ಆಗಸ್ಟ್ 1-7; ಜಾಗತಿಕ ಸ್ತನ್ಯಪಾನ ಸಪ್ತಾಹ


Team Udayavani, Aug 7, 2022, 11:29 AM IST

3

ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಮಕ್ಕಳ ಆರೋಗ್ಯವನ್ನು ಉತ್ತಮಗೊಳಿಸುವುದಕ್ಕಾಗಿ ವಿಶ್ವದ 120ಕ್ಕೂ ಹೆಚ್ಚು ದೇಶಗಳಲ್ಲಿ ಪ್ರತೀ ವರ್ಷ ಆಗಸ್ಟ್‌ 1-7ರ ವರೆಗೆ ಜಾಗತಿಕ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ.

ಈ ಸಪ್ತಾಹದ ಮೂಲಕ ಜನರಲ್ಲಿ ಸ್ತನ್ಯಪಾನದ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ಸ್ತನ್ಯಪಾನದ ಉಪಯೋಗದ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ಎದೆ ಹಾಲು ಹೊರತಪಡಿಸಿ ಇತರ ಹಾಲು/ನೀರು, ಆಹಾರ ನೀಡುವಿಕೆಯಿಂದ ಮಗುವಿನ ಆರೋಗ್ಯದ ಮೇಲೆ ಆಗುವ ಪರಿಣಾಮದ ಕುರಿತು ಮಾಹಿತಿ ನೀಡುವುದು ಮುಖ್ಯ ಉದ್ದೇಶವಾಗಿದೆ.

ʼಸ್ತನ್ಯಪಾನದ ಶಿಕ್ಷಣ ಮತ್ತು ಬೆಂಬಲಕ್ಕಾಗಿ ಹೆಜ್ಜೆ ಹಾಕೋಣ’- ಇದು 2022ರ ಸ್ತನ್ಯಪಾನ ಸಪ್ತಾಹದ ಘೋಷ ವಾಕ್ಯ. ಇದು ನವಜಾತ ಶಿಶುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಅಗತ್ಯವಾಗಿರುವ ಸ್ತನ್ಯಪಾನದ ಶಿಕ್ಷಣ ಮತ್ತು ಬೆಂಬಲ ನೀಡಲು ಪ್ರತಿಯೊಬ್ಬರು ಜತೆಯಾಗಿ ಹೆಜ್ಜೆ ಹಾಕುವ ಅಗತ್ಯದ ಕುರಿತ ಮಾಹಿತಿಯನ್ನು ನೀಡುತ್ತದೆ.

ತಾಯಿಯ ಎದೆ ಹಾಲು ಮಗುವಿಗೆ ಅತ್ಯುತ್ತಮ ಆಹಾರ. ನವಜಾತ ಶಿಶುಗಳಿಗೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳನ್ನೂ ತಾಯಿಯ ಎದೆಹಾಲು ಹೊಂದಿದೆ. ಇದು ಕೇವಲ ಪೌಷ್ಟಿಕ ಆಹಾರವಷ್ಟೇ ಅಲ್ಲ- ಅದು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಗುವಿಗೆ ಯಾವಾಗದಿಂದ ಎದೆಹಾಲು ನೀಡಲು ಪ್ರಾರಂಬಿಸಬೇಕು?

– ಮಗು ಜನಿಸಿದ ತತ್‌ಕ್ಷಣವೇ ಮಗುವಿಗೆ ತಾಯಿಯ ಎದೆಹಾಲು ನೀಡಲು ಪ್ರಾರಂಭಿಸಬೇಕು.

-ತಾಯಿ ಮತ್ತು ಮಗು ಸದಾ ಜತೆಯಲ್ಲಿರಬೇಕು. ಇದು ಎದೆಹಾಲು ಸರಾಗವಾಗಿ ಹರಿಯಲು ಸಹಾಯವಾಗುತ್ತದೆ.

-ಒಂದು ವೇಳೆ ಸಿಸೇರಿಯನ್‌ ಹೆರಿಗೆಯಾದಲ್ಲಿ ಶಸ್ತ್ರಚಿಕಿತ್ಸೆ ನಡೆದ 4 ಗಂಟೆಗಳ ಒಳಗೆ ಅಥವಾ ಅರಿವಳಿಕೆಯ ಪ್ರಭಾವ ಕಡಿಮೆಯಾದ ಅನಂತರ ಮಗುವಿಗೆ ಹಾಲುಣಿಸಬೇಕು.

