ಅಸಂಗತಗಳನ್ನ ಕಿಚಾಯಿಸುವ ತೂಫಾನ್
Team Udayavani, Sep 3, 2020, 6:24 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೇ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದ್ದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ.
-ಗಿರೀಶ ಕಾರ್ನಾಡ
ಅಕ್ಷರಶಃ ಅರ್ಥಗರ್ಭಿತ ನುಡಿಗಳು “ತೂಫಾನ್ ಮೇಲ್”ನ ಬೆನ್ನುಡಿಯಲ್ಲಿ ಕಾರ್ನಾಡರು ಬರೆದಿದ್ದಾರೆ.
ಮನುಷ್ಯ ತುಮುಲ, ದ್ವಂದ್ವ, ಏಕತಾನ, ಉಪರಾಟೆ ಜೀವನ ಎಲ್ಲವೂ ಎಲ್ಲವೂ ಅಸಂಗತಗಳೆ! ಅಸಂಖ್ಯಾತ ನೋವು ನಲಿವು ಕಂಡ ನಗರಿಯೂ ಹಲವಾರು ಕತೆಗಳನ್ನು ತನ್ನೊಡಲಿನಲ್ಲಿ ಬಚ್ಚಿಟ್ಟಿಕೊಂಡಿರುತ್ತದೆ.
ಕೆಲವೊಂದು ಸ್ಲಂ, ಮೋರಿಯ ದಂಡೆಯ ಮೇಲೆ, ಹೆಸರೇ ಇಲ್ಲದ ಸ್ಥಳಗಳಲ್ಲಿ ಕತೆಗಳು ಹುಟ್ಟಿ ಅದರ ಕಥಾ ನಾಯಕ/ನಾಯಕಿಯರು ಸಾಯಬಹುದು.
ಅದೆಷ್ಟೋ ತೂಫಾನ್ ಮೇಲ್ ನಮ್ಮ ಜೀವನದಲ್ಲಿ ಬರಬಹುದು, ಆ ಮೇಲ್ನಿಂದ ಯಾರು ಬೇಕಾದರೂ ಜಿಗಿಯಬಹುದು! ನಮಗೆ ಬೇಕು ಬೇಕಾದ್ದನ್ನೆಲ್ಲಾ ನೀಡಿ ನಮ್ಮ ಖುಷಿಗೆ ಕಾರಣವಾಗಬಹುದು! ಒಂದು ದಿನ ಹೇಳದೇ ಕೇಳದೇ ಮರೆಯಾಗಬಹುದು!
ಸಂದರ್ಭ ಸನ್ನಿವೇಶಗಳನ್ನರಿತು ಮುಂದೆ ಸಾಗಬೇಕು! ನಮ್ಮದ್ದಲ್ಲದ್ದು ನಮ್ಮದಲ್ಲ! ನಮ್ಮ ಸುತ್ತಮುತ್ತಲು ಈ ಕಥಾ ಸಂಕಲನದಲ್ಲಿ ಬರುವ ಅನೇಕ ಪಾತ್ರಗಳು ಎದ್ದು ಕಾಣುತ್ತವೆ. ನಮ್ಮಲ್ಲೂ ಒಬ್ಬ ಪೋಪಟ್-ಅಸಾವರಿ ಲೋಖಂಡೆ ಕಾಣಬಹುದು! ಕುಸುಮಳಂತ ಅನೇಕರ ಅಸಹಾಯಕತೆ ಕಣ್ಣಿಗೆ ಕಾಣಬಹುದು! ಇತ್ಯಾದಿ ಇತ್ಯಾದಿ.
ಪ್ರತಿ ಕಥೆಯ ಶೀರ್ಷಿಕೆ ಅಚ್ಚೊತ್ತಿ ನಿಲ್ಲುತ್ತದೆ. “ನೋ ಪ್ರಸೆಂಟ್ಸ್ ಪ್ಲೀಸ್”, “ಕಣ್ಮರೆಯ ಕಾಡು” “ಕನ್ನಡಿ ಇಲ್ಲದ ಊರು’, ” ಬಕುಲದ ಗಂಧ’, “ಬಾವಿಯಲ್ಲೊಂದು ಬಾಗಿಲು’ ಅದ್ಭುತ ಕಥೆಗಳು. ಕಥೆಗಳು ಎನ್ನುವುದರ ಬದಲಾಗಿ ಕೆಲ ಮುಂಬಯಿ ನಗರವಾಸಿಗಳ ಆರ್ತನಾದವೇ ಸರಿ.
ನನ್ನ ಪ್ರಕಾರ ಕೊನೆಗೊಂದು ದಿನ ಸತ್ತವರು ಇದ್ದಾರೆ ಎಂಬ ಭ್ರಾಂತಿಯಲ್ಲಿ ಬದುಕುವ ಬದಲು, ಬದುಕಿರುವವರ ಜತೆ ಅವರ ನೋವನ್ನು ಹಂಚಿಕೊಂಡು ಅವರನ್ನು ಖುಷಿಪಡಿಸಿ, ಆ ಖುಷಿಯಲ್ಲಿ ನಾವು ಇದ್ದು ಕೆಲವೊಷ್ಟು ದಿನ ಬದುಕಿ ಬಿಡೋಣ.
ಅನುಷಾ ಕೌಂಡಿನ್ಯ, ಕೋಟ