ಕಲ್ಪನಾ ಲೋಕದಲ್ಲಿ “ವೇದಾ”
Team Udayavani, Jul 19, 2019, 5:00 AM IST
ಜಾತಿ, ಧರ್ಮ, ಕ್ಷೇತ್ರದ ಹಂಗಿಲ್ಲದೇ ಎಲ್ಲರನ್ನು ಸೆಳೆಯುವ ಮತ್ತು ಪ್ರತಿಭೆ ಇದ್ದವರನ್ನು ಪೋಷಿಸುವ ಕ್ಷೇತ್ರವೊಂದಿದ್ದರೆ ಅದು ಸಿನಿಮಾ ಕ್ಷೇತ್ರ. ಅದೇ ಕಾರಣದಿಂದ ಬೇರೆ ಬೇರೆ ಕ್ಷೇತ್ರದಲ್ಲಿರುವವರು ಸಿನಿಮಾ ಕಡೆಗೆ ಆಸಕ್ತರಾಗುತ್ತಾರೆ ಮತ್ತು ಇಲ್ಲೇನೋ ಸಾಧನೆ ಮಾಡಬೇಕೆಂದು ಬರುತ್ತಾರೆ. ಈಗಾಗಲೇ ಬಂದಿರುವ ಅನೇಕರು ಇಲ್ಲಿ ಗಟ್ಟಿನೆಲೆ ಕಂಡುಕೊಂಡಿದ್ದಾರೆ. ಅದೇ ಆಸೆಯೊಂದಿಗೆ ಈಗ ವೇದ ಎಂಬ ನವನಟಿ ಕೂಡಾ ಎಂಟ್ರಿಕೊಟ್ಟಿದ್ದಾರೆ. ಯಾರು ಈ ವೇದ ಎಂದರೆ ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟಿರುವ ನವನಟಿ. ಬಿಡುಗಡೆಗೆ ಸಿದ್ಧವಾಗಿರುವ “ಕಲ್ಪನಾ ವಿಲಾಸಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಎಂಬಿಎ ಮಾಡಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ವೇದ ಅವರಿಗೆ ಸಿನಿಮಾದ ಮೇಲೆ ಆಸಕ್ತಿ ಬಂದು ಈಗ ಈ ಕ್ಷೇತ್ರಕ್ಕೆ ಬಂದಿದ್ದಾರೆ. ಚಿತ್ರದ ಕಥೆ ಬರೆದ ಕಾರ್ತಿಕ್ ಅವರ ಮೂಲಕ ಚಿತ್ರತಂಡ ಸೇರಿಕೊಂಡ ವೇದ ಈ ಹಿಂದೆ ಕಾರ್ತಿಕ್ ಅವರ ಕಿರುಚಿತ್ರವೊಂದರಲ್ಲಿ ನಟಿಸಿದ್ದಾರೆ. “ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಇದೊಂದು ಸಸ್ಪೆನ್ಸ್ ಚಿತ್ರವಾಗಿದ್ದು, ಬಹುತೇಕ ಚಿತ್ರೀಕರಣ ರಾತ್ರಿ ವೇಳೆ ನಡೆದಿದೆ’ ಎನ್ನುತ್ತಾರೆ ವೇದ. ಅಂದಹಾಗೆ, ವೇದ ಈಗಾಗಲೇ ಇನ್ನೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದು, ಕಂಪೆನಿ ಕೆಲಸದ ಜೊತೆಗೆ ಚಿತ್ರರಂಗದಲ್ಲಿ ಮುಂದುವರೆಯುವ ಆಸಕ್ತಿ ಕೂಡಾ ಅವರಿಗಿದೆ.
ಅಂದಹಾಗೆ, ವಿಶ್ವ ಜಿ ಕಡೂರು ನಿರ್ದೇಶಿಸಿರುವ “ಕಲ್ಪನಾ ವಿಲಾಸಿ’ ಚಿತ್ರ ಒಂದು ಕ್ರೈಮ್ ಥ್ರಿಲ್ಲರ್ ಜಾನರ್ಗೆ ಸೇರಿದ್ದು, ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ಮಾಡಲಾಗಿದೆ. ಚಿತ್ರಕ್ಕೆ ಕಿರಣ್ ಎನ್ನುವವರು ಕಥೆ ಇದೆ. ನಟಿ ಕಲ್ಪನಾ ಅವರ ಸಾವಿನ ನಂತರ ಆ ಊರಲ್ಲಿ ಅವರ ಆತ್ಮ ತಿರುಗುತ್ತಿದೆ ಎಂದು ಆ ಊರಿನವರು ಹೇಳುತ್ತಿದ್ದಾರಂತೆ. ಆ ಅಂಶವನ್ನಿಟ್ಟುಕೊಂಡು ಈ “ಕಲ್ಪನಾ ವಿಲಾಸಿ’ ಎಂಬ ಚಿತ್ರ ಮಾಡಲಾಗಿದೆ. ನಿಜಕ್ಕೂ ಆತ್ಮ ತಿರುಗುತ್ತಿದೆಯಾ ಅಥವಾ ಜನರ ಊಹೆನಾ ಎಂಬ ಅಂಶವನ್ನಿಟ್ಟುಕೊಂಡು ಚಿತ್ರವನ್ನು ಕಟ್ಟಿಕೊಡಲಾಗಿದೆಯಂತೆ. ಚಿತ್ರದ ಬಹುತೇಕ ಭಾಗ ಮಡಿಕೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ.