ಭೂತ ಬಂಗಲೆಯಾಗಿ ಪರಿವರ್ತನೆ; ಇನ್ನೂ ಬಾಗಿಲು ತೆರೆಯದ ಪ್ರವಾಸಿ ಮಂದಿರ
Team Udayavani, Mar 5, 2024, 2:25 PM IST
ಉದಯವಾಣಿ ಸಮಾಚಾರ
ಕುಳಗೇರಿ ಕ್ರಾಸ್: ಇಲ್ಲಿಯ ಪ್ರವಾಸಿ ಮಂದಿರ ಕಾಮಗಾರಿ ಪೂರ್ಣಗೊಳ್ಳದೇ ಇದ್ದರೂ ಲೆಕ್ಕಿಸದೆ ವಿಧಾನಸಭೆ ಚುನಾವಣೆ ಮುಂಚೆ ಉದ್ಘಾಟಿಸಲಾಗಿದೆ.
ಲೋಕೋಪಯೋಗಿ ಇಲಾಖೆ ಯಿಂದ ಸುಮಾರು 1.5 ಕೋಟಿ ರೂ.ವೆಚ್ಚದಲ್ಲಿ ಕಟ್ಟಲಾದ ನೂತನ ಪ್ರವಾಸಿ ಮಂದಿರವನ್ನು
ಸಿಎಂ ಸಿದ್ದರಾಮಯ್ಯನವರು ಬಾದಾಮಿ ಶಾಸಕರಿದ್ದ ಸಂದರ್ಭದಲ್ಲಿ ಉದ್ಘಾಟಿಸಿದ್ದಾರೆ. ಹೊರ ನೋಟಕ್ಕೆ ಕಾಮಗಾರಿ ಪೂರ್ಣಗೊಂಡಂತೆ ಕಂಡರೂ ಕಟ್ಟಡದಲ್ಲಿ ಮುಳ್ಳು, ಕಸ, ಕಡ್ಡಿ ತುಂಬಿಕೊಂಡಿದೆ.
ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ಬಾಗಿಲು ತೆರೆಯದೆ ಪ್ರವಾಸಿ ಮಂದಿರ ಕಟ್ಟಡ ಹಾಳಾಗಿ ಹೋಗುತ್ತಿದೆ. ಭೂತ ಬಂಗಲೆಯಾಗಿ ಪರಿವರ್ತನೆಯಾಗಿದೆ. ಅಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿ
ಪರಿವರ್ತನೆಯಾಗಿದೆ.
ಬ್ರಿಟೀಷರ ಕಾಲದ ಪ್ರವಾಸಿ ಮಂದಿರ ಹಳೆಯದಾಗಿದ್ದರ ಪರಿಣಾಮ ಸೋಲಾರ್, ಮಂಚ, ಫರ್ನಿಚರ್ ಹೀಗೆ ಒಂದೂವರೆ ಕೋಟಿ ರೂ. ಸರ್ಕಾರದ ಅನುದಾನ ಬಳಸಿ ನೂತನ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ಸಂಬಂಧಿಸಿದ ಪಿಡಬ್ಲೂಡಿ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಲ್ಲಿ ದುಡ್ಡಿಲ್ಲ. ಗುತ್ತಿಗೆದಾರನಿಗೆ ಬಿಲ್ ಜಮಾ ಆಗಿಲ್ಲ. ಸ್ವಲ್ಪ ತಡೀರಿ ಎಂದು ಕುಂಟು ನೆಪ ಹೇಳುತ್ತ ಕಾಲದೂಡುತ್ತಿದ್ದಾರೆ. ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಂಡು ಪಾಳುಬಿದ್ದ ನೂತನ ಪ್ರವಾಸಿ ಮಂದಿರ
ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.
ಕಟ್ಟಡ ಪೂರ್ಣ ಮುಗಿಸಿದ್ದೇನೆ. ನನಗೆ ಸರ್ಕಾರದಿಂದ ಫೇಮೆಂಟ್ (ಬಿಲ್)ಆಗಿಲ್ಲ. ಈಗಾಗಲೇ ಈ ಬಿಲ್ಡಿಂಗ್ನ ತಾತ್ಕಾಲಿಕ ವಿದ್ಯುತ್ ಬಿಲ್ ತಿಂಗಳಿಗೊಮ್ಮೆ ನಾನೇ ತುಂಬುತ್ತಿದ್ದೇನೆ. ಈ ತಿಂಗಳಲ್ಲಿ ಬಿಲ್ ಬರಬಹುದು. ಕಾದು ನೋಡುತ್ತೇನೆ.
ಸುರೇಶ ತಿರಕನ್ನವರ, ಗುತ್ತಿಗೆದಾರ
ಗುತ್ತಿಗೆದಾರನಿಗೆ ಬಿಲ್ ಬಾಕಿ ಇದೆಯಂತೆ. ಪೂರ್ಣ ಫೇಮಂಟ್ ಆಗಿಲ್ವಂತೆ. ಅದಕ್ಕೆ ನೂತನ ಪ್ರವಾಸಿ ಮಂದಿರದ ಬೀಗ ತೆರೆದಿಲ್ವಂತೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆ.
ಎಂ.ಆರ್. ಚಿತ್ತರಗಿ, ಸೆಕ್ಷೆನ್ ಆಫೀಸರ್.
ಮಹಾಂತಯ್ಯ ಹಿರೇಮಠ