ಡೆಮೋ ಪೀಸ್ ನಿಂದ ಮಾಸ್ಟರ್ ಪೀಸ್ ವರೆಗೆ
Team Udayavani, Feb 14, 2020, 5:30 AM IST
“ನಾನಿಲ್ಲಿಗೆ ನಿರ್ದೇಶಕಿ ಆಗಬೇಕು ಅಂತ ಬಂದೆ. ಆದರೆ, ನಿರ್ಮಾಪಕಿಯಾದೆ…’
– ಇದು “ಸ್ಪರ್ಶ’ ರೇಖಾ ಮಾತು. ಹೌದು, ರೇಖಾ “ಡೆಮೊ ಪೀಸ್’ ಮೂಲಕ ನಿರ್ದೇಶಕಿ ಆಗಿರೋದು ಗೊತ್ತೇ ಇದೆ. ಆ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಸಿನಿಮಾ ಕುರಿತು ಹೇಳಲೆಂದೇ ತಮ್ಮ ತಂಡದ ಜೊತೆ ಆಗಮಿಸಿದ್ದರು ರೇಖಾ. ಮೊದಲು ಮಾತು ಶುರು ಮಾಡಿದ ಅವರು ಹೇಳಿದ್ದಿಷ್ಟು.
“ನನ್ನ ಮೊದಲ ನಿರ್ಮಾಣದ ಚಿತ್ರವಿದು. ಕೆಲವರನ್ನು ಹೊರತುಪಡಿಸಿದರೆ, ಇಲ್ಲಿರೋದು ಹೊಸಬರು. ನಿರ್ಮಾಣಕ್ಕೆ ಬಂದಿದ್ದು ಆಕಸ್ಮಿಕ. ನಾನು ಕಥೆ ಕೇಳಿದಾಗ ಈ ಸಿನಿಮಾ ಮಾಡಬೇಕು ಎನಿಸಿತು. ಅಂದುಕೊಂಡಿದ್ದಕ್ಕಿಂತ ಬಜೆಟ್ ಹೆಚ್ಚಾಯ್ತು. ಹಾಗಾಗಿ ನಿರ್ದೇಶಕರೂ ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾರೆ. ಸಿನಿಮಾ ಗೆಲ್ಲುವ ನಂಬಿಕೆ ಇದೆ. ಈಗಾಗಲೇ ಸ್ಯಾಟ್ಲೆçಟ್ ಹಕ್ಕು ಮಾರಾಟವಾಗಿದೆ. ಎಲ್ಲರೂ ಕಷ್ಟಪಟ್ಟು, ಇಷ್ಟಪಟ್ಟು ಚಿತ್ರ ಮಾಡಿದ್ದೇವೆ. ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಡಲ್ಲ ಎಂಬ ವಿಶ್ವಾಸವಿದೆ’ ಎಂಬುದು ರೇಖಾ ಮಾತು.
ನಿರ್ದೇಶಕ ವಿವೇಕ್ ಅವರಿಗೆ ಇದು ಮೊದಲ ಚಿತ್ರ. ಸಿನಿಮಾ ಕುರಿತು ಹೇಳಿಕೊಂಡ ವಿವೇಕ್, “ಇಲ್ಲಿ ಡೆಮೊ ಪೀಸ್ ಯಾಕೆ ಅಂದರೆ, ಏನೇ ಪ್ರಯೋಗ ಮಾಡುವ ಮುನ್ನ ಡೆಮೊ ಪೀಸ್ ಮೇಲೆಯೇ ಪ್ರಯೋಗ ಆಗುತ್ತೆ. ಅದು ಸಕ್ಸಸ್ ಆದರೆ ಮಾತ್ರ ಮಾಸ್ಟರ್ ಪೀಸ್. ಇಲ್ಲೊಂದು ಕಥೆ ಅದೇ ರೀತಿ ಸಾಗುತ್ತೆ. ಕಥೆಗೆ ಅನುಗುಣವಾಗಿ ಶೀರ್ಷಿಕೆ ಇದೆ. ಚಿತ್ರದಲ್ಲಿ ನಾಯಕ ಕಾಲೇಜ್ ಹುಡುಗ.
ಅವನಿಗೆ ದುಡ್ಡು ಮಾಡಬೇಕು, ದುಡ್ಡು ಇದ್ದರೆ ಎಲ್ಲವೂ ಸಿಗುತ್ತೆ ಅಂದುಕೊಂಡು ಮೋಜು-ಮಸ್ತಿಗೆ ಇಳಿಯುತ್ತಾನೆ. ಇಲ್ಲಿ ಅಪ್ಪ, ಅಮ್ಮನ ಸಂಬಂಧಗಳೂ ಇದೆ. ಪ್ರತಿ ಸ್ಟೂಡೆಂಟ್ಸ್ ಈ ಚಿತ್ರ ನೋಡಿದರೆ, ಅವರವರ ಅಪ್ಪ, ಅಮ್ಮ ಖಂಡಿತ ನೆನಪಾಗುತ್ತಾರೆ’ ಎಂದರು ವಿವೇಕ್.
ನಾಯಕ ಭರತ್ ಬೋಪಣ್ಣ ಅವರಿಗೆ ಇದು ಮೊದಲ ಸಿನಿಮಾ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ಭರತ್ ಬೋಪಣ್ಣ, “ಚಿತ್ರದಲ್ಲಿ ಹರ್ಷ ಎಂಬ ಪಾತ್ರ ಮಾಡಿದ್ದಾರಂತೆ. ಈಗಿನ ಯುವಕರನ್ನು ಗಮನದಲ್ಲಿಟ್ಟುಕೊಂಡೇ ಚಿತ್ರ ಮಾಡಲಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು, ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳ್ತೀನಿ. ಇದೊಂದು ಪಕ್ಕಾ ಮನರಂಜನೆಯ ಚಿತ್ರ’ ಎಂಬುದು ಭರತ್ ಹೇಳಿಕೆ.
ನಾಯಕಿ ಸೋನಾಲ್ ಮೊಂತೆರೋ ಅವರಿಗೆ ರೇಖಾ ಅವರು ಮಾಡಿದ ಒನ್ ಕಾಲ್ ಅಷ್ಟೇ ಸಾಕಾಯ್ತಂತೆ. ಕಥೆ, ಪಾತ್ರ ಏನನ್ನೂ ಕೇಳದೆ, ಸಿನಿಮಾ ಮಾಡುವುದಾಗಿ ಒಪ್ಪಿದರಂತೆ. ಅವರಿಲ್ಲಿ ತುಂಬಾ ಜೋರು ಹುಡುಗಿಯ ಪಾತ್ರ ಮಾಡಿದ್ದಾರಂತೆ.
ಇನ್ನು, ಚಕ್ರವರ್ತಿ ಚಂದ್ರಚೂಡ್ ಕೂಡ ಇಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರಂತೆ. “ಇದು ಯಾವುದೇ ಬಿಲ್ಡಪ್ ಇರದ ಚಿತ್ರ. ಮುಗ್ಧರೆಲ್ಲರೂ ಸೇರಿ ಪ್ರೀತಿಯಿಂದ ಮಾಡಿರುವ “ಡೆಮೊ ಪೀಸ್’ ಇದು. ರೇಖಾ ಮೇಡಮ್ ನಟಿಯಾಗಿ ಹಣ ಹಾಕಿ ಸಿನಿಮಾ ಮಾಡಿದ್ದು ಹೆಮ್ಮೆ. ನಾನಿಲ್ಲಿ ಯುವಕರನ್ನು ಹಾದಿ ತಪ್ಪಿಸುವ ಪಾತ್ರ ಮಾಡಿದರೆ, ನಾಯಕ ಭರತ್, ನನ್ನ ಹಾದಿಯನ್ನೇ ತಪ್ಪಿಸುವ ಪಾತ್ರ ಮಾಡಿದ್ದಾನೆ. ಒಳ್ಳೆಯ ತಂಡ, ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಎಂದರು ಚಕ್ರವರ್ತಿ ಚಂದ್ರಚೂಡ್.
ಅರ್ಜುನ್ ರಾಮ್ ಸಂಗೀತವಿದ್ದು, ಮೂರು ಹಾಡುಗಳನ್ನು ಕೊಟ್ಟಿದ್ದಾರಂತೆ. ರಾಜೇಶ್ ಕೃಷ್ಣ, ಸಂಚಿತ್ ಹೆಗ್ಡೆ , ಚಂದನ್ಶೆಟ್ಟಿ ಹಾಡಿದ್ದು ಈಗಾಗಲೇ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂಬುದು ಅವರ ಮಾತು.