ಗಂಡನ ಮಾನಸಿಕ, ದೈಹಿಕ ಹಿಂಸೆ: ಗೃಹಿಣಿ ಆತ್ಮಹತ್ಯೆ
Team Udayavani, Feb 24, 2023, 5:17 AM IST
ಪಡುಬಿದ್ರಿ: ಪತಿಯ ಮಾನಸಿಕ ಹಾಗೂ ದೈಹಿಕ ಹಿಂಸೆಯ ಕಾರಣದಿಂದ ನೊಂದು ಮಮತಾ (42) ಅವರು ಮನೆಯ ಅಡುಗೆ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣದ ವಿವರ
ಮೀನು ಹಾಗೂ ಮೀನಿನ ಹೊಟೇಲ್ ವ್ಯವಹಾರ ಮಾಡಿಕೊಳ್ಳುತ್ತಿದ್ದ ಬೋಳಾರದ ಮಮತಾ ಅವರನ್ನು 2011ರಲ್ಲಿ ಪಡುಬಿದ್ರಿ ಬೀಡು ನಿವಾಸಿ ಚೇತನ್ ವಿವಾಹವಾಗಿದ್ದರು. ಚೇತನ್ ಆಗಾಗ್ಗೆ ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಮಮತಾ ಮಂಗಳೂರಿನಲ್ಲಿರುವ ಅಣ್ಣ ಗಿರೀಶ್ ಸುವರ್ಣ ಅವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ತಾನು ಹಣ ಕದ್ದಿರುವುದಾಗಿ ಆಪಾದನೆ ಹೊರಿಸಿ ತನಗೆ ಪತಿ ಚೇತನ್ ನೀಡಿದ್ದಾಗಿ ಆಕೆ ದೂರಿಕೊಂಡಿದ್ದಳು. ಆಕೆಯನ್ನು ತಾನು ಸಮಾಧಾನಪಡಿಸಿದ್ದೆ ಎಂದು ಗಿರೀಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಮತಾ ತನ್ನ ತಾಯಿ, ಅಣ್ಣ ಹಾಗೂ ಅಕ್ಕ ಭಾರತಿಗೂ ಗಂಡನ ಮನೆಯಲ್ಲಿ ತಾನು ಅನುಭವಿಸುತ್ತಿದ್ದ ಹಿಂಸೆಯ ಬಗ್ಗೆ ದೂರವಾಣಿ ಮೂಲಕ ತಿಳಿಸುತ್ತಿದ್ದಳು.
ಹಣಕ್ಕಾಗಿ ಬೇಡಿಕೆ
ತಾನು ಕೂಡ ಹೊಟೇಲ್ ವ್ಯವಹಾರ ಮಾಡುತ್ತಿದ್ದು, ಹಣ ನೀಡುವಂತೆ ಒತ್ತಾಯಿಸಿ ಆರು ತಿಂಗಳ ಹಿಂದೆ ಚೇತನ್ ತನಗೆ ಕರೆ ಮಾಡಿದ್ದ. ಹಣ ನೀಡುವಂತೆ ಆತನು ಮಮತಾಳಿಗೂ ಕಿರುಕುಳ ನೀಡಿದ್ದ. ಆಕೆಯ ಹೊಟ್ಟೆಗೂ ತುಳಿದಿದ್ದ. ಆತನ ಚಿತ್ರಹಿಂಸೆಯಿಂದಲೇ ತನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ವಿರುದ್ಧ ಕ್ರಮ ಜರಗಿಸುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪಡುಬಿದ್ರಿ ಪೊಲೀಸರು ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.