Channapatna; ಗ್ರಾಮದ ಒಳಗೆ ಓಡಾಡಿದ ಒಂಟಿ ಸಲಗ; ಭಯಭೀತರಾದ ಜನತೆ
Team Udayavani, Sep 15, 2023, 12:33 PM IST
ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ರಾತ್ರಿ ಸುಮಾರು 11.30 ಸುಮಾರಿಗೆ ಒಂಟಿ ಸಲಗವೊಂದು ರಾಜಾರೋಷವಾಗಿ ಓಡಾಡಿದ ಪ್ರಸಂಗ ಗುರುವಾರ ರಾತ್ರಿ ನಡೆದಿದೆ.
ಆನೆಯು ಗ್ರಾಮದ ಬಂಡೂರುಕೆರೆಯ ಕಡೆಯಿಂದ ಮುಖ್ಯರಸ್ತೆ ದಾಟಿ ಉಪನ್ಯಾಸಕ ಬಿ.ಪಿ ತಿಮ್ಮೇಗೌಡರವರ ಹಿತ್ತಲಿಗೆ ಬಂದಿದೆ. ಅಲ್ಲಿ ಇರುವ ಸೌದೆಯನ್ನು ಉರುಳಿಸಿ ವಿದ್ಯುತ್ ವೈರ್ ನ್ನು ಕಿತ್ತು ಹಾಕಿ ದಾಂಧಲೆ ನಡೆಸಿದೆ. ಅಲ್ಲಿಂದ ವಿ.ಎಸ್.ಎಸ್.ಎನ್ ಅಧ್ಯಕ್ಷ ದೊರೆಸ್ವಾಮಿಯವರ ಮನೆಯ ಹತ್ತಿರ ಬಂದು ಅಲ್ಲಿಂದ ಹಾಲಿನ ಡೈರಿಯ ಹತ್ತಿರ ಓಡಾಡಿದೆ. ನಂತರ ಬಿ.ಟಿ. ಶಿವಮಲ್ಲೇಗೌಡರ ಹಾಗೂ ಜಯಮುದ್ದಪ್ಪರವರ ಮನೆ ಬಳಿ ಓಡಾಡಿದ ಸಲಗವು ಜನರ ಗಲಾಟೆಯಿಂದ ಕಾಡಿನ ಕಡೆಗೆ ತೆರಳಿದೆ.
ಇದನ್ನೂ ಓದಿ:Anantnag Encounter; ಮೂವರು ಯೋಧರು ಹುತಾತ್ಮರಾಧ ಬೆನ್ನಲ್ಲೇ ಮತ್ತೋರ್ವ ನಾಪತ್ತೆ!
ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಿನ ಅಂಚಿನಲ್ಲಿ ಸಂಚರಿಸುತ್ತಿದ್ದ ಆನೆಗಳು ಇತ್ತೀಚೆಗೆ ನಾಡಿಗೆ ಬರುತ್ತಿವೆ. ಇದರ ಕಡೆಗೆ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.