ಉತ್ತರಪ್ರದೇಶದಲ್ಲಿ 100ಕ್ಕೂ ಅಧಿಕ ಹಾಲಿ ಶಾಸಕರಿಗೆ “ಕೈ” ತಪ್ಪಲಿದೆ ಬಿಜೆಪಿ ಟಿಕೆಟ್!
100ಕ್ಕೂ ಹೆಚ್ಚು ಶಾಸಕರು ಅವಕಾಶ ಕಳೆದುಕೊಳ್ಳುವ ಸಾಧ್ಯತೆ
Team Udayavani, Jan 12, 2022, 2:28 PM IST
ಲಕ್ನೋ:ಉತ್ತರ ಪ್ರದೇಶದ ಚುನಾವಣೆಯಲ್ಲಿ ಹೊಸ ರಾಜಕೀಯ ತಂತ್ರಗಾರಿಕೆ ಹೆಣೆಯಲು ಮುಂದಾಗಿರುವ ಆಡಳಿತಾರೂಢ ಬಿಜೆಪಿ ತಳಹಂತದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಶೇ.25ಕ್ಕೂ ಹೆಚ್ಚು ಶಾಸಕರಿಗೆ ಈ ಬಾರಿ ಟಿಕೆಟ್ ನಿರಾಕರಿಸುವ ಚಿಂತನೆ ನಡೆಸಿದೆ.
ಇದನ್ನೂ ಓದಿ:ಸೌರಶಕ್ತಿಯಿಂದ ಓಡಲಿದೆ ವ್ಯಾನ್; ವಿದ್ಯಾರ್ಥಿಗಳ ಕೈಚಳಕದಲ್ಲಿ ತಯಾರಾಗಿದೆ ಸ್ಟೆಲ್ಲಾ ವೀಟಾ
ಚುನಾವಣೆಗೆ ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿರುವ ಬಿಜೆಪಿ ಮೊದಲ ಎರಡು ಹಂತದ ಚುನಾವಣೆಗೆ ಮುಂದಿನ ವಾರಾಂತ್ಯದಲ್ಲಿ ಪಟ್ಟಿ ಬಿಡುಗಡೆ ಮಾಡಲಿದೆ. ಆದರೆ ಅದಕ್ಕೂ ಮುನ್ನ ತಳಹಂತದಲ್ಲಿ ಸಾರ್ವಜನಿಕ ವಿರೋಧ ಎದುರಿಸುತ್ತಿರುವ ಶಾಸಕರನ್ನು “ಸೋಸು’ವುದಕ್ಕೆ ಚಿಂತನೆ ನಡೆಸಲಾಗಿದೆ. ಒಟ್ಟು ಸಂಖ್ಯಾ ಬಲದ ಶೇ.25ಷ್ಟು ಎಂದರೆ ಹೆಚ್ಚು ಕಡಿಮೆ 100ಕ್ಕೂ ಹೆಚ್ಚು ಶಾಸಕರು ಈ ಬಾರಿ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸೋಮವಾರ ನಡೆದ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಈ ಹೊಸ ತಂತ್ರಗಾರಿಕೆ ಪ್ರಸ್ತಾಪವಾಗಿದೆ. ಇದರ ಬೆನ್ನಲ್ಲೆ ಬಿಜೆಪಿಯ ಹಾಲಿ ಶಾಸಕರು ಪಕ್ಷ ತೊರೆದು ಅನ್ಯ ಪಕ್ಷಗಳ ಮೂಲಕ ಟಿಕೆಟ್ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜತೆಗೆ ಈ ವಾರದಲ್ಲೇ ವರಿಷ್ಠರು ದಿಲ್ಲಿಯಲ್ಲಿ ಸಭೆ ನಡೆಸಲಿದ್ದಾರೆ. ಹಾಲಿ ಶಾಸಕರ ಬಗ್ಗೆ ಬಿಜೆಪಿ ಈಗಾಗಲೇ ಕಾರ್ಯಕರ್ತರು ಹಾಗೂ ಸರ್ವೆ ಮೂಲಕ ಮಾಹಿತಿ ಪಡೆದುಕೊಂಡಿದ್ದು ಸೋಲಿನ ಸಾಧ್ಯತೆ ಇರುವವರಿಗೆ ಟಿಕೆಟ್ ನೀಡದೇ ಇರಲು ನಿರ್ಧರಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ಈ ವಿಚಾರ ಸಂಬಂಧ ಉತ್ತರಪ್ರದೇಶದಲ್ಲಿ ಭಾರಿ ವಿವಾದ ಸೃಷ್ಟಿಯಾಗುವ ಸಾಧ್ಯತೆ ಇದೆ.