ಕಾಳಿ… ಬರುವಳೇ ಹೇಳಿ ?   


Team Udayavani, Jan 27, 2018, 4:25 PM IST

25884741.jpg

ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಅಂತರ್ಜಲದ ಪ್ರಮಾಣ ಪಾತಾಳಕ್ಕೆ ಕುಸಿದಿದೆ. ಕಣ್ಣ ಮುಂದಿರುವ ಪರಿಹಾರ ಕಾಳಿ ನದಿ.  ಈ ಮೂರೂ ಜಿಲ್ಲೆಗಳಲ್ಲಿ ಈ ನದಿ ಹರಿಯುತ್ತದೆ. ಆದರೆ, ಕಾಳಿ ನದಿಯ ನೀರನ್ನು ವಿದ್ಯುತ್‌ ಉತ್ಪಾದನೆಗೆ ಮಾತ್ರ ಬಳಸಬೇಕು ನಿಯಮ ಮಾಡಿರುವುದರಿಂದ, ನದಿಯಿಂದ ನೀರು ಪಡೆಯದಂಥ ಸ್ಥಿತಿಯಲ್ಲಿ ರೈತರಿದ್ದಾರೆ. ಎತ್ತಿನಹೊಳೆಗೆ ಎಲ್ಲಿಂದಲೋ ನೀರು ತರುವ ಯೋಚನೆ ಮಾಡುವವರು ಇಲ್ಲಿರುವ ಕಾಳಿ ನದಿಯನ್ನು ಏಕೆ ಬಳಸಬಾರದು, ಇಲ್ಲಿಂದ ನೀರು ತೆಗೆಯಲು ಯಾರ ಹಂಗೂ ಇಲ್ಲ,  ವಿದ್ಯುತ್‌ ಬಳಕೆಗೂ ಆಗಿ ಮಿಗುವ ನದಿ ನೀರನ್ನು ಕೃಷಿ ಬಳಕೆ ಮಾಡಿದರೆ ತಪ್ಪೇನು? ಹೀಗೆ  ಹೋರಾಟ ಶುರುವಾಗಿದೆ…

ಮನಸೂರಿನ ಕುರುಬರ ಸಿದ್ದಪ್ಪಜ್ಜನ ಕಣ್ಣು ಈಗ ಮಂಜಾಗಿವೆ. ಅಮಾವಾಸ್ಯೆ ರಾತ್ರಿಗಳಲ್ಲಿ ಎತ್ತಿನ ನೊಗಕ್ಕೆ ಲಾಟೀನು ಕಟ್ಟಿ ಉಳುಮೆ ಮಾಡಿ, ಬೆಳದಿಂಗಳ ಬೆಳಕಲ್ಲಿ ಭತ್ತ ಕೊಯ್ದುಹಾಕಿ, ಒಕ್ಕಲುತನ ಮಾಡಿದ ದಾಂಡಿಗ ಅನ್ನದಾತ ಅವಾ. ವಯಸೊÕà ನಾಲ್ಕಿಪ್ಪತ್ತು (80) ಇರಬಹುದು. ಹಣೆಯ ಮೇಲೆ ಫಂಡರಪುರ ವಿಠuಲನ ತಿಲಕ ಇಟ್ಟು ಕಾಯಕವನ್ನೇ ಧರ್ಮ ಅಂತಾ ಸ್ವೀಕಾರ ಮಾಡಿ ಮಳಿ, ಬೆಳಿ, ಬದುಕು, ದಾಸೋಹ, ಕಾಯಕ ಸತ್ಕಾರ್ಯದಲ್ಲೇ ನೆಮ್ಮದಿ ಕಂಡಿರೋ ಸಿದ್ದಪ್ಪಜ್ಜ ಬರೋಬ್ಬರಿ 30 ಬರಗಾಲ ಕಂಡವನು. ಅದರಲ್ಲೂ ಡೌಗಿಯಂಥ ದೈತ್ಯ ಬರಗಾಲವನ್ನೇ ಗೆದ್ದು ಕೃಷಿಯನ್ನ ಜೀವಂತ ಇಟ್ಟೋನು. 

