Rajasthan: ಗುರ್ಜರ್ ಮತ ಸೆಳೆಯಲು ಮೋದಿ ಯತ್ನ
- "ಪೈಲಟ್ಗೆ ಕಾಂಗ್ರೆಸ್ನಿಂದ ಅವಮಾನ" ಎಂದು ಒತ್ತಿಹೇಳಿದ ಮೋದಿ
Team Udayavani, Nov 23, 2023, 9:46 PM IST
ನವದೆಹಲಿ: “ಕಾಂಗ್ರೆಸ್ಗಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ಗುರ್ಜರ್ ವ್ಯಕ್ತಿಯ ಪುತ್ರನನ್ನು ಕಾಂಗ್ರೆಸ್ ರಾಜಸ್ಥಾನದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ “ಹಾಲಿನಿಂದ ಕೀಟವನ್ನು ಕಿತ್ತೆಸೆದಂತೆ’ ಹೊರಗೆಸೆಯಿತು. ಈಗ ಮಾತ್ರವಲ್ಲ, ಹಿಂದೆಯೂ ಗುರ್ಜರ್ಗಳಿಗೆ ಕಾಂಗ್ರೆಸ್ ಅವಮಾನಿಸುತ್ತಲೇ ಬಂದಿದೆ”.
ರಾಜಸ್ಥಾನದ ಕಾಂಗ್ರೆಸ್ ನಾಯಕ, ಮಾಜಿ ಡಿಸಿಎಂ ಸಚಿನ್ ಪೈಲಟ್ ಅವರ ಹೆಸರನ್ನು ಎತ್ತದೇ ಅವರ ಕುರಿತು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಈ ರೀತಿ ವಾಗ್ಧಾಳಿ ನಡೆಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದರು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಸ್ಥಾನದಿಂದ ಸಚಿನ್ ಪೈಲಟ್ರನ್ನು ತೆಗೆದುಹಾಕಲಾಗಿತ್ತು. ಇದೇ ವಿಚಾರವನ್ನು ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಗುರ್ಜರ್ ಸಮುದಾಯವನ್ನು ಎತ್ತಿಕಟ್ಟಲು ಬಳಸಿದ ಪ್ರಧಾನಿ ಮೋದಿ ರಾಜ್ಸಮಂದ್ನಲ್ಲಿ ಗುರುವಾರ ನಡೆದ ರ್ಯಾಲಿಯಲ್ಲಿ ಮಾತನಾಡಿ, “ಗುರ್ಜರ್ ವ್ಯಕ್ತಿಯ ಪುತ್ರ ಪಕ್ಷಕ್ಕಾಗಿ ಪ್ರಾಣ ಕೊಡುತ್ತಾನೆ. ಆದರೂ ಅವರನ್ನು ಪಕ್ಷ ಕಿತ್ತೆಸೆಯುತ್ತದೆ. ಹಿಂದೆ ರಾಜೇಶ್ ಪೈಲಟ್ ಜತೆಗೂ ಕಾಂಗ್ರೆಸ್ ಇದೇ ರೀತಿ ವರ್ತಿಸಿತ್ತು. ಈಗ ಅವರ ಮಗನೊಂದಿಗೂ ಹೀಗೆಯೇ ವರ್ತಿಸುತ್ತಿದೆ. ಗುರ್ಜರ್ಗಳನ್ನು ಅವಮಾನಿಸುವುದು ಕಾಂಗ್ರೆಸ್ಗೆ ಚಾಳಿಯಾಗಿಬಿಟ್ಟಿದೆ’ ಎಂದು ಹೇಳಿದ್ದಾರೆ.
ಪೈಲಟ್ ಪರ ನಿಂತಿರುವ ಗುರ್ಜರ್ ಸಮುದಾಯವನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟಿ, ಆ ಮತಗಳು ಬಿಜೆಪಿಯತ್ತ ಬರುವಂತೆ ಮಾಡುವುದು ಮೋದಿಯವರ ಈ ಆರೋಪದ ಹಿಂದಿನ ಲೆಕ್ಕಾಚಾರ ಎಂದು ವಿಶ್ಲೇಷಿಸಲಾಗುತ್ತಿದೆ.
