ಉಪ್ಪಿ ಪ್ರೇಮ ಪಾಠಕ್ಕೆ 50ರ ಸಂಭ್ರಮ
ಚಂದ್ರು ಮೊಗದಲ್ಲಿ ನಗು
Team Udayavani, Aug 9, 2019, 5:00 AM IST
ಸಿನಿಮಾ ಮಾಡೋದು ಸುಲಭ. ಆದರೆ, ಅದನ್ನು ಬಿಡುಗಡೆ ಮಾಡೋದು, ಜನರಿಗೆ ತಲುಪಿಸೋದು ಕಷ್ಟ …
– ನೀವು ಗಾಂಧಿನಗರಕ್ಕೆ ಒಂದು ರೌಂಡ್ ಹಾಕಿಕೊಂಡು ಬಂದರೆ ಹೀಗೆ ಹೇಳುವ ಅನೇಕ ಮಂದಿ ಸಿಗುತ್ತಾರೆ. ಅದು ಸತ್ಯ ಕೂಡಾ. ಏಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡೋದು ಸ್ವಲ್ಪ ಕಷ್ಟವೇ. ಆದರೆ, ನಿರ್ದೇಶಕ ಕಂ ನಿರ್ಮಾಪಕ ಆರ್.ಚಂದ್ರು ಮಾತ್ರ ಸಿನಿಮಾ ಬಿಡುಗಡೆಯಾದ ನಂತರವೂ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ನಿರ್ಮಾಣ, ನಿರ್ದೆಶನದ “ಐ ಲವ್ ಯು’ ಚಿತ್ರ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವುದು. ಈ ವರ್ಷದ ಹಿಟ್ಲಿಸ್ಟ್ ಸೇರಿದ ಚಿತ್ರಗಳಲ್ಲಿ “ಐ ಲವ್ ಯು’ ಕೂಡಾ ಸ್ಥಾನ ಪಡೆದಿದೆ.
ಸಿನಿಮಾ ಐವತ್ತು ದಿನ ಪೂರೈಸಿದ ಸಂದರ್ಭದಲ್ಲಿ ಚಿತ್ರಕ್ಕೆ ದುಡಿದ, ಗೆಲುವಿಗೆ ಕಾರಣರಾದವರನ್ನು ನೆನಪಿಸಿಕೊಳ್ಳಲೆಂದೇ ಆರ್.ಚಂದ್ರು 50ನೇ ದಿನದ ಸಂಭ್ರಮವನ್ನು ಆಯೋಜಿಸಿದ್ದರು. ಅಂದು ವೇದಿಕೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಆನಂದ ಗುರೂಜಿ ಅತಿಥಿಗಳಾಗಿ ಭಾಗವಹಿಸಿ, 50ರ ಸಂಭ್ರಮಕ್ಕೆ ಸಾಕ್ಷಿಯಾದರು.
ಚಿತ್ರ ಗೆದ್ದ ಖುಷಿಯಲ್ಲಿದ್ದ ಉಪೇಂದ್ರ, ನಿರ್ದೇಶಕ ಚಂದ್ರು ಅವರ ಶ್ರಮ, ಸಿನಿಮಾವನ್ನು ಪ್ರೀತಿಸುವ ಬಗ್ಗೆ ಮಾತನಾಡಿದರು. “ಇವತ್ತು 30 ಸೆಂಟರ್ಗಳಲ್ಲಿ ಸಿನಿಮಾ ಬಿಡುಗಡೆ ಮಾಡೋದು ಕಷ್ಟ. ಆದರೆ, ಚಂದ್ರು ಅವರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿದ್ದಾರೆ. ಚಿತ್ರ ಕೂಡಾ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಇದಕ್ಕೆಲ್ಲಾ ಕಾರಣ ಚಂದ್ರು ಅವರ ಶ್ರಮ’ ಎಂದರು. ನಿರ್ದೇಶಕ ಚಂದ್ರು ಕೂಡಾ ಉಪೇಂದ್ರ ಅವರು ಕೊಟ್ಟ ಸಹಕಾರದ ಜೊತೆಗೆ ಮುಂದಿನ ದಿನಗಳಲ್ಲಿ ಅವರೊಂದಿಗೆ ಮತ್ತಷ್ಟು ಸಿನಿಮಾ ಮಾಡುವ ಕನಸನ್ನು ಬಿಚ್ಚಿಟ್ಟರು. ನಾಯಕಿ ಸೋನು ಗೌಡ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರ ಗೆದ್ದ ಖುಷಿ ಹಂಚಿಕೊಂಡರು.