ್ಲುವ ಸ್ಥಿತಿಯಲ್ಲಿ ಇಲ್ಲದೇ ಈ ರೀತಿ ಮಾತನಾಡುತ್ತಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಗರದ ಮೇರಿಹಿಲ್ ಹೆಲಿಪ್ಯಾಡ್ ನಲ್ಲಿ ಶಾಸಕ ಯು.ಟಿ.ಖಾದರ್, ವಿ.ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.