ಆದ್ರೆ ಸಿದ್ದಪ್ಪಜ್ಜನಿಗೆ ಕಳೆದ 10 ವರ್ಷಗಳಿಂದಲೂ ಸರಿಯಾಗಿ ನಿದ್ದೆ ಬರುತ್ತಿಲ್ಲ. ತನ್ನ ಹೊಲವನ್ನ ಮುಂದಿನ ಪೀಳಿಗೆಯವರು ಹೀಗೇ ಇಟ್ಟುಕೊಳ್ಳುತ್ತಾರೆಯೇ ? ಎಂಬುದು ಅವನ ಪ್ರಶ್ನೆ. ಮನೆಯಲ್ಲಿ ಎತ್ತು, ದನಕರು, ಹಸುಗಳ ಗಂಟೆ ಸದ್ದು ಮನೆಯ ಹಟ್ಟಿಯಲ್ಲಿ ಕೇಳುತ್ತಿರಬೇಕು ಎನ್ನುವ ಅವನ ಬಯಕೆ ಈಡೇರಲು ಸಾಧ್ಯವಿಲ್ಲವೇನೋ ಎನ್ನಿಸತೊಡಗಿದೆ. ಅದಕ್ಕಿರುವ ಪರಿಹಾರದ ಕನಸುಗಳೆಂದರೆ, ತನ್ನ ಹೊಲದ ಪಕ್ಕದ ಹಳ್ಳದಲ್ಲಿ ನೀರು ಹರಿಯಬೇಕು. ಹೊಲದ ಬದುಗಳಲ್ಲಿ ಹರಿಯುವ ತಿಳಿನೀರನ್ನ ಬೊಗಸೆ ಕೈಯಿಂದಲೇ ಕುಡಿದು ಬೇವರು ಹರಿಸುವಂತೆ ದುಡಿಯಬೇಕು. ತನ್ನೂರಿನ ಕೆರೆಗಳು ಕೋಡಿ ತುಂಬಿ ಹರಿಯಬೇಕು. ಪ್ರತಿ ಕೆರೆಗೂ ಚಳಿಗಾಲಕ್ಕೆ ಬಂದು ವಿಶ್ರಾಂತಿ ಪಡೆಯುವ ವಿದೇಶಿ ಹಕ್ಕಿಗಳ ಕಲರವ ಮತ್ತೆ ಹೆಚ್ಚಬೇಕು. ಹೊಲದ ತುಂಬಾ ಹಸಿರು ಬೆಳೆ ರಾರಾಜಿಸಬೇಕು. ಆಕಳ ಹಿಂಡು ಅಡವಿಯಲ್ಲಿ ಮೇಯಬೇಕು. ಗಿಳಿಯ ಹಿಂಡಿಗೆ ಬೇಕಾದಷ್ಟು ಮಾವಿನ ಗಿಡಗಳು ಮತ್ತೆ ಬೆಳೆದು ನಿಲ್ಲಬೇಕು… ಹೀಗೆ ತಾನು ಕಾಣುವ ಹಗಲುಗನಸನ್ನು ತನ್ನೂರಿಗೆ ಬರುವ ಎಲ್ಲರ ಮುಂದೂ ಹೇಳಿ ಸಮಾಧಾನಿಯಾಗುತ್ತಿದ್ದ. 

ಆದರೆ ಸಿದ್ದಪ್ಪಜ್ಜ ಬಹಳ ಜಿದ್ದಿ ರೈತನ ಮಗ. ಬರೀ ಕನಸು ಕಂಡರೆ ಏನೂ ಪ್ರಯೋಜನವಿಲ್ಲ ಆಗದು ಎನ್ನುವ ಅವನ ಯೋಚನೆಗೆ ಒಂದು ಉತ್ತಮ ಐಡಿಯಾ ಹೊಳೆದಿದ್ದು ಉಳವಿ ಚೆನ್ನಬಸವೇಶ್ವರ ಜಾತ್ರೆಗೆ ಹೋದಾಗ. ಧಾರವಾಡದಿಂದ ಬಂಡಿಕಟ್ಟಿಕೊಂಡು ಹಳಿಯಾಳ-ದಾಂಡೇಲಿ ಮಾರ್ಗವಾಗಿ ಉಳವಿ ಜಾತ್ರೆಗೆ ಪ್ರತಿವರ್ಷ ಹೋಗುತ್ತಿದ್ದವರೆಲ್ಲಾ ಕಾಳಿ ನದಿ ದಾಟಿ ಹೋಗಬೇಕು. ಈಗೇನೋ ದೊಡ್ಡ ಸೇತುವೆ ಇದೆ. ಆದರೆ ಸಿದ್ದಪ್ಪಜ್ಜ ಚಿಕ್ಕವನಿದ್ದಾಗ ಬಂಡಿಯಲ್ಲಿ ಕೂತು ದೈತ್ಯ ಎತ್ತುಗಳನ್ನು ಕಾಳಿ ನದಿಯಲ್ಲಿ ದಾಟಿಸಿಕೊಂಡು ಉಳವಿ ಜಾತ್ರೆ ಮಾಡುತ್ತಿದ್ದ ನೆನಪು ಅವನಿಗೆ ಇದೆ. ತನ್ನೂರಿನ ಹೊಲದಲ್ಲಿ ಬರಗಾಲ ಇದ್ದಾಗಲೂ ಉಳವಿ ತಳದಲ್ಲಿ ಇಷ್ಟೊಂದು ನೀರು ಹರಿದು ಹೋಗುತ್ತದಲ್ಲ ? ಇದು ನನ್ನೂರಿನ ಭೂಮಿಗೆ ಯಾಕೆ ಹರಿಯಬಾರದು ಎಂದು ಚಿಕ್ಕವಯಸ್ಸಿನಲ್ಲಿಯೇ ಆತನ ಮನದಲ್ಲಿ ಹುಟ್ಟಿದ ಕನಸು ಬರಗಾಲದಿಂದಾಗಿ ಇದೀಗ ನನಸಾಗಲೇಬೇಕು ಎನ್ನುವ ಛಲ ತೊಟ್ಟುಕೊಂಡಿದೆ. 

ಅದಕ್ಕಾಗಿಯೇ ಸಿದ್ದಪ್ಪಜ್ಜ 2003 ರಲ್ಲಿಯೇ ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು, ಕಾಳಿ ನದಿ ನೀರನ್ನು ಧಾರವಾಡ,ಉತ್ತರ ಕನ್ನಡ, ಹಾವೇರಿ ಜಿಲ್ಲೆಯ ಅರೆಮಲೆನಾಡು ಪ್ರದೇಶದ ಹಳ್ಳಿಗಳಿಗೆ ಕೃಷಿಗೆ ಮತ್ತು ಕುಡಿಯಲು ಪೂರೈಕೆ ಮಾಡಿ ಎಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕುಳಿತು ಬಿಟ್ಟ. ಸಿದ್ದಪ್ಪಜ್ಜನನ್ನು ಬಹಳ ಲಘುವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ ಮೊದಲು ಆತನನ್ನು ನಿರ್ಲಕ್ಷಿಸಿತು. ಆದರೆ ಉಪವಾಸಕ್ಕೆ ಕುಳಿತಾಗ ