ದುಬಾರಿ ಮಹಾನುಭಾವರು!
Team Udayavani, Jul 14, 2017, 5:20 AM IST
‘ಇಪ್ಪತ್ತೈದು ಲಕ್ಷ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಮಾಡೋಕೆ ಅಂತ ಪ್ಲಾನ್ ಮಾಡಿದ್ವಿ. ಅನುಭವ ಇಲ್ಲವಾದ್ದರಿಂದ ಚಿತ್ರದ ಬಜೆಟ್ ಈಗ ಒಂದು ಕೋಟಿ ದಾಟಿದೆ…’ -ಹೀಗೆ ಹೇಳುತ್ತಲೇ ಸಣ್ಣದ್ದೊಂದು ನಗೆ ಬೀರಿದರು ನಿರ್ಮಾಪಕ ಕಮ್ ನಾಯಕ ಬಾಲಚಂದರ್. ಅವರು ಹೇಳಿದ್ದು, ‘ಮಹಾನುಭಾವರು’ ಎಂಬ ಹೊಸ ಚಿತ್ರದ ಬಗ್ಗೆ. ಇದು ಸಂಪೂರ್ಣ ಹೊಸಬರ ತಂಡ ಸೇರಿ ಮಾಡಿದ ಚಿತ್ರ. ಆ ಕುರಿತು ಮಾತಿಗಿಳಿದರು ಬಾಲಚಂದರ್.
‘ನಾನು, ಗೋಕುಲ್ರಾಜ್ ಹಾಗೂ ನಿರ್ದೇಶಕ ಸಂದೀಪ್ ನಾಗಲೀಕರ್ 9 ವರ್ಷದ ಗೆಳೆಯರು. ಈಗಿನ ಟ್ರೆಂಡ್ಗೆ ತಕ್ಕ ಕಥೆ ಮಾಡಬೇಕು ಎಂಬ ಪ್ಲಾನ್ ಇತ್ತು. ಆರಂಭದಲ್ಲಿ 25 ಲಕ್ಷದಲ್ಲೇ ಸಿನಿಮಾ ಮಾಡಿದರಾಯ್ತು ಎಂಬ ಪ್ಲಾನ್ ಕೂಡ ಇತ್ತು. ಅದೀಗ ಕೋಟಿ ದಾಟಿದೆ. ಆದರೆ, ಎಲ್ಲೂ ರಾಜಿ ಆಗದೆ ಚಿತ್ರ ಮಾಡಿದ್ದು ಖುಷಿಕೊಟ್ಟಿದೆ. ಪಕ್ಕಾ ಪ್ಲಾನಿಂಗ್ ಮಾಡಿಕೊಂಡೇ ಕೆಲಸ ಮಾಡಿದ್ದೇವೆ. ಮೊದಲು ಹಾಡು ಬೇಡ ಅಂದುಕೊಂಡಿದ್ವಿ. ಕಥೆ ಚೆನ್ನಾಗಿ ಬಂದಿದ್ದನ್ನು ನೋಡಿ, ಹಾಡುಗಳಿದ್ದರೆ ಚೆನ್ನಾಗಿರುತ್ತೆ ಅಂತ ಐದು ಹಾಡುಗಳನ್ನು ಮಾಡಲಾಗಿದೆ. ಪುನೀತ್ ರಾಜಕುಮಾರ್ ಒಂದು ಹಾಡು, ಶ್ರೀಮುರಳಿ ಅವರೊಂದು ಹಾಡು ಹಾಡಿರುವುದು ವಿಶೇಷ.
