ಹಿಂದೂಗಳು ಅಲ್ಪಸಂಖ್ಯಾಕರೇ…ವಿವಾದವೇಕೆ?
ಈ ವಿಷಯ ಸುಪ್ರೀಂ ಮೆಟ್ಟಿಲೇರಿರುವ ಬಗ್ಗೆ ಒಂದು ನೋಟ...
Team Udayavani, May 14, 2022, 9:55 AM IST
ಭಾರತದ ಆರೇಳು ರಾಜ್ಯಗಳಲ್ಲಿ ಬೇರೆ ಧರ್ಮೀಯರಿಗಿಂತ ಹಿಂದೂಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಇಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾಕ ಎಂದು ಕರೆಯಬಹುದೇ ಎಂಬ ಚರ್ಚೆ ಇದೆ. ಈ ವಿಷಯ ಸುಪ್ರೀಂ ಮೆಟ್ಟಿಲೇರಿರುವ ಬಗ್ಗೆ ಒಂದು ನೋಟ…
ಭಾರತದಲ್ಲಿ ಅಲ್ಪಸಂಖ್ಯಾಕರು ಯಾರು?
ಮುಸ್ಲಿಂ, ಸಿಕ್ಖ್, ಕ್ರೈಸ್ತರು, ಬೌದ್ಧರು, ಜೈನರು ಮತ್ತು ಪಾರ್ಸಿಗಳು. ರಾಷ್ಟ್ರೀಯ ಅಲ್ಪಸಂಖ್ಯಾಕ ಮಂಡಳಿ ಕಾಯ್ದೆ 1992 ಪ್ರಕಾರ, ಇವರನ್ನು ಸರಕಾರವೇ ಅಲ್ಪಸಂಖ್ಯಾಕರು ಎಂದು ಗುರುತಿಸಿದೆ. ಸದ್ಯ ಎಲ್ಲ ರಾಜ್ಯಗಳಲ್ಲಿಯೂ ಇವರನ್ನು ಅಲ್ಪಸಂಖ್ಯಾಕರೆಂದೇ ಗುರುತಿಸಲಾಗಿದೆ. ಈ ಎಲ್ಲಾ ಅಲ್ಪಸಂಖ್ಯಾಕ ಸಮುದಾಯಗಳಲ್ಲಿ ಮುಸ್ಲಿಂ ಸಮುದಾಯವೇ ಅತ್ಯಂತ ದೊಡ್ಡದು. ಅಂದರೆ ಪ್ರತೀ ಸಾವಿರ ಮಂದಿಗೆ 142 ಮಂದಿ ಮುಸ್ಲಿಮರಿದ್ದಾರೆ. ಅದೇ ಪ್ರತೀ ಸಾವಿರ ಮಂದಿಗೆ 6 ಮಂದಿ ಮಾತ್ರ ಪಾರ್ಸಿಗಳಿದ್ದಾರೆ. ಅಂದರೆ ದೇಶದಲ್ಲಿ ಶೇ.14ರಷ್ಟು ಮುಸ್ಲಿಮರಿದ್ದಾರೆ.
ಗುರುತಿಸುವುದು ಯಾರು?
ಕೇಂದ್ರ ಸರಕಾರವೇ ರಾಜ್ಯಗಳಲ್ಲಿ ಅಲ್ಪಸಂಖ್ಯಾಕರು ಯಾರು ಎಂಬುದನ್ನು ಗುರುತಿಸುತ್ತದೆ. ಅಲ್ಲದೆ ಸಂವಿಧಾನದ ಪ್ರಕಾರವಾಗಿ, ದೇಶದಲ್ಲಿ ಅಲ್ಪಸಂಖ್ಯಾಕರು ಎಂದು ಗುರುತಿಸುವುದಕ್ಕೆ ಪ್ರಮುಖವಾಗಿ ಭಾಷೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ತೆಗೆದುಕೊಳ್ಳುತ್ತದೆ. ಇದರಂತೆಯೇ ಕರ್ನಾಟಕ ಸರಕಾರವು, ಭಾಷೆಯ ಆಧಾರದಲ್ಲಿ ಕೆಲವರನ್ನು ಅಲ್ಪಸಂಖ್ಯಾಕರೆಂದು ಗುರುತಿಸಿದೆ. ಉರ್ದು, ತೆಲುಗು, ತಮಿಳು, ಮಲಯಾಳ, ಮರಾಠಿ, ತುಳು, ಲಂಬಾಣಿ, ಹಿಂದಿ, ಕೊಂಕಣಿ ಮತ್ತು ಗುಜರಾತಿ ಭಾಷಿಕರನ್ನು ಅಲ್ಪಸಂಖ್ಯಾಕರೆಂದು ಗುರುತಿಸಿದೆ. ಸಾಮಾನ್ಯವಾಗಿ ರಾಜ್ಯಗಳು ಪ್ರತ್ಯೇಕವಾಗಿ ಅಲ್ಪಸಂಖ್ಯಾಕರ ಪಟ್ಟಿಯನ್ನು ಇರಿಸಿಕೊಳ್ಳುವುದಿಲ್ಲ. ಆದರೆ ಕರ್ನಾಟಕ ಮಾತ್ರ ಇವರನ್ನು ಅಲ್ಪಸಂಖ್ಯಾತರೆಂದು ಗುರುತಿಸಿಕೊಂಡಿದೆ.
ಕೋರ್ಟ್ನಲ್ಲಿ ಆಗುತ್ತಿರುವುದೇನು?
ಮಾರ್ಚ್ನಲ್ಲಿ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ಸರಕಾರ, ಅಲ್ಪಸಂಖ್ಯಾಕರು ಯಾರು ಎಂಬುದನ್ನು ಗುರುತಿಸುವುದು ಕೇಂದ್ರ ಸರಕಾರದ ಹಕ್ಕು ಎಂದಿತ್ತು. ಆದರೆ ಈಗ ಮತ್ತೆ ಅಫಿಡವಿಟ್ ಬದಲಾವಣೆ ಮಾಡಿದ್ದು, ರಾಜ್ಯಗಳ ಜತೆ ಚರ್ಚಿಸಿಯೇ ಈ ಬಗ್ಗೆ ತೀರ್ಮಾನಿಸಬೇಕಾಗಿದೆ ಎಂದಿದೆ. ಇದಕ್ಕೆ ಸಿಟ್ಟಿಗೆದ್ದಿರುವ ಕೋರ್ಟ್ ಮೂರು ತಿಂಗಳಲ್ಲಿ ನಿರ್ಧಾರಕ್ಕೆ ಬರುವಂತೆ ಸೂಚಿಸಿದೆ.
ವಿವಾದವೇಕೆ?
ದೇಶದಲ್ಲಿನ ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ಲಕ್ಷದ್ವೀಪ, ಪಂಜಾಬ್ನಲ್ಲಿ ಬೇರೆ ಸಮುದಾಯಗಳಿಗಿಂತ ಹಿಂದೂಗಳ ಸಂಖ್ಯೆಯೇ ಕಡಿಮೆ ಇದೆ. ಹೀಗಾಗಿ ಈ ರಾಜ್ಯಗಳಿಗೆ ಹಿಂದೂಗಳಿಗೆ ಅಲ್ಪಸಂಖ್ಯಾಕ ಸ್ಥಾನಮಾನ ಕೊಡಬೇಕು ಎಂದು ಅರ್ಜಿ ಸಲ್ಲಿಕೆಯಾಗಿದೆ. ಆದರೆ ಇಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾಕ ಸ್ಥಾನಮಾನ ನೀಡಬಹುದೇ ಎಂಬ ಕುರಿತಾಗಿಯೇ ಚರ್ಚೆಯಾಗುತ್ತಿದೆ.