ಹಸುವಿನಿಂದ ಹಸನಾದ ಬದುಕು
Team Udayavani, Jun 19, 2017, 5:37 PM IST
ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರಂ ಸಮೀಪದ ಕೊರಲಿಕೊಪ್ಪದ ದೇವರಾಜ ಗೌಡ ಹೈನುಗಾರಿಕೆಯಲ್ಲಿ ಯಶಸ್ಸಿನ ಹೆಜೆುjಡುತ್ತಾ ಸಾಗಿದ್ದಾರೆ.
ಈ ಮೊದಲು ಜೀವನ ನಿರ್ವಹಣೆಗೆ ಬೇರೆಯವರ ಅಡಕೆ-ತೆಂಗಿನ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಇವರು ಬಡತನದ ಬೇಗೆಯ ಸಂಕಷ್ಟದಲ್ಲೂ ಇಬ್ಬರು ಗಂಡು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಅದಕ್ಕೂ ಕೈ ಹಿಡಿದದ್ದು ಹೈನುಗಾರಿಕೆ. ಮಕ್ಕಳು ದೊಡ್ಡವರಾಗಿ ಉದ್ಯೋಗಸ್ಥರಾಗಿ, ಕೊರಲಿಕೊಪ್ಪದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿಸಿದರು. ಪರಿಶ್ರಮದ ಬದುಕು ಸಾಗಿಸಿ ಬಂದ ಇವರಿಗೆ ಮನೆಯಲ್ಲಿ ಸುಮ್ಮನೆ ಕುಳಿತು ಉಣ್ಣಲು ಇಷ್ಟವಾಗಲಿಲ್ಲ. ಅದಕ್ಕಾಗಿ ಮೂರುವರೆ ವರ್ಷಗಳ ಹಿಂದೆ ಹಸು ಸಾಕಣೆ ಆರಂಭಿಸಿದರು. ಹೊಸದಾಗಿ ಕಟ್ಟಿದ ಮನೆಯ ಬಲ ಪಕ್ಕದಲ್ಲಿ ಬಿದಿರು ಮತ್ತು ತೆಂಗಿನ ಗರಿಗಳನ್ನು ಬಳಸಿ ಚಿಕ್ಕ ಕೊಟ್ಟಿಗೆ ರೂಪಿಸಿಕೊಂಡರು.
ಶ್ರಮದ ಹಾದಿ
ಆರಂಭದಲ್ಲಿ ಒಂದು ಹಸುವಿತ್ತು. ನಂತರ ಇನ್ನೂ ಎರಡು ಹಸು ಖರೀದಿಸಿ ಹೈನುಗಾರಿಕೆ ವೃತ್ತಿ ಹೆಚ್ಚಿಸಿಕೊಂಡರು. ಜೊತೆಗೆ ಇವರು ಮೊದಲು ಸಾಕಿದ ಹಸು, ಕರು ಹಾಕಿ ಆ ಕರುಗಳು ದೊಡ್ಡದಾದವು. ಹೀಗೆ ಒಂದು ಹಸುವಿನಿಂದ ಆರಂಭಿಸಿದ ಇವರ ಹೈನುಗಾರಿಕೆ ಈಗ ಕರುಗಳು ಸೇರಿ 9 ಹಸುಗಳ ಮಟ್ಟಕ್ಕೆ ಬಂದು ನಿಂತಿದೆ. ಇವುಗಳ ಪೈಕಿ ಜರ್ಸಿ 2, ಹೆಚ್.ಎಫ್. 4 ಹಾಗೂ ಮಿಶ್ರತಳಿಯ 3 ಹಸುಗಳಿವೆ. ಇದರಲ್ಲಿ ಹಾಲು ಕೊಡುವ ಹಸುಗಳು 4. ಉಳಿದವು ಬೆಳವಣಿಗೆಯ ಹಂತದಲ್ಲಿವೆ. ನೀರು ಪೂರೈಕೆಗೆ ಮನೆಯಂಗಳದಲ್ಲಿ ಕೊಳವೆ ಬಾವಿ ತೆಗೆಸಿದ್ದಾರೆ. ಮನೆ ಹಿಂಭಾಗದ ಖಾಲಿ ಪ್ರದೇಶದಲ್ಲಿ ಹಸಿರು ಹುಲ್ಲು ಸಹ ಬೆಳೆಯಲಾರಂಭಿಸಿದರು. ಒಣ ಹುಲ್ಲು, ಹಸಿರು ಹುಲ್ಲು ಮತ್ತು ಪಶು ಆಹಾರವನ್ನು ಅಗತ್ಯ ಪ್ರಮಾಣದಲ್ಲಿ ನೀಡುತ್ತಾ ಹೈನುಗಾರಿಕೆಯಲ್ಲಿ ನಿರತರಾಗಿದ್ದಾರೆ.
ಪ್ರತಿ ನಿತ್ಯ ಹಾಲು ಕರೆದು ಆನಂದಪುರಂನ ಡೈರಿಗೆ ಮಾರಾಟ ಮಾಡುತ್ತಾರೆ. ಬಳಿಕ ಕೊಟ್ಟಿಗೆ ಸ್ವತ್ಛಗೊಳಿಸಿ, ನೆಲವನ್ನು ತೊಳೆದು ಜಾನುವಾರುಗಳಗೆ ಸ್ನಾನ ಮಾಡಿಸುತ್ತಾರೆ. ಪ್ರತಿ ನಿತ್ಯ ಒಂದು ಹಸುಗೆ ಸರಾಸರಿ 4 ಕಟ್ಟು ಒಣಹುಲ್ಲು, 3 ಕಟ್ಟು ಹಸಿ ಹುಲ್ಲು,3.5 ಕೆ.ಜಿ.ಯಷ್ಟು ಪಶು ಆಹಾರ ನೀಡುತ್ತಾರೆ.
ಲಾಭದ ಲೆಕ್ಕಾಚಾರ
ಪ್ರತಿ ನಿತ್ಯ ಸರಾಸರಿ 60 ಲೀಟರ್ ಹಾಲು ಮಾರುತ್ತಾರೆ. ಒಂದು ಲೀಟರ್ ಗೆ ರೂ26 ರಂತೆ ದರ ಸಿಗುತ್ತದೆ. ಜೊತೆಗೆ ಪ್ರತಿ ಲೀಟರ್ಗೆ ರೂ.5 ಪ್ರೋತ್ಸಾಹ ಧನ ಸಹ ದೊರೆಯುತ್ತದೆ. ಅಂದರೆ ಲೀಟರ್ ಒಂದಕ್ಕೆ 31ರೂ. ದಿನವೊಂದಕ್ಕೆ ಇವರಿಗೆ 60 ಲೀ.ಹಾಲು ಮಾರಾಟದಿಂದ ರೂ.1, 860 ಆದಾಯ. ಆಹಾರ, ಮೇವು ಹೀಗೆ ಎಲ್ಲ ರೀತಿಯ ಲೆಕ್ಕ ಹಾಕಿದರೆ ದಿನವೊಂದಕ್ಕೆ ರೂ.1000 ಖರ್ಚು ತಗಲುತ್ತದೆ. ಆದರೂ ಸರಾಸರಿ ರೂ.850 ಲಾಭ ಅಂದರೆ 25,800ರೂ.
ವರ್ಷಕ್ಕೊಮ್ಮ 12 ಲೋಡ್ (ಕ್ಯಾಂಟರ್)ಸಗಣಿ ಗೊಬ್ಬರ ಮಾರುತ್ತಾರೆ.ಒಂದು ಲೋಡ್ ಗೆ ರೂ.7000 ದೊರೆಯುತ್ತದೆ. ಅದರಿಂದ 80 ಸಾವಿರ ಆದಾಯ.
– ಎನ್.ಡಿ.ಹೆಗಡೆ ಆನಂದಪುರಂ