ದೊಡ್ಡ ಸಾಧನೆ ಮಾಡಿದವರು ‘ಮಹಾನುಭಾವರು’ ಅಲ್ಲ, ಸಣ್ಣ ಸಣ್ಣ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳೋರೂ ‘ಮಹಾನುಭಾವರು’ ಎಂಬುದನ್ನಿಲ್ಲಿ ಹೇಳಲು ಹೊರಟಿದ್ದೇವೆ’ ಅಂತ ತಮ್ಮ ಪ್ಲಾನಿಂಗ್ ಬಗ್ಗೆ ಹೇಳಿಕೊಂಡ ಬಾಲಚಂದರ್ಗೆ, ಪತ್ರಕರ್ತರ ಗ್ಯಾಲರಿಯಿಂದ, ‘ನಿಮ್ಮ ಪ್ಲಾನಿಂಗ್ ಎಲ್ಲಾ ಸರಿ ಆದರೆ, ರಿಟರ್ನ್ಸ್ ಬಗ್ಗೆ ಯಾವ ಪ್ಲಾನಿಂಗ್ ಮಾಡಿದ್ದೀರಿ’ ಎಂಬ ಪ್ರಶ್ನೆ ಬಂತು. ‘ಅದಕ್ಕೊಂದು ಪ್ಲಾನ್ ಮಾಡುತ್ತೇವೆ’ ಎಂದಷ್ಟೇ ಹೇಳಿ ಸುಮ್ಮನಾದರು ಬಾಲಚಂದರ್.
ನಿರ್ದೇಶಕ ಸಂದೀಪ್ ನಾಗಲೀಕರ್ ಅವರಿಗೆ ಇದು ಮೊದಲ ಚಿತ್ರ. ಎಂಜಿನಿಯರ್ ಆಗಿರುವ ಅವರಿಗೆ ಸಿನಿಮಾ ಆಸೆ ಚಿಗುರಿದ್ದರಿಂದ, ಇತ್ತ ಗೆಳೆಯರ ಜತೆಗೂಡಿ ಚಿತ್ರ ಮಾಡಿದ್ದಾರೆ. ‘ಮಹಾನುಭಾವರು’ ಅಂದರೆ, ಎರಡು ರೀತಿ ಆಲೋಚನೆ ಮಾಡಿಕೊಳ್ಳಬಹುದು. ಒಬ್ಬ ನಾಳೆ ಬಗ್ಗೆ ಯೋಚನೆ ಇಲ್ಲದೆ, ಇವತ್ತಿನ ಬಗ್ಗೆ ಮಾತ್ರ ಯೋಚನೆ ಮಾಡಿ, ಬಿಂದಾಸ್ ಆಗಿರಬೇಕು ಅಂತ ಬದುಕ್ತಾ ಇರೋನು. ಇನ್ನೊಬ್ಬ, ಮುಂದಿನ ಭವಿಷ್ಯ ಬಗ್ಗೆ ಯೋಚಿಸೋನು. ಇವರಿಬ್ಬರ ನಡುವಿನ ಕಥೆ ಇಲ್ಲಿ ಹೈಲೈಟ್. ಅರ್ಜುನ್ ಜನ್ಯ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮೊದಲು ನಾನು ಬಿಜಿ ಇದ್ದೇನೆ, 6 ತಿಂಗಳಾಗುತ್ತೆ, ಬೇರೆ ಕಡೆ ಮಾಡಿಸಿಕೊಳ್ಳಿ ಅಂದಿದ್ದರು. ನಾವು ಹಠ ಬಿದ್ದು, ನೀವೇ ಮಾಡಬೇಕು ಅಂದಾಗ, ಚಿತ್ರ ನೋಡಿ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ’ ಎಂದರು ನಿರ್ದೇಶಕರು.
ಸತೀಶ್ ಮೌರ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದು ಇವರ ಮೊದಲ ಸಿನಿಮಾ. ಈ ಹಿಂದೆ ಹಂಸಲೇಖ ಅವರ ದೇಸಿ ಶಾಲೆಯಲ್ಲಿದ್ದು, ಕೆಲಸ ಕಲಿತಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕ ಹಾಗೂ ಅನುಷಾ ರೈ ನಾಯಕಿಯರು. ಈ ಪೈಕಿ ಅನುಷಾ ಇಲ್ಲಿ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಪ್ರಿಯಾಂಕಾಗೆ ಇದು ಮೊದಲ ಚಿತ್ರ. ಉಳಿದಂತೆ ಚೇತನ್ ನೀನಾಸಂ, ಲೋಕೇಶ್, ಇತರರು ಇದ್ದರು. ಈ ಚಿತ್ರಕ್ಕೆ ವೀರೇಶ್ ಕ್ಯಾಮೆರಾ ಹಿಡಿದಿದ್ದಾರೆ.
– ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