ಶ್ಯ್… ಅವಳು ನಿದ್ದೆ ಮಾಡಲಿ
Team Udayavani, May 15, 2019, 6:00 AM IST
ಮನೆಯಲ್ಲಿ ಎಲ್ಲರಿಗಿಂತ ಲೇಟಾಗಿ ಮಲಗಿ, ಎಲ್ಲರಿಗಿಂತ ಬೇಗ ಏಳುವವಳು ಅಮ್ಮ. ನಿತ್ಯವೂ ಎಂಟು ಗಂಟೆ ನಿದ್ದೆ ಮಾಡಲೇಬೇಕು ಅಂತ ಯಾರೇ ಹೇಳಿದರೂ, ಕೆಲಸದೊತ್ತಡ ಅವಳ ಸಿಹಿನಿದ್ರೆಗೆ ಬ್ರೇಕ್ ಹಾಕಿ ಬಿಡುತ್ತದೆ. ಎಂಟು ಗಂಟೆ ಬಿಡಿ, ಐದಾರು ಗಂಟೆ ನಿದ್ದೆ ಮಾಡಿದರೆ ಅದೇ ಹೆಚ್ಚು ಅಂತಾರೆ ಹಲವು ಅಮ್ಮಂದಿರು.
ಆದರೆ, ಅವರಿಗೆ ಗೊತ್ತಿರಲಿಕ್ಕಿಲ್ಲ; ಮನೆಯಲ್ಲಿ ಇತರರಿಗಿಂತ ಅವರಿಗೇ ನಿದ್ದೆಯ ಅವಶ್ಯಕತೆ ಜಾಸ್ತಿ ಇದೆ ಅಂತ. ನ್ಯಾಷನಲ್ ಸ್ಲಿಪ್ ಫೌಂಡೇಶನ್ ಹೇಳುವ ಪ್ರಕಾರ, ಪುರುಷರಿಗಿಂತ ಮಹಿಳೆಯರೇ ಕನಿಷ್ಠ ಪಕ್ಷ 20 ನಿಮಿಷ ಜಾಸ್ತಿ ನಿದ್ದೆ ಮಾಡಬೇಕಂತೆ. ಯಾಕೆ ಗೊತ್ತಾ?
ಅವರು ಜಾಸ್ತಿ ಕೆಲಸ ಮಾಡ್ತಾರೆ
ಅಡುಗೆ, ಮನೆ, ಮಕ್ಕಳು, ಗಂಡ, ಆಫೀಸು ಕೆಲಸ ಹೀಗೆ ಮಹಿಳೆಯರು ಯಾವಾಗಲೂ ಬ್ಯುಸಿ ಇರ್ತಾರೆ. ಅವರಿಗೆ ಕೆಲಸವೂ ಜಾಸ್ತಿ, ಕೆಲಸದೊತ್ತಡವೂ ಜಾಸ್ತಿ. ಹಾಗಾಗಿ, ಸಹಜವಾಗಿಯೇ ಮಹಿಳೆಯರಿಗೆ ಹೆಚ್ಚು ವಿಶ್ರಾಂತಿಯ ಅಗತ್ಯವಿರುತ್ತದೆ.
ನಿದ್ರಾಹೀನತೆಯ ಸಮಸ್ಯೆ
ನಿದ್ರಾಹೀನತೆಯ ಸಮಸ್ಯೆಯು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚಾಗಿ ಕಾಡುತ್ತದಂತೆ. ದಿಂಬಿಗೆ ತಲೆಯಿಟ್ಟ ಕೂಡಲೇ ಮಹಿಳೆಯರಿಗೆ ನಿದ್ದೆ ಬರುವುದಿಲ್ಲ. ನಾಳಿನ ಅಡುಗೆ, ಬಾಕಿ ಉಳಿದ ಕೆಲಸ ಅಂತೆಲ್ಲಾ ತಲೆಬಿಸಿ ಮಾಡಿಕೊಂಡು ಅವರು ನಿದ್ದೆಕೆಡಿಸಿಕೊಳ್ತಾರೆ. ಅದನ್ನು ಸರಿದೂಗಿಸಲು ಸ್ವಲ್ಪ ಜಾಸ್ತಿ ನಿದ್ದೆ ಮಾಡಬೇಕು ಅನ್ನುತ್ತದೆ ಸಂಶೋಧನೆ.
ಹಾರ್ಮೋನು ಬದಲಾವಣೆ
ತಿಂಗಳ ಮುಟ್ಟು, ಗರ್ಭಾವಸ್ಥೆ, ಮೆನೋಪಾಸ್… ಹೀಗೆ ಸ್ತ್ರೀಯರ ಹಾರ್ಮೋನುಗಳಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಆ ಬದಲಾವಣೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ, ನಿದ್ರಾಹೀನತೆಯ ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಾಗಿ ಅವರು ಸ್ವಲ್ಪ ಜಾಸ್ತಿ ವಿಶ್ರಾಂತಿ ಪಡೆಯಬೇಕು.
ತೂಕ ಹೆಚ್ಚಳ
ಪುರುಷರಷ್ಟು ಸುಲಭವಾಗಿ ಮಹಿಳೆಯರು ಮೈ ತೂಕ ಇಳಿಸಿಕೊಳ್ಳಲಾರರು. ಇದಕ್ಕೆ ನಿದ್ರಾಹೀನತೆಯೂ ಒಂದು ಕಾರಣ. ಸರಿಯಾಗಿ ನಿದ್ರೆ ಮಾಡದಿದ್ದರೆ, ದೇಹದಲ್ಲಿ “ಕಾರ್ಟಿಸೋಲ್’ ಎಂಬ ಸ್ಟ್ರೆಸ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಅದು ಹಸಿವೆಯನ್ನು ಹೆಚ್ಚಿಸಿ, ದೇಹದ ತೂಕ ಹೆಚ್ಚುವಂತೆ ಮಾಡುತ್ತದೆ.
- ಗುಡ್ನೈಟ್ ಟಿಪ್ಸ್
ನಿದ್ದೆಯ ಟೈಮ್ ಟೇಬಲ್ ಹಾಕಿಕೊಳ್ಳಿ. 10-6 ಅಂದರೆ, ಪ್ರತಿದಿನವೂ ಹತ್ತಕ್ಕೆ ಮಲಗಿ, ಆರಕ್ಕೆ ಏಳಿ. ಒಂದೊಂದು ದಿನ ಒಂದೊಂದು ಸಮಯ ಬೇಡ.
ಮಲಗುವ ಮುನ್ನ ಐದು ನಿಮಿಷ ಧ್ಯಾನ ಮಾಡಿ. ಎಲ್ಲ ಚಿಂತೆಗಳಿಂದ ಮನಸ್ಸನ್ನು ಮುಕ್ತಗೊಳಿಸಿ.
ಮಲಗುವುದಕ್ಕಿಂತ ಒಂದು ಗಂಟೆ ಮುಂಚೆಯೇ ಮೊಬೈಲ್, ಲ್ಯಾಪ್ಟಾಪ್, ಟಿ.ವಿ. ಆಫ್ ಮಾಡಿಬಿಡಿ. ಅವುಗಳು ಹೊರಸೂಸುವ ನೀಲಿ ಬೆಳಕು ನಿದ್ರೆಗೆ ಮಾರಕ.
ಹಾಸಿಗೆ, ಬೆಡ್ಶೀಟ್ ಸ್ವಚ್ಛವಾಗಿಟ್ಟುಕೊಳ್ಳಿ.
ಊಟದ ನಂತರ ಕಾಫಿ, ಟೀ ಸೇವಿಸಬೇಡಿ.
ಯಾರು, ಎಷ್ಟು ನಿದ್ದೆ ಮಾಡ್ಬೇಕು?
ವಯಸ್ಸು ಗಂಟೆ
0-19 9-10
20-64 7-9
64 ಮೇಲ್ಪಟ್ಟು 7-8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?