ಬೇಕಾದಲ್ಲಿ ಇಲ್ಲ ಬಸ್ ನಿಲ್ದಾಣ!
Team Udayavani, Nov 10, 2019, 4:13 AM IST
ದಿನಕ್ಕೆ ನೂರಾರು ಮಂದಿ ಬಸ್ಗಾಗಿ ಕಾಯುವ ಜಾಗಗಳಲ್ಲಿ ಬಸ್ ನಿಲ್ದಾಣ ಮಾಡುವ ಬದಲು ಯಾರೂ ಬಸ್ಗಾಗಿ ಕಾಯದ ಅನಗತ್ಯ ಸ್ಥಳಗಳಲ್ಲಿ ಬಸ್ ನಿಲ್ದಾಣಗಳನ್ನು ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸರಕಾರದ ಹಣವನ್ನು ದುಂದುವೆಚ್ಚ ಮಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಪಾದುವ ಕಾಲೇಜಿನ ಮುಂಭಾಗದಲ್ಲಿ ಈಗಾಗಲೇ ಬಸ್ ನಿಲ್ದಾಣವಿದೆ. ಇಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಬಸ್ಗಾಗಿ ಕಾಯುತ್ತಾರೆ. ಈ ಬಸ್ ನಿಲ್ದಾಣದ 150 ಮೀಟರ್ ಸಮೀಪದಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಿದೆ. ಇಲ್ಲಿ ಯಾವುದೇ ಬಸ್ ನಿಲ್ಲುವುದು ಇಲ್ಲ. ಜನರು ಕಾಯುವುದು ಇಲ್ಲ. ಬಸ್ ನಿಲ್ದಾಣಕ್ಕಾಗಿ ಸಾವಿರಾರು ರೂ. ನ್ನು ಪ್ರಾಧಿಕಾರ ಖರ್ಚು ಮಾಡಿದೆ. ಪ್ರಸ್ತುತ ಈ ಬಸ್ ನಿಲ್ದಾಣ ಭಿಕ್ಷುಕರಿಗೆ ಆಶ್ರಯ ನೀಡುವ ತಾಣವಾಗಿ ಬದಲಾಗಿದೆ. ಸಮೀಪದಲ್ಲೇ ಸುಸಜ್ಜಿತ ಬಸ್ ನಿಲ್ದಾಣ ಇದ್ದರೂ ಅದರ ಪಕ್ಕದಲ್ಲಿ ಹೊಸ ಬಸ್ ನಿಲ್ದಾಣ ಮಾಡುವ ಆವಶ್ಯಕತೆ ಏನಿತ್ತು ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ದಿನ ಕಳೆದಂತೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಕೊಡೆ ಹಿಡಿದು ಹೊರ ಹೋಗಲು ಹಿಂಜರಿಯುವ ಸ್ಥಿತಿ ಎದುರಾಗುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಪ್ಪಿನಮೊಗರು, ಎಕ್ಕೂರು, ಪಂಪ್ವೆಲ್ಗಳಲ್ಲಿ ದಿನಕ್ಕೆ ನೂರಾರು ಜನರು ಉರಿ ಬಿಸಿಲಲ್ಲೇ ಬಸ್ಗಾಗಿ ಕಾಯುವ ಸ್ಥಿತಿ ಎದುರಾಗಿದೆ. ಇಂತಹ ಸ್ಥಳಗಳಲ್ಲಿ ಬಸ್ ನಿಲ್ದಾಣಗಳನ್ನು ಮಾಡುವುದನ್ನು ಬಿಟ್ಟು ಅನಗತ್ಯ ಜಾಗಗಳಲ್ಲಿ ಬಸ್ ನಿಲ್ದಾಣಗಳನ್ನು ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಣ ಪೋಲು ಮಾಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.