ಎರ್ಮಾಯಿ ಎಂಬ ಅಜ್ಞಾತ ಸುಂದರಿ
Team Udayavani, Jul 22, 2017, 12:16 PM IST
ಮಳೆಗಾಲ ಬಂತೆಂದರೆ ಸಾಕು. ಮಳೆಗಾಲದುದ್ದಕ್ಕೂ ಪ್ರಕೃತಿಗೆ ಹಬ್ಬ. ಪ್ರಕೃತಿ ಮಾತೆ ಹಚ್ಚಹಸುರಿನಿಂದ ಕಂಗೊಳಿಸುತ್ತಾಳೆ. ಬತ್ತಿ ಹೋಗಿದ್ದ ನದಿತೊರೆಗಳು ಜೀವ ಪಡೆಯುತ್ತವೆ.ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ ಒಂದು ಖುಷಿ. ಮನಸ್ಸಿಗೆ, ಕಣ್ಣಿಗೆ ಆಹ್ಲಾದ ನೀಡುವ ಜಲಪಾತಗಳು ಆಗ ನಮಗೆ ಕಾಣ ಸಿಗುತ್ತವೆ.ಅಂಥವುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರ್ಮಾಯಿ ಜಲಪಾತವೂ ಒಂದು.
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಸಮೀಪದ ಎರ್ಮಾಯಿ ಎಂಬಲ್ಲಿ ದಟ್ಟ ಕಾನನದ ನಡುವೆ ಸುಮಾರು 80 ಅಡಿ ಎತ್ತರದಿಂದ ಕಲ್ಲುಬಂಡೆಗಳ ನಡುವೆ ಧುಮ್ಮಿಕ್ಕುವ ಈ ಜಲಧಾರೆಯನ್ನು ನೋಡುವುದೇ ಒಂದು ಹಬ್ಬ. ಒಂದು ಕಡೆ ಆಕಾಶದೆತ್ತರ ಬೆಳೆದು ನಿಂತ ಮರಗಳು,ಹಚ್ಚ ಹಸುರಿನ ಪ್ರಕೃತಿ, ಇನ್ನೊಂದು ಕಡೆ ಜೀರುಂಡೆಗಳ ಕಲರವ, ಮತ್ತೂಂದು ಕಡೆ ಮನಸ್ಸಿಗೆ ಖುಷಿ ನೀಡುವ ಜಲಧಾರೆ. ಈ ಎಲ್ಲ ಅನುಭವಗಳನ್ನು ಒಂದೇ ಕಡೆ ಪಡೆಯಬೇಕೆಂದರೆ ನೀವು ಎರ್ಮಾಯಿಗೆ ಬರಲೇಬೇಕು.
ಎರ್ಮಾಯಿ ಎಂಬ ಹೆಸರು ಬಂದಿದ್ದು ಹೇಗೆ?
ಎಳುವರೆ ಹಳ್ಳ ಎಂಬ ಜಾಗ ಈ ಜಲಪಾತದ ಉಗಮ ಸ್ಥಾನ.ಹಿಂದೆ ಏಳು ಜನ ಯುವಕರು ಗದ್ದೆ ಉಳುಮೆ ಮಾಡಿ ಎತ್ತುಗಳನ್ನು ಇದೇ ಜಾಗದಲ್ಲಿ ತೊಳೆಯುತ್ತಿದ್ದರಂತೆ. ಹೀಗೆ ಎತ್ತುಗಳನ್ನು ತೊಳೆಯುತ್ತಿದ್ದಾಗ ಎತ್ತುಗಳು ಇದ್ದಕ್ಕಿದ್ದಂತೆ ಮಾಯವಾದವಂತೆ. ತುಳುವಿನಲ್ಲಿ ಎತ್ತಿಗೆ ಎರು ಎಂದು ಕರೆಯುವ ಕಾರಣಕ್ಕೆ ಈ ಜಾಗಕ್ಕೆ ಎರು ಮಾಯ ಎಂಬ ಹೆಸರು ಬಂತಂತೆ. ಕ್ರಮೇಣ ಜನರ ಬಾಯಲ್ಲಿ ಹೀಗೆ ಕರೆಯಲ್ಪಟ್ಟು ಕಡೆಗೆ ಎರ್ಮಾಯಿ ಎಂದಾಯಿತಂತೆ.
ಬೆಳ್ತಂಗಡಿಯಿಂದ ಕಾಜೂರಿಗೆ ತೆರಳುವ ಹಾದಿಯಲ್ಲಿ ಬಂದು ಕಾಜೂರಿನಲ್ಲಿ ಇಳಿದು ಕಾಡುದಾರಿಯಲ್ಲಿ 2 ಕಿ.ಮೀ ಕ್ರಮಿಸಿದರೆ ಎರ್ಮಾಯಿ ಜಲಪಾತ ತಲುಪಬಹುದು. ಈ ಜಲಪಾತಕ್ಕೆ ಹೋಗುವುದೇ ಒಂದು ಚಾರಣದ ಅನುಭವವನ್ನು ನೀಡುತ್ತದೆ. ಮಣ್ಣಿನ ಮಾರ್ಗದಲ್ಲಿ ಸಾಗುತ್ತಾ ನಡುವೆ ಸಿಗುವ ಹಳ್ಳ,ಬೇಡವೆಂದರೆ ಕಾಲುಸಂಕದಲ್ಲೂ ತೆರಳಬಹುದು. ಅಲ್ಲಿಂದ ಪುನಃ ಮಣ್ಣಿನ ಮಾರ್ಗದಲ್ಲಿ ಸಾಗುತ್ತಾ ದಟ್ಟ ಅಡವಿಯಲ್ಲಿ ದಾರಿ ಹುಡುಕುತ್ತಾ, ಮಧ್ಯದಲ್ಲಿ ಸಿಗುವ ಪುಟ್ಟಝರಿಗಳ ಚೆಲುವನ್ನು ಕಣ್ತುಂಬಿಸಿಕೊಳ್ಳುತ್ತಾ ,ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಸಾಗಿದಂತೆ ಹೊಸಲೋಕವನ್ನು ಪ್ರವೇಶಿಸಿದ ಅನುಭವವಾಗುತ್ತದೆ.
ಆಗಸ್ಟ್ನಿಂದ ಡಿಸೆಂಬರ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಆಗ ಎರ್ಮಾಯಿ ಭೋರ್ಗರೆದು ಮನಮೋಹಕವಾಗಿ ಕಾಣಿಸುತ್ತಾಳೆ. . ಇನ್ನು ಇಲ್ಲಿಗೆ ಭೇಟಿ ನೀಡುವಾಗ ತಿಂಡಿ ಪೊಟ್ಟಣಗಳನ್ನು ಕೊಂಡೊಯ್ಯುವುದು ಉತ್ತಮ. ಜಲಪಾತ ನೋಡುವುದರೊಂದಿಗೆ ಚಾರಣದ ಸವಿಯನ್ನೂ ನೀಡುವ ಈ ತಾಣ ಸದಾ ಕೆಲಸದ ಜಂಜಡದಲ್ಲಿರುವವರ ಮನಸ್ಸಿಗೆ ಹಿತ ನೀಡುತ್ತದೆ.
ಸೌಮ್ಯಶ್ರೀ.ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ
Belagavi: ಗಡಿ ಹೋರಾಟದಲ್ಲಿ ಯಶಸ್ವಿಯಾಗಲು ಒಂದಾಗಿ: ಮನೋಜ್ ಜರಾಂಗೆ ಪಾಟೀಲ