– ಮಗುವಿಗೆ ದಿನಕ್ಕೆ 8 ರಿಂದ 10 ಸಲ ಹಾಲು ಉಣಿಸಬೇಕಾಗುತ್ತದೆ. ಆದರೆ ಗಂಟೆಗನುಸಾರವಾಗಿ ಹಾಲುಣಿಸುವ ಬದಲು ಮಗುವಿನ ಅಗತ್ಯಕ್ಕನುಸಾರವಾಗಿ ಹಾಲುಣಿಸುವುದು ಆವಶ್ಯಕ.

– ಮಗುವಿಗೆ 6 ತಿಂಗಳು ತುಂಬುವ ವರೆಗೆ ಕೇವಲ ಎದೆ ಹಾಲು ಮಾತ್ರ ನೀಡಬೇಕು. ಬೇರೆ ಯಾವುದೇ ಆಹಾರ/ನೀರನ್ನು ನೀಡುವ ಆವಶ್ಯಕತೆ ಇರುವುದಿಲ್ಲ. ಮಗುವಿಗೆ ಬೇಕಾಗಿರುವ ನೀರಿನ ಅಂಶಗಳು ಎದೆಹಾಲಿನಲ್ಲಿನಲ್ಲಿಯೇ ಇರುತ್ತವೆ.

-6 ತಿಂಗಳ ಬಳಿಕ ಮಗುವಿನ ಬೆಳವಣಿಗೆಗೆ ಪೂರಕ ಆಹಾರದ ಆವಶ್ಯಕತೆ ಇರುತ್ತದೆ. ಪೂರಕ ಆಹಾರದೊಂದಿಗೆ ಮಗುವಿಗೆ 2 ವರ್ಷದವರೆಗೆ ಎದೆ ಹಾಲು ನೀಡುವುದನ್ನು ಮುಂದುವರಿಸಬೇಕು.

– ತಾಯಿಯು ಅನಾರೋಗ್ಯದಿಂದ ಬಳಲುತ್ತಿದ್ದರೂ ತನ್ನ ಮಗುವಿಗೆ ಹಾಲುಣಿಸಬಹುದು.

ಕೊಲೋಸ್ಟ್ರಂ

ಕೊಲೋಸ್ಟ್ರಂ ಎನ್ನುವುದು ಹೆರಿಗೆಯಾದ ಮೊದಲ 2-3 ದಿನಗಳಲ್ಲಿ ತಾಯಿ ಸ್ರವಿಸುವಂತಹ ವಿಶೇಷ ಹಾಲು. ಈ ಹಾಲು ಹಳದಿ ಮಿಶ್ರಿತ ಬಣ್ಣದಲ್ಲಿದ್ದು, ಸ್ವಲ್ಪವೇ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಕೊಲೊಸ್ಟ್ರಂಯುಕ್ತ ಹಾಲು, ಬಿಳಿಯ ರಕ್ತಕಣಗಳು ಮತ್ತು ರೋಗನಿರೋಧಕ ಅಂಶಗಳಿಂದ ಸಮೃದ್ಧವಾಗಿರುತ್ತದೆ. ಇದರಲ್ಲಿ ಪ್ರೋಟೀನ್‌, ಖನಿಜಾಂಶಗಳು ಮತ್ತು ಕೊಬ್ಬಿನಲ್ಲಿ ಕರಗುವಂತಹ ವಿಟಾಮಿನ್‌ಗಳು (ವಿಟಾಮಿನ್‌ ಎ, ಈ ಮತ್ತು ಕೆ) ವಿಶೇಷ ಪ್ರಮಾಣದಲ್ಲಿರುತ್ತವೆ. ಹಾಗಾಗಿ ಮಗು ಜನಿಸಿದ ಕೂಡಲೇ ಕೊಲೆಸ್ಟ್ರಂ ಹೊಂದಿರುವ ತಾಯಿಯ ಹಾಲನ್ನು ಮಗುವಿಗೆ ನೀಡಬೇಕು. ಕೋಲೋಸ್ಟ್ರಂಯುಕ್ತ ಹಾಲು ಕುಡಿಸುವುದರಿಂದ ಮಗುವಿಗೆ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ. ಸಾಮಾನ್ಯ ಎದೆಹಾಲಿಗಿಂತ ಈ ಹಾಲು ಬಣ್ಣ ಹಾಗೂ ಪ್ರಮಾಣದಲ್ಲಿ ಭಿನ್ನವಾಗಿರುವುದರಿಂದ ಕೆಲವರು ಈ ಹಾಲನ್ನು ಮಗುವಿಗೆ ನೀಡದೇ ಎಸೆಯುತ್ತಾರೆ. ಅದರ ಬದಲಾಗಿ ನೀರು, ದನದ ಹಾಲು, ಜೇನು ತುಪ್ಪ, ಕಷಾಯಗಳನ್ನು ನೀಡುವ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಪದ್ಧತಿಯನ್ನು ಅನುಸರಿಸುವುದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇದು ಒಳ್ಳೆಯ ಅಭ್ಯಾಸವಲ್ಲ.

ಸ್ತನ್ಯಪಾನದಿಂದ ಮಗುವಿಗೆ ಆಗುವ ಪ್ರಯೋಜನಗಳು:

-ನವಜಾತ ಶಿಶುವಿಗೆ 6 ತಿಂಗಳುಗಳ ಕಾಲ ಆವಶ್ಯಕ ಇರುವ ಕೊಬ್ಬು, ಕಾಬೋìಹೈಡ್ರೇಟ್‌, ಪ್ರೊಟೀನ್‌, ವಿಟಾಮಿನ್‌, ಖನಿಜಾಂಶಗಳು ಮತ್ತು ನೀರು ಹೀಗೆ ಎಲ್ಲ ಅಂಶಗಳನ್ನು ತಾಯಿಯ ಎದೆಹಾಲು ಒಳಗೊಂಡಿರುತ್ತದೆ.

-ಸ್ತನ್ಯಪಾನವು ಮಗುವಿಗೆ ವಿವಿಧ ರೀತಿಯ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ. ಇತರ ಹಾಲು ಮಗುವಿಗೆ ಜೀರ್ಣಿಸಿಕೊಳ್ಳುವುದು ಕಷ್ಟ, ಮತ್ತು ಅಲರ್ಜಿಗೆ ಕಾರಣವಾಗುತ್ತದೆ. ಮಗುವಿಗೆ ಎದೆಹಾಲನ್ನು ಜೀರ್ಣಿಸಿಕೊಳ್ಳುವುದು ಬಹಳ ಸುಲಭ. ಇದು ವಾಂತಿ ಬೇಧಿ ಸಮಸ್ಯೆಯಿಂದ ಮಗುವನ್ನು ರಕ್ಷಿಸುತ್ತದೆ. ಇದರಿಂದ ಮಲಬದ್ಧತೆಯುಂಟಾಗುವುದಿಲ್ಲ.

-ಎದೆಹಾಲು ನೀಡುವುದರಿಂದ ಮಗು ಸೋಂಕುಗಳಿಗೆ ತುತ್ತಾಗದಂತೆ ರಕ್ಷಣೆ ನೀಡುವುದರೊಂದಿಗೆ ಮುಂದೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ.

-ತಾಯಿಯ ಎದೆಹಾಲು ಸೇವನೆಯಿಂದ ಮಕ್ಕಳ ಬುದ್ಧಿ ಶಕ್ತಿ ಮತ್ತು ಗೃಹಣ ಶಕ್ತಿಯ ಬೆಳವಣಿಗೆಗೆ ಸಹಾಯವಾಗುತ್ತದೆ.

-ತಾಯಿಯ ಎದೆಹಾಲು ಸೇವಿಸುವುದರಿಂದ ಮಗುವಿನಲ್ಲಿ ಬೊಜ್ಜುತನ ಕಂಡುಬರುವ ಸಾಧ್ಯತೆ ಕಡಿಮೆ.

– ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿನ ನಡುವೆ ಬಾಂಧವ್ಯ ಹೆಚ್ಚಾಗುತ್ತದೆ.

ಸ್ತನ್ಯಪಾನದಿಂದ ತಾಯಿಗೆ ಆಗುವ ಪ್ರಯೋಜನಗಳು

-ಎದೆಹಾಲು ಕುಡಿಸುವ ತಾಯಂದಿರಿಗೆ ಸ್ತನ ಕ್ಯಾನ್ಸರ್‌ ಹಾಗೂ ಗರ್ಭಕೋಶದ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

-ಹೆರಿಗೆಯ ಅನಂತರ ತೀವ್ರ ರಕ್ತಸ್ರಾವ ಆಗುವುದರ ಅಪಾಯವನ್ನು ಕಡಿಮೆ ಮಾಡುತ್ತದೆ.

-ಹಾಲುಣಿಸುವಾಗ ಬಿಡುಗಡೆಯಾಗುವ ಹಾರ್ಮೋನ್‌ಗಳಿಂದ ಮಗುವಿನ ಹೆರಿಗೆಯ ವೇಳೆ ಹಿಗ್ಗಿದ ಗರ್ಭಕೋಶವು ಸಾಮಾನ್ಯ ಸ್ಥಿತಿಗೆ ಬರಲು ಸಹಾಯವಾಗುತ್ತದೆ.

-ಮಗುವಿಗೆ 6 ತಿಂಗಳು ಕೇವಲ ಎದೆ ಹಾಲು ನೀಡುವುದರಿಂದ ಮತ್ತೂಂದು ಗರ್ಭಧಾರಣೆಯನ್ನು (6 ತಿಂಗಳು) ತಡೆಯುತ್ತದೆ.

-“ಆಸ್ಟಿಯೊಪೊರೊಸಿಸ್‌” -ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಯಿಂದ ತಾಯಿಯನ್ನು ರಕ್ಷಿಸಲು ಸ್ತನ್ಯಪಾನ ಸಹಾಯ ಮಾಡುತ್ತದೆ.

-ಗರ್ಭಾವಸ್ಥೆಯಲ್ಲಿ ಉಂಟಾದ ಬೊಜ್ಜನ್ನು ನಿವಾರಿಸಲು ಸ್ತನ್ಯಪಾನ ಸಹಾಯ ಮಾಡುತ್ತದೆ.

-ತಾಯಿಗೆ ರಕ್ತದೊತ್ತಡ, ಕೊಲೆಸ್ಟ್ರಾಲ್‌ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ತಾಯಿಯ ಒತ್ತಡ ಮಟ್ಟವನ್ನು ಮತ್ತು ಹೆರಿಗೆಯ ಬಳಿಕದ ಖನ್ನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಗುವಿಗೆ ಎದೆಹಾಲುಣಿಸುವ ವಿಧಾನ

-ಎದೆಹಾಲು ನೀಡುವ ಮುನ್ನ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.

-ಬೆನ್ನಿಗೆ ಆಧಾರ ನೀಡುವ ಆರಾಮದಾಯಕ ಕುರ್ಚಿ ಅಥವಾ ದಿಂಬನ್ನು ಇಟ್ಟುಕೊಂಡು ಮಗುವನ್ನು ಮಲಗಿಸಿ ಹಾಲು ಕುಡಿಸಬೇಕು.

-ಮಗುವಿಗೆ ಹಾಲುಣಿಸುವ ಮೊದಲು ಸ್ತನವನ್ನು ನಿಧಾನವಾಗಿ ಮತ್ತು ಮೃದುವಾಗಿ ಮಸಾಜ್‌ ಮಾಡಿಕೊಳ್ಳಬೇಕು.

-ಸಾಮಾನ್ಯವಾಗಿ ಒಮ್ಮೆ ಕನಿಷ್ಠ 20 ನಿಮಿಷಗಳ ಕಾಲ ಎದೆ ಹಾಲು ನೀಡಬೇಕು. ಇದರಿಂದ ತಾಯಿಯ ಎದೆ ಹಾಲಿನ ಪ್ರಮಾಣ ಜಾಸ್ತಿಯಾಗಲು ಸಹಾಯವಾಗುತ್ತದೆ.

-ಪ್ರತೀ ಬಾರಿ ಹಾಲು ನೀಡುವಾಗ ಒಂದು ಸ್ತನದಲ್ಲಿರುವ ಹಾಲು ಪೂರ್ತಿ ಖಾಲಿಯಾದ ಬಳಿಕ ಮತ್ತೂಂದು ಸ್ತನದ ಹಾಲು ನೀಡಬೇಕು.

-ಎದೆಹಾಲು ನೀಡುವಾಗ ಮಗುವಿನ ಶರೀರ ಎದೆ ಮುಂಭಾಗದಲ್ಲಿದ್ದು ಮಗುವಿನ ಹೊಟ್ಟೆ ತಾಯಿಯ ಹೊಟ್ಟೆಗೆ ತಾಗಿಕೊಂಡಿರಬೇಕು. ಮಗುವಿನ ತಲೆ, ಬೆನ್ನು, ನೇರವಾಗಿರಬೇಕು.

-ಮಗು ಎದೆಹಾಲು ಚೀಪುವಾಗ ಕೇವಲ ಸ್ತನದ ತೊಟ್ಟು ಮಾತ್ರವಲ್ಲ, ಸ್ತನದ ಕಪ್ಪಿನ ಭಾಗವನ್ನು ಪೂರ್ತಿಯಾಗಿ ತನ್ನ ಬಾಯಿ ಯೊಳಗೆ ತೆಗೆದುಕೊಂಡಿರಬೇಕು.

-ತಾಯಿಗೆ ಮಗು ಹಾಲು ನುಂಗುವ ಶಬ್ದ ಕೇಳುತ್ತಿರಬೇಕು.

-ಮಗು ಸರಿಯಾಗಿ ಎದೆ ಹಾಲು ಕುಡಿಯುತ್ತಿದೆಯೇ ಎಂದು ಆಗಾಗ್ಗೆ ಗಮನಿಸುತ್ತಿರಬೇಕು.

-ಎದೆ ಹಾಲು ನೀಡಲು ಬಾಟಲಿ ಅಥವಾ ಇತರ ಕ್ರತಕ ವಸ್ತುಗಳನ್ನು ಬಳಸುವುದನ್ನು ತಪ್ಪಿಸಬೇಕು.

ತಾಯಿಯ ಎದೆಹಾಲು ಮಗುವಿಗೆ ಸಾಕಾಗುವಷ್ಟು ದೊರೆಯುತ್ತಿದೆಯೇ ಇಲ್ಲವೇ ಎಂದು ತಿಳಿಯುವುದು ಹೇಗೆ?

-ಸರಿಯಾಗಿ ಎದೆ ಹಾಲು ಕುಡಿದ ಮಗು ದಿನಕ್ಕೆ ಕನಿಷ್ಠ 6-8 ಬಾರಿ ಮೂತ್ರ ಮಾಡುತ್ತದೆ.

-ಮಗು ವಿಸರ್ಜಿಸುವ ಮಲವು ಹಳದಿ ಬಣ್ಣದಿಂದ ಕೂಡಿರುತ್ತದೆ.

-ಮಗುವಿನ ತೂಕದಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತದೆ.

-ಮಗು ಚೆನ್ನಾಗಿ ನಿದ್ರಿಸುತ್ತದೆ.

ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ. ಆದ್ದರಿಂದ ಪ್ರತಿಯೊಬ್ಬ ತಾಯಿ ತಮ್ಮ ಮಗುವಿಗೆ 6 ತಿಂಗಳ ವರೆಗೆ ಕೇವಲ ಎದೆಹಾಲು ಮಾತ್ರ ನೀಡಬೇಕು. 6 ತಿಂಗಳ ಬಳಿಕ ಮಗುವಿನ ಬೆಳವಣಿಗೆಗೆ ಪೂರಕ ಆಹಾರದ ಆವಶ್ಯಕತೆ ಇರುತ್ತದೆ. ಪೂರಕ ಆಹಾರದೊಂದಿಗೆ ಮಗುವಿಗೆ 2 ವರ್ಷದ ವರೆಗೆ ಎದೆ ಹಾಲು ನೀಡುವುದನ್ನು ಮುಂದುವರಿಸಬೇಕು. 6 ತಿಂಗಳ ಬಳಿಕ ಪೂರಕ ಆಹಾರ ಜತೆಗೆ ಮಗುವಿನ ಉತ್ತಮ ಆರೋಗ್ಯಕ್ಕಾಗಿ ವಯಸ್ಸಿಗನುಗುಣವಾಗಿ ಸರಕಾರದ ವೇಳಾಪಟ್ಟಿಯಲ್ಲಿರುವ ಲಸಿಕೆ, ಚುಚ್ಚುಮದ್ದುಗಳನ್ನು ತಪ್ಪದೇ ನೀಡುವುದು ಆವಶ್ಯಕ.

ಟಾಪ್ ನ್ಯೂಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.