ಇಂಗ್ಲಿಷ್ ಹರಿಕಥೆ
Team Udayavani, Jan 19, 2019, 12:00 AM IST
ಹಿಂದೆಲ್ಲಾ ಹರಿಕಥೆ ಕೇಳಲು ಸಾವಿರಾರು ಮಂದಿ ಬರುತ್ತಿದ್ದರು. ಅಚ್ಯುತದಾಸರು, ಗುರು ರಾಜಲು ನಾಯ್ಡು, ಕೊಣನೂರು ಶಾಮಾ ಶಾಸ್ತ್ರೀಗಳು ಸೇರಿದಂತೆ ಹಲವು ಮಹನೀಯರು, ಹೇಳಬೇಕೆಂದರೆ ಸೂಪರ್ಸ್ಟಾರ್ಗಳೇ ಆಗಿದ್ದರು. ಇಂದು “ಹರಿಕಥೆ’ ಎನ್ನುವ ಪದದ ಅರ್ಥವೇ ಬೇರೆಯಾಗಿಬಿಟ್ಟಿದೆ. ಈ ದಿನಗಳಲ್ಲೂ ಹರಿಕಥೆ ಕಲಾಪ್ರಕಾರದ ಮಹತ್ವ ಉಳಿದು ಕೊಳ್ಳುವುದಕ್ಕೆ ಕಾರಣ ವೀಣಾ ಮೋಹನ್ರಂಥವರು. ಅಮೆರಿಕ ನಿವಾಸಿಯಾಗಿರುವ ಅವರು ಅಮೆರಿಕದಾದ್ಯಂತ ಹರಿಕಥೆಯನ್ನು ಪ್ರಚುರಪಡಿಸುತ್ತಿದ್ದಾರೆ. ವೃತ್ತಿಯಲ್ಲಿ ವಾಕ್-ಶ್ರವಣ ತಜ್ಞೆಯಾಗಿರುವ ಅವರು “ಭಕ್ತ ಪ್ರಹ್ಲಾದ’, “ಮಾಯಾಬಜಾರ್’, “ರುಕ್ಮಿಣಿ ಕಲ್ಯಾಣ’, “ಭೀಷ್ಮ ಪಿತಾಮಹ’, “ದಾನಶೂರ ಕರ್ಣ’, “ಪುರಂದರದಾಸರು’, “ಭೂ ಕೈಲಾಸ’, “ಸೀತಾ ಕಲ್ಯಾಣ’ ಮುಂತಾದ ಹರಿಕಥಾ ಪ್ರದರ್ಶನಗಳನ್ನು ನೀಡಿದ್ದಾರೆ.
ಕೆಣಕಿದವರೇ ಸ್ಫೂರ್ತಿ
ಆರೇಳು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಗಾಯನ ಸಮಾಜದಲ್ಲಿ ಹರಿಕಥೆ ಕಾರ್ಯಕ್ರಮವೊಂದು ನಡೆದಿತ್ತು. ಪುರಂದರದಾಸರ ಕುರಿತಾದ ಹರಿಕಥೆ ಮಾಡಲು ಬಂದಿದ್ದವರು ತಮಿಳುನಾಡಿನವರು. ಕಾರ್ಯಕ್ರಮ ಶ್ರೋತೃಗಳಿಂದ ಕಿಕ್ಕಿರಿದು ತುಂಬಿತ್ತು. ಕಾರ್ಯಕ್ರಮ ಶುರುವಾಗುವುದಕ್ಕೆ ಮುನ್ನ ಜನಪ್ರಿಯರೂ ಮತ್ತು ಪ್ರತಿಭಾನ್ವಿತರೂ ಆಗಿದ್ದ ಆ ಮಹಾಶಯರು ಒಂದು ಮಾತು ಹೇಳಿದರು. “ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಗೀತೆಗಳು ಕನ್ನಡದಲ್ಲಿವೆ. ನನಗೆ ಕನ್ನಡ ಸರಿಯಾಗಿ ಬಾರದು. ಆದ್ದರಿಂದ ಉಚ್ಛಾರಣೆಯಲ್ಲಿ ದೋಷವಾದರೆ ಕ್ಷಮಿಸಿ. ಈ ಪದಗಳನ್ನು ಹಾಡಲು ಇಲ್ಲಿ ಯಾರೂ ಇಲ್ಲವೇನೋ ಗೊತ್ತಿಲ್ಲ, ತಮಿಳುನಾಡಿನಿಂದ ನನ್ನನ್ನು ಕರೆಸಿದ್ದಾರೆ.’ ಅವರ ಈ ಮಾತನ್ನು ಕೇಳಿ ಅಲ್ಲಿ ನೆರೆದಿದ್ದ ಕನ್ನಡಿಗರಿಗೆ ಚಾಟಿ ಏಟು ಬೀಸಿದ ಹಾಗಾಗಿತ್ತು. ಎದುರಿನ ಸಾಲಿನಲ್ಲಿ ಕೂತಿದ್ದ ವೀಣಾ ಮೋಹನ್ ಅವರಂತೂ ದಿಗ್ಭ್ರಮೆಗೊಂಡಿದ್ದರು. ಈ ಘಟನೆಯನ್ನು ಅವರು ಅಮೆರಿಕದ ಗೆಳೆಯರ ವಾಟ್ಸಾéಪ್ ಗ್ರೂಪಿನಲ್ಲಿ ಹಂಚಿಕೊಂಡಿದ್ದರು. ಗೆಳತಿಯೊಬ್ಬಳು “ದೂರು ಹೇಳ್ಳೋದು ತುಂಬಾ ಸುಲಭ, ನೀನು ಮಾಡಿ ತೋರಿಸು ನೋಡೋಣ…’ ಎಂದುಬಿಟ್ಟರು. ಸವಾಲನ್ನು ಸ್ವೀಕರಿಸಿದ ವೀಣಾ, ತಿಂಗಳುಗಳ ಕಾಲ ಅಧ್ಯಯನ ನಡೆಸಿ, ಅದೇ ಗೆಳತಿಯ ಮನೆಯಲ್ಲಿ ಮೊಟ್ಟಮೊದಲ ಬಾರಿಗೆ ಹರಿಕಥೆ “ಗಜಗೌರಿ ವ್ರತ’ವನ್ನು ನಡೆಸಿಕೊಟ್ಟಿದ್ದರು. ಇಂದು ವೀಣಾ ಅವರು ಅಮೆರಿಕದಾದ್ಯಂತ ಕರ್ನಾಟಕದ ಹರಿಕಥೆ ಸಂಸ್ಕೃತಿಯನ್ನು ಪಸರಿಸುತ್ತಿದ್ದಾರೆ.
ಮಂಗಳ ಹಾಡಿದ ಮೇಲೂ…ಶ್ರೋತೃಗಳು ಇಷ್ಟಪಟ್ಟರೆ ಅದೇ ದೊಡ್ಡ ಸ್ಫೂರ್ತಿ, ಪ್ರಶಸ್ತಿ, ಬಿರುದು ಸಮ್ಮಾನ ಎನ್ನುವುದು ವೀಣಾ ಅವರ ಅಭಿಪ್ರಾಯ. ಇದಕ್ಕೆ ಪೂರಕವಾಗಿ ರಾಜರಾಜೇಶ್ವರಿನಗರದಲ್ಲಿ ನಡೆದ ಹರಿಕಥಾ ಪ್ರಸಂಗವೊಂದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಕಲಾಸಂಪದ ತಂಡದವರು ಆಯೋಜಿಸಿದ್ದ ಆ ಕಾರ್ಯಕ್ರಮದಲ್ಲಿ ವೀಣಾ ಅವರು “ಲವ ಕುಶ’ವನ್ನು ಪ್ರಸ್ತುತಪಡಿಸಿದ್ದರು. ಕಡೆಯಲ್ಲಿ ಸೀತಾ ಮಾತೆ ಭೂಮಿಯಡಿ ಸೇರಿಕೊಳ್ಳುತ್ತಾಳೆ. ರಾಮ ತೀವ್ರ ದುಃಖೀತನಾಗಿ ವೇದನೆ ಪಡುತ್ತಾನೆ. ಇದಾಗಿ ಮಂಗಳ ಹಾಡಿದರೂ ಕುಳಿತಿದ್ದವರೊಬ್ಬರೂ ಮೇಲೇಳಲಿಲ್ಲ. ವೀಣಾ ಅವರೇ “ಹರಿಕಥೆ ಮುಗಿಯಿತು’ ಎಂದ ಮೇಲೂ ಯಾರೂ ಏಳುತ್ತಿಲ್ಲ. ಒಬ್ಬರು “ಯಾಕೋ ಹರಿಕಥೆ ಮುಗೀತು ಅಂತಾನೇ ಅನ್ನಿಸಲಿಲ್ಲ ಮೇಡಂ. ತುಂಬಾ ಅಳು ಬರಿ¤ತ್ತು. ಅದ್ಕೆ ಕೂತೇ ಇದ್ವಿ’ ಎಂದಾಗ ವೀಣಾ ಅವರಿಗೆ ಹರಿಕಥೆ ಮಾಡಲು ಅಮೆರಿಕದಿಂದ ಬಂದಿದ್ದಕ್ಕೂ ಸಾರ್ಥಕ ಅನ್ನಿಸಿದ ಕ್ಷಣವಿದು. “ಹರಿಕಥಾ ವಿದ್ವಾನ್ ಅಚ್ಯುತದಾಸರು, ಪಾತ್ರವನ್ನು ಕಣ್ಣ ಮುಂದೆ ತಂದು ನಿಲ್ಲಿಸಬೇಕು ಎನ್ನುತ್ತಿದ್ದರು. ಅವರ ಮಾತನ್ನು ನಿಜಗೊಳಿಸೋ ಪ್ರಯತ್ನ ನನ್ನದು’ ಎನ್ನುತ್ತಾರವರು.
ಇಂಗ್ಲಿಷ್ನಲ್ಲಿ ಹರಿಕಥೆ
ಹರಿಕಥೆ ಕನ್ನಡ ನಾಡಿನ ಸಂಸ್ಕೃತಿಯ ಭಾಗ. ಪೌರಾಣಿಕವಾಗಿ, ಐತಿಹಾಸಿಕವಾಗಿ ಭಾರತೀಯರಿಗೆ ಸುಲಭವಾಗಿ ಕನೆಕ್ಟ್ ಆಗುವ ಕಲಾಪ್ರಕಾರವಿದು. ವೀಣಾ ಅವರು ನಮ್ಮ ಹರಿಕಥೆಯನ್ನು ಇಂಗ್ಲಿಷಿಗೆ ತರ್ಜುಮೆಗೊಳಿಸಿ ಕನ್ನಡಿಗರಲ್ಲದವರ ಮುಂದೆ ನಮ್ಮ ಸಂಸ್ಕೃತಿಯನ್ನು ಪ್ರಚುರಪಡಿಸುತ್ತಿದ್ದಾರೆ. ಅಮೆರಿಕದಲ್ಲಿ ಅವರ ಇಂಗ್ಲಿಷ್ ಹರಿಕಥೆ ಕೇಳಲು ಕನ್ನಡಿಗರು ಮಾತ್ರವಲ್ಲದೆ, ತಮಿಳರು, ತೆಲುಗರು, ಉತ್ತರ ಭಾರತೀಯರು ಮತ್ತು ಶ್ರೀಲಂಕನ್ನರೂ ಬರುತ್ತಾರಂತೆ. ಹರಿಕಥೆಯ ಮೂಲಕ ವೀಣಾರವರು ಭಾರತೀಯರನ್ನು ಒಗ್ಗೂಡಿಸುವ ಕೆಲಸದಲ್ಲೂ ನಿರತರಾಗಿದ್ದಾರೆ. ಆದರೂ ಯಾವುದೇ ಭಾಷೆಗೆ ತರ್ಜುಮೆ ಮಾಡಿದರೂ ಕನ್ನಡದಲ್ಲಿನ ಸೊಬಗು ಬೇರೆ ಭಾಷೆಯಲ್ಲಿ ಮೂಡಿ ಬರುವುದಿಲ್ಲ. ಯಾವ ಕಲಾಪ್ರಕಾರವೇ ಆದರೂ ಆಡುಭಾಷೆಯಲ್ಲೇ ಚೆನ್ನ ಎನ್ನುವುದು ಅವರ ಅನುಭವದ ಮಾತು.
ಕಡಲಾಚೆಯೂ ವೀಣಾ ಹರಿಕಥಾ ಪ್ರಸಂಗ
ಹರಿಕಥೆಯನ್ನು ಹೇಗೋ ಕಷ್ಟಪಟ್ಟು ಇಂಗ್ಲಿಷಿಗೆ ಅನುವಾದಿಸಿಬಿಡಬಹುದು. ಬೆಣ್ಣೆಯನ್ನು ನೋಡ್ತಿದ್ದ ಹಾಗೇ ಕೃಷ್ಣನ ಬಾಯಲ್ಲಿ ಜೊಲ್ಲು ಸುರೀತು. ಇದನ್ನು “ಕೃಷ್ಣಾಸ್ ಮೌತ್ ವಾಟರ್x’ ಅಂತೇನೋ ಹೇಳಿ ಮುಗಿಸಬಹುದು. ಆದರೆ ಕನ್ನಡ ಭಾಷೆ ಕೊಡುವ ಅನುಭೂತಿ, ಅರ್ಥವನ್ನು ಇಂಗ್ಲಿಷ್ ಕೊಡುವುದಿಲ್ಲ.
ವೀಣಾ ಮೋಹನ್
ಈ ವಾರಾಂತ್ಯ ವೀಣಾ ಅವರ “ಪುರಂದರದಾಸರು’ ಹರಿಕಥಾ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿದೆ.
ಎಲ್ಲಿ?: ರಂಗಂ ಶ್ರೀಮದ್ ಆಂಡವನ್ ಆಶ್ರಮ,
ಶೇಷಾದ್ರಿಪುರಂ
ಯಾವಾಗ?: ಜ. 20, ಭಾನುವಾರ, ಬೆಳಿಗ್ಗೆ 11
ಹರ್ಷವರ್ಧನ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