ಕೆಸಿಆರ್ ವಿರುದ್ಧ ಖರ್ಗೆ ಕೆಂಡ:
ಮಾಜಿ ಪ್ರಧಾನಿ ಇಂದಿರಾಗಾಂಧಿ ಆಡಳಿತದ ಬಗ್ಗೆ ಟೀಕಿಸಿದ್ದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಂಡವಾಗಿದ್ದಾರೆ. ಮಂಗಳವಾರ ಮಾತನಾಡಿದ ಕೆಸಿಆರ್, ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಇಂದಿರಮ್ಮ ರಾಜ್ಯವನ್ನು ಮರಳಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಇಂದಿರಾ ಆಡಳಿತದಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ದಲಿತರ ಪರಿಸ್ಥಿತಿ ಸ್ವಲ್ಪವೂ ಸುಧಾರಿಸಲ್ಲ ಎಂದು ಹೇಳಿದ್ದರು. ಅದಕ್ಕೆ ಗುರುವಾರ ನಲ್ಗೊಂಡಾ ಮತ್ತು ಅಲಾಂಪುರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ತಿರುಗೇಟು ನೀಡಿದ ಖರ್ಗೆ, “ಕೆಸಿಆರ್ ಈಗ ಇಂದಿರಾಗಾಂಧಿ ಅವರನ್ನೂ ಹೀಯಾಳಿಸುತ್ತಿದ್ದಾರೆ. ಅವರು ಇಂದಿರಾ ಅವಧಿಯ ಬಡತನದ ಬಗ್ಗೆ ಮಾತನಾಡುತ್ತಾರೆ. ಕೆಸಿಆರ್ ಅವರೇ, ದೇಶದಲ್ಲಿ ಹಸಿರುಕ್ರಾಂತಿ, ಮಧ್ಯಾಹ್ನದ ಬಿಸಿಯೂಟ, 20 ಅಂಶಗಳ ಯೋಜನೆ ಜಾರಿಯಾದಾಗ ನೀವು ಎಲ್ಲಿದ್ರಿ’ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ, ಹೈದರಾಬಾದ್ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಕೆಲವೇ ವರ್ಷಗಳಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ. ನೀವೆಲ್ಲರೂ ಬಿಜೆಪಿಗೆ ಮತ ಹಾಕಿದರೆ ತೆಲಂಗಾಣ ಕೂಡ ಈ ಯಶಸ್ಸಿನ ಭಾಗವಾಗಲಿದೆ ಎಂದು ಹೇಳಿದ್ದಾರೆ.
ಅವಧಿ ವಿಸ್ತರಣೆ ಸುದ್ದಿ ಸುಳ್ಳು: ಚುನಾವಣಾ ಆಯೋಗ
ಮಧ್ಯಪ್ರದೇಶ ಮುಖ್ಯ ಕಾರ್ಯದರ್ಶಿ ಇಕ್ಬಾಲ್ ಸಿಂಗ್ ಬೈನ್ಸ್ ಅವರ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ ಎಂಬ ಸುದ್ದಿಯನ್ನು ಆಯೋಗ ಅಲ್ಲಗಳೆದಿದೆ. ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ. ಬೈನ್ಸ್ ಅವರ ಕಾರ್ಯಾವಧಿ ನ.30ರಂದು ಕೊನೆಗೊಳ್ಳಲಿದೆ. ಆದರೂ, ಆಯೋಗವು ಅವರ ಅವಧಿ ವಿಸ್ತರಣೆಗೆ ಒಪ್ಪಿಗೆ ನೀಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಇದು ಸುಳ್ಳು ಸುದ್ದಿ. ಇಂತಹ ಯಾವ ನಿರ್ಧಾರವನ್ನೂ ನಾವು ಕೈಗೊಂಡಿಲ್ಲ ಎಂದು ಆಯೋಗ ತಿಳಿಸಿದೆ.
10 ಗ್ಯಾರಂಟಿಗಳ ಆಶ್ವಾಸನೆಯೊಂದಿಗೆ ಹಿಮಾಚಲದಲ್ಲಿ 2022ರಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಇನ್ನೂ ಅವುಗಳನ್ನು ಜಾರಿ ಮಾಡಿಲ್ಲ. ಇನ್ನು, ತೆಲಂಗಾಣದ ಬಿಆರ್ಎಸ್ ಸರ್ಕಾರ ಕೇವಲ ಒಂದು ಕುಟುಂಬಕ್ಕಾಗಿ ಕೆಲಸ ಮಾಡುತ್ತಿದೆ. ರಾಜ್ಯ ಅಭಿವೃದ್ಧಿ ಆಗಬೇಕೆಂದರೆ ಬಿಜೆಪಿಗೆ ಮತ ಹಾಕಿ.
– ಜೈರಾಮ್ ಠಾಕೂರ್, ಹಿಮಾಚಲ ಪ್ರದೇಶ ಮಾಜಿ ಸಿಎಂ
ಕೆಂಪು ಡೈರಿ ವಿಚಾರ ಮತ್ತು ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣವು ರಾಜಸ್ಥಾನ ಮತ್ತು ಛತ್ತೀಸ್ಗಢ ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹೂಡಿರುವ “ಸಂಚು’. ಈ ಕುರಿತು ಸುಪ್ರೀಂ ಕೋರ್ಟ್ನ ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಯಬೇಕು.
– ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ರಾಜೇಗೆ ಸಿಗಲಿದೆಯೇ ಮತ್ತೆ “ರಾಣಿ” ಭಾಗ್ಯ?
ರಾಜಸ್ಥಾನ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಗುರುವಾರ ತೆರೆಬಿದ್ದಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸದೇ ಬಿಜೆಪಿ ಈ ಚುನಾವಣೆ ಎದುರಿಸುತ್ತಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ರಾಜ್ಯಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ, ಪ್ರಧಾನಿ ಮೋದಿ ಜತೆಯೂ ವೇದಿಕೆ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ಈ ಚುನಾವಣಾ ಪರ್ವದಲ್ಲಿ ರಾಜೇ ಒಂದೇ ಒಂದು ಮಾಧ್ಯಮ ಸಂದರ್ಶನವನ್ನೂ ನೀಡಿಲ್ಲ.
ಈ ಎಲ್ಲದರ ಮಧ್ಯೆ, ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿರುವ ಏಕೈಕ ಪ್ರಶ್ನೆಯೆಂದರೆ- ಬಿಜೆಪಿ ಹೈಕಮಾಂಡ್ ವಸುಂಧರಾ ರಾಜೇ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಏಕೆ ಘೋಷಿಸಿಲ್ಲ ಎನ್ನುವುದು. ವಸುಂಧರಾ ಅವರು ಈ ಹಿಂದೆ ಸಿಎಂ ಆಗಿದ್ದಾಗ ಎಷ್ಟು ಪ್ರಭಾವ ಹೊಂದಿದ್ದರೋ, ಅದೇ ಪ್ರಭಾವ, ಅದೇ ವರ್ಚಸ್ಸು, ಅದೇ ಜನಪ್ರಿಯತೆ ಈಗಲೂ ಇದೆ. ಅವರ ಭಾಷಣ ಕೇಳಲು ಮೂಲೆ ಮೂಲೆಗಳಿಂದಲೂ ಜನ ಬರುತ್ತಾರೆ. ರಾಜೇ ಅವರ 60 ಮಂದಿ ಆಪ್ತರಿಗೆ ಬಿಜೆಪಿ ಟಿಕೆಟ್ ಕೂಡ ನೀಡಿದೆ. ಹೀಗಾಗಿ ಬಿಜೆಪಿಗೆ ಬಹುಮತ ಬಂದರೂ, ಹೆಚ್ಚಿನ ಶಾಸಕರ ಬೆಂಬಲವೂ ರಾಜೇಗೆ ಸಿಗಲಿದೆ ಎನ್ನುವುದು ಅವರ ಬೆಂಬಲಿಗರ ನಂಬಿಕೆ.
ಇನ್ನು, ಪ್ರಧಾನಿ ಮೋದಿಯವರ ಮುಖ ನೋಡಿ ಮತ ಹಾಕಬೇಕೇ ವಿನಾ ಸಿಎಂ ಅಭ್ಯರ್ಥಿಯನ್ನು ನೋಡಿ ಅಲ್ಲ ಎನ್ನುವುದು ಕೆಲವು ಮುಖಂಡರ ಮಾತು. ಇದು ರಾಜೇ ಬೆಂಬಲಿಗರನ್ನು ಮಾತ್ರವಲ್ಲದೇ ಮತದಾರರನ್ನೂ ಗೊಂದಲಕ್ಕೀಡು ಮಾಡಿದೆ. ಈ ಎಲ್ಲದರ ನಡುವೆ, ಮಾಧ್ಯಮದವರು ಮೈಕ್ ತಂದು ಮುಂದಿಟ್ಟರೂ ರಾಜೇ ಮಾತ್ರ ಕೇವಲ ನಸುನಕ್ಕು ಸುಮ್ಮನಾಗುತ್ತಾರೆ. ಡಿ.3ರ ಬಳಿಕವೇ ಮಾತನಾಡುತ್ತೇನೆ ಎನ್ನುವುದು ಅವರ ದೃಢ ನಿರ್ಧಾರವೇ? ರಾಜಸ್ಥಾನದ ಅಧಿಕಾರದ ಚುಕ್ಕಾಣಿ ಮತ್ತೆ “ರಾಣಿ’ಯ ಕೈಗೆ ಬರಲಿದೆಯೇ? ಕಾದು ನೋಡುವುದಷ್ಟೇ ಉಳಿದಿರುವ ದಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RTO: ಇನ್ನು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ಗಾಗಿ ಆರ್ಟಿಒ ಕಚೇರಿಗೆ ಹೋಗ್ಬೇಕಿಲ್ಲ!
Lucknow; ಶಕ್ತಿಯನ್ನು ಮಹಾಶಕ್ತಿ ಆಗಿ ಪರಿವರ್ತಿಸುವೆ: ಮೋದಿ
Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ
GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ
Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್ ಕಿಶೋರ್ ಭವಿಷ್ಯ