ಈಗ ಹೊಟ್ಟೆಗೇನ್ರಿ ತಿಂತೀರಾ?
Team Udayavani, Aug 26, 2020, 8:49 PM IST
“ಏನ್ ಮಾಡ್ತಾ ಇದ್ದೀಯ?’- ಲ್ಯಾಪ್ ಟಾಪ್ ಮುಂದೆ ಕೂತಿದ್ದವಳನ್ನು ಅಮ್ಮ ಕೇಳಿದಳು. “ಆಫೀಸ್ ಕೆಲಸಾ… ಪೆಂಡಿಂಗ್ ಉಳಿದುಬಿಟ್ಟಿದೆಯಮ್ಮಾ ‘ ಅಂದೆ ಲ್ಯಾಪ್ ಟಾಪ್ನಿಂದ ಕಣ್ಣು ಕೀಳದೆ. “ಐದು ನಿಮಿಷ ಬಿಟ್ಟು ಸ್ಟೌ ಮೇಲಿರೋ ಸಾಂಬಾರು ಇಳಿಸಿಡ್ತೀಯಾ?’ “ಐದು ನಿಮಿಷ ಬಿಟ್ಟಾ, ಹೂ ಸರಿ ಸರಿ…’ “ಹಂಗಾರೆ ನಾನು ಸ್ನಾನಕ್ಕೆ ಹೋಗ್ಲಾ?’ “ಹೂ ಕಣಮ್ಮಾ… ಆಯ್ತು ಹೋಗು…’ ಹತ್ತು ನಿಮಿಷದ ನಂತರ ಟೀಮ್ ಮೀಟಿಂಗ್ ಫಿಕ್ಸ್ ಆಗಿತ್ತು. ಅಷ್ಟರೊಳಗೆ ಈ ಕೆಲಸ ಮುಗಿಸಿ, ಎರಡು ನಿಮಿಷ ರೆಸ್ಟ್ ತಗೊಂಡು, ಆ ಬಿಡುವಿನ ಮಧ್ಯೆಯೇ ಸಾಂಬಾರು ಇಳಿಸಿಬಿಡಬೇಕು ಅಂದುಕೊಂಡು ಕೆಲಸ ಮಾಡುತ್ತಿದ್ದೆ. ನನ್ನ ಮಾತಿನ ಮೇಲೆ ನಂಬಿಕೆ ಇಟ್ಟಿದ್ದ ಅಮ್ಮ, ನಿರಾತಂಕವಾಗಿ ಸ್ನಾನಕ್ಕೆ ಹೋದಳು. ಆದರೆ, ಕೆಲಸದ ಗಡಿಬಿಡಿಯಲ್ಲಿ ಮೈ ಮರೆತ ನನಗೆ, ಅಮ್ಮ ಹೇಳಿದ್ದು ಮರೆತೇ ಹೋಗಿಬಿಡ್ತು.
ಹತ್ತು ನಿಮಿಷ ಕಳೆದ ನಂತರ ಮೀಟಿಂಗ್ ಶುರುವಾಯ್ತು. ನಿನ್ನೆ ಟೈಮಿಗೆ ಸರಿಯಾಗಿ ಕೆಲಸ ಮುಗಿಸಿಲ್ಲ ಅಂತ ಮ್ಯಾನೇಜರ್ ನನ್ನ ಮೇಲೆ ಗರಂ ಆಗಿದ್ದರು. ಅವರಿಂದ ಬೈಸಿಕೊಳ್ಳುತ್ತಿರುವಾಗ, ಅಡುಗೆ ಮನೆಯಿಂದ ಅಮ್ಮನ ಏರು ದನಿ ಕೇಳಿಸಿತು! “ಏನೇ, ನೀನು ಹೇಳಿದ ಒಂದು ಕೆಲಸಾನೂ ಸರಿಯಾಗಿ ಮಾಡಲ್ಲವಲ್ಲ? ಸಾಂಬಾರ್ ಎಲ್ಲಾ ಸುಟ್ಟುಹೋಯ್ತಲ್ಲ ಈಗ. ಅಡುಗೆ ಮಾಡೋದು ಬಿಡು, ಪಾತ್ರೆ ಇಳಿಸೋಕೂ ಆಗಲ್ವಾ ನಿಂಗೆ? ಮೂರು ಹೊತ್ತೂ ಸುಡುಗಾಡು ಕಂಪ್ಯೂಟರ್ ಮುಂದೆ ಕೂತಿರ್ತೀಯ. ಅದೇನ್ ಎಲ್ಲರ ಕೆಲಸವನ್ನೂ ನೀನೇ ಮಾಡ್ತೀಯೋ ಹೇಗೆ? ನಿನ್ನದು ಅದೇನು ಕೆಲಸಾನೋ ಏನೋ..’ ಅಂತ ರೂಮಿನ ಬಾಗಿಲಲ್ಲಿ ನಿಂತು ದಬಾಯಿಸತೊಡಗಿದಳು. ಅಯ್ಯೋ ದೇವರೇ, ಆ ಕಡೆಯಿಂದ ಬಾಸು, ಈ ಕಡೆಯಿಂದ ಅಮ್ಮ… ಇಬ್ಬರು ಹೇಳಿದ ಕೆಲಸವನ್ನೂ ನಾನು ಸರಿಯಾಗಿ ಮಾಡಿರಲಿಲ್ಲ. ಯಾರಿಗೆ ಏನು ಉತ್ತರಿಸುವುದು ಅಂತ ತೋಚದೆ ತಬ್ಬಿಬ್ಟಾಗಿ – “ಅಮ್ಮಾ, ಮೀಟಿಂಗ್ ನಡೀತಿದೆ ಹೋಗಮ್ಮ…’ ಅಂತ ಅವಳನ್ನು ಸಾಗಹಾಕಿದೆ. ಅಮ್ಮ ದುಸುಮುಸು ಅನ್ನುತ್ತಲೇ ಅಡುಗೆ ಮನೆಗೆ ಹೋದಳು. ಅಮ್ಮನ ಬೈಗುಳಗಳು ಕಾಲ್ನಲ್ಲಿದ್ದ ಎಲ್ಲರಿಗೂ ಕೇಳಿಸಿದೆ ಅನ್ನುವುದರಲ್ಲಿ ಸಂಶಯವಿರಲಿಲ್ಲ. ಆ ಕಡೆಯಿಂದ ಮ್ಯಾನೇಜರ್- “ಸಂಧ್ಯಾ, ಈಗ ಹೊಟ್ಟೆಗೇನ್ರಿ ತಿಂತೀರಾ?’ ಅಂದರು. ಅವರು ಯಾವತ್ತೂ ಹೀಗೆಲ್ಲಾ ಬೈದಿರಲಿಲ್ಲ, ಅದೂ ಕನ್ನಡದಲ್ಲಿ… “ಸಾರಿ ಸರ್, ಐ ವಿಲ್ ಡು ಇಟ್ ನೌ. ಗಿವ್ ಮೀ ಫೈವ್ ಮಿನಿಟ್ಸ…..’ ಅಂದೆ. “ನಾನು ಕೇಳಿದ್ದು ಕೆಲಸದ ವಿಷಯ ಅಲ್ಲಾರೀ, ಸಾಂಬಾರು ಸುಟ್ಟು ಹೋಯ್ತಲ್ಲ, ಈಗ ಊಟಕ್ಕೇನು ಮಾಡ್ತೀರಾ ಅಂತ ಕೇಳಿದೆ’ ಎಂದು ನಕ್ಕರು! ನಾನು ಪೆಚ್ಚಾಗಿ ನಗುತ್ತಾ, “ಅದನ್ನೆಲ್ಲಾ ಅಮ್ಮ ನೋಡ್ಕೊàತಾರೆ ಸಾರ್’ ಅಂದೆ. ಮೀಟಿಂಗ್ ಲಿ ಅಟೆಂಡ್ ಆಗಿದ್ದವರೆಲ್ಲಾ ಈ ಮಾತು ಕೇಳಿಸಿಕೊಂಡು ನಗುತ್ತಿ ರುವುದು ಕೇಳಿಸಿತು. ನಮ್ಮಮ್ಮ ಬೈದಿದ್ದನ್ನು ಕೇಳಿಸಿ ಕೊಂಡಿದ್ದ ಬಾಸ್ ಹೆಚ್ಚು ಬೈಯದೇ ಮೀಟಿಂಗ್ ಮುಗಿಸಿ ದರು. ಇಲ್ಲದಿದ್ದರೆ ಅವ ರಿಂದ ಇನ್ನೂ ಬೈಸಿಕೊಳ್ಳ ಬೇಕಾ ಗಿತ್ತೇನೋ!
– ಸಂಧ್ಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು