ಬಿ.ಸಿ. ರೋಡ್: ಹದಗೆಟ್ಟ ಸರ್ವಿಸ್ ರಸ್ತೆ; ಸುಗಮ ಸಂಚಾರಕ್ಕೆ ತೊಡಕು
Team Udayavani, Mar 19, 2017, 11:25 PM IST
ಬಂಟ್ವಾಳ: ಬಿ.ಸಿ.ರೋಡ್ ನಗರದ ಸರ್ವಿಸ್ ರಸ್ತೆ ದುಸ್ಥಿತಿಯಲ್ಲಿದ್ದು, ಸುಗಮ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಫ್ಲೈಓವರ್ ತುದಿಯಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಆಗದೆ ಈ ಹಿಂದೆ ಸಂಚಾರಕ್ಕೆ ತೊಡಕಾಗಿತ್ತು. ಅದು ನಿವಾರಣೆ ಆಗುತ್ತಿದ್ದಂತೆ ಇಲ್ಲಿನ ಸರ್ವಿಸ್ ರಸ್ತೆಯ ಸಮಸ್ಯೆ ಮುನ್ನೆಲೆಗೆ ಬಂದಿದೆ. ಈ ರಸ್ತೆಯು ಗ್ರಾಮೀಣ ರಸ್ತೆಗಿಂತಲೂ ಕಳಪೆಯಾಗಿದೆ. ಇದರಿಂದ ಮತ್ತೆ ಟ್ರಾಫಿಕ್ ಜಾಮ್ ಭೀತಿ ತಲೆದೋರಿದೆ.
ಕಾಯಕಲ್ಪವೇ ಆಗಿಲ್ಲ
ಸರ್ವಿಸ್ ರಸ್ತೆಗೆ ಫ್ಲೈಓವರ್ನಂತೆ ಎರಡು ದಶಕಗಳ ಇತಿಹಾಸವಿದೆ. ಮೇಲ್ಸೇತುವೆ ನಿರ್ಮಾಣ ಆಗುವ ಮೊದಲೇ ಸರ್ವಿಸ್ ರಸ್ತೆ ಹಾಳಾಗಿತ್ತು. ಆದರೂ ಇದುವರೆಗೆ ಅದು ಸುಸ್ಥಿತಿಗೆ ಬಂದಿಲ್ಲ. ಈ ರಸ್ತೆಯ ಚರಂಡಿ ನಿರ್ಮಾಣದ ಕೆಲಸ ಈಗ ಆರಂಭವಾಗಿದ್ದು, ಮಂದಗತಿಯಲ್ಲಿ ನಡೆಯುತ್ತಿದೆ. ಎರಡು ತಿಂಗಳ ಹಿಂದೆ ನೂತನ ದ.ಕ. ಜಿಲ್ಲಾಧಿಕಾರಿ ಬಂದು ಬಿ.ಸಿ.ರೋಡ್ ನಗರ ಪ್ರದಕ್ಷಿಣೆ ಹಾಕಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರು ಬಂದು ನೋಡಿದರೂ ಪ್ರಯೋಜನವಾಗಿಲ್ಲ ಎಂಬುದು ನಾಗರಿಕರ ದೂರು. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹುತೇಕ ಅಭಿವೃದ್ಧಿ ಕಾರ್ಯ ಅಪೂರ್ಣವಾಗಿದ್ದು, ಯಾವುದೂ ಮುಗಿಯುತ್ತಿಲ್ಲ ಎಂಬುದು ಜನರು ಮತ್ತು ವ್ಯಾಪಾರಸ್ಥರ ಕೊರಗು.
ನಾಗರಿಕರ ಯಾತನೆ
ಬಿ.ಸಿ. ರೋಡ್, ಬಂಟ್ವಾಳ, ಪಾಣೆಮಂಗಳೂರು ಮತ್ತು ಮೆಲ್ಕಾರ್ ಭಾಗಗಳಲ್ಲಿ ಯಾವುದೇ ರಸ್ತೆಗಳಲ್ಲಿ ಸಂಚಾರಿ ನಿಯಮಗಳ ಪಾಲನೆ ಸಾಧ್ಯವಿಲ್ಲದಂತಾಗಿದೆ. ಬಿ.ಸಿ.ರೋಡ್ ಸರ್ಕಲ್ನಲ್ಲಿ ಧರ್ಮಸ್ಥಳ ಕಡೆಗೆ ಹೋಗುವುದಿದ್ದರೆ ಬಿ.ಸಿ. ರೋಡ್ ಜಂಕ್ಷನ್ (ನಾರಾಯಣ ಗುರು ವೃತ್ತ)ನಿಂದ ಬೈಪಾಸ್ ರಸ್ತೆಯಲ್ಲಿ ಸಾಗಬೇಕು. ಬಲಕ್ಕೆ ತಿರುಗಿದರೆ ಬಂಟ್ವಾಳ ಪೇಟೆ ಸಿಗುತ್ತದೆ. ನೀವು ಪೇಟೆಗೆ ಹೋಗುವಿರಿ ಎಂದಾದರೆ ಮೈಯೆಲ್ಲ ಕಣ್ಣಿದ್ದರೂ ಸಾಲದು. ಬೈಪಾಸ್ ರಸ್ತೆಯಿಂದ ಬಿ.ಸಿ. ರೋಡ್ ಕಡೆಗೆ ಬರುವ ವಾಹನಗಳು ಕಾಣಿಸೋದು ಕಷ್ಟ. ಯಾವಾಗ ಅಪಘಾತ ಸಂಭವಿಸುತ್ತದೋ ಎಂದು ಹೇಳಲಿಕ್ಕಾಗದು. ರಾತ್ರಿಯಂತೂ ಇನ್ನೂ ಅಪಾಯಕಾರಿ.
ಬಿ.ಸಿ.ರೋಡ್ ವೃತ್ತದಿಂದ ಮಂಗಳೂರು ಕಡೆಗೆ ಮೇಲ್ಸೇತುವೆಯಲ್ಲಿ ಸಾಗಿ ಇಳಿಯುವ ಸಂದರ್ಭ ವಾಹನಗಳು ವೇಗಮಿತಿ ಕಾಪಾಡಿಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ. ಯಾಕೆಂದರೆ ಅದೇ ಸಮಯದಲ್ಲಿ ಅಲ್ಲಿಯೇ ಸರ್ವಿಸ್ ರೋಡ್ನಿಂದ ವಾಹನಗಳು ಹೆದ್ದಾರಿ ಕಡೆ ತಿರುಗುತ್ತಿರುತ್ತವೆ. ಆದರೆ ಅದೇ ಜಾಗದಲ್ಲಿ ಮೇಲ್ಸೇತುವೆ ಮೇಲೆ ಕೆಲ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಇದರಿಂದ ಎದುರಿಗೆ ಬರುವ ವಾಹನಗಳು ಕೂಡಲೆ ಗಮನಕ್ಕೆ ಬಾರದು. ಜೋಡುಮಾರ್ಗದ ಸರಕಾರಿ ಬಸ್ ನಿಲ್ದಾಣ ನಿರ್ಮಾಣದ ಕೆಲಸ ಅಂತಿಮ ಹಂತದಲ್ಲಿದ್ದು ಇಲ್ಲಿನ ಫ್ಲೈ ಓವರ್ ಬಂದು ಸೇರುವಲ್ಲಿ ಇನ್ನೊಂದು ಸರ್ಕಲ್ ಮಾಡಿ ಅಲ್ಲಿ ಸಿಗ್ನಲ್ ವ್ಯವಸ್ಥೆ ಅಳವಡಿಸಬೇಕಾಗಿದೆ ಎಂಬುದು ನಾಗರಿಕರ ಬೇಡಿಕೆ.
ಹೆದ್ದಾರಿ ಇಲಾಖೆ ಕೆಲಸ
ಸರ್ವಿಸ್ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕೆಲಸ ಕಾಮಗಾರಿ ಪ್ರಗತಿಯಲ್ಲಿದೆ. ಕೆಲಸವು ನಿಧಾನವಾಗಿ ನಡೆಯುವುದಾಗಿ ದೂರುಗಳಿವೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ಕೆಲಸ ಇದಾಗಿದ್ದು ಮಳೆಗಾಲಕ್ಕೆ ಮೊದಲು ಮುಗಿಸುವರು. ಇಲ್ಲಿ ಪುರಸಭೆಯಿಂದ ಪೈಪ್ಲೈನ್ ಕೆಲಸ ನಡೆಯಲಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.
-ಪಿ. ರಾಮಕೃಷ್ಣ ಆಳ್ವ, ಅಧ್ಯಕ್ಷರು, ಬಂಟ್ವಾಳ ಪುರಸಭೆ
ಸರ್ವಿಸ್ ರಸ್ತೆ ಅಭಿವೃದ್ಧಿ
ಕುಡಿಯುವ ನೀರಿನ ಪೈಪ್ಲೈನ್ ಕೆಲಸಗಳನ್ನು ಕೆಯುಡಬ್ಲ್ಯುಎಸ್ನೊದಿಗೆ ಮಾಡುವ ಮೂಲಕ ಸರ್ವಿಸ್ ರಸ್ತೆಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಮಾಡಲಾಗುವುದು.
– ಎಂ.ಎಚ್. ಸುಧಾಕರ್, ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ
– ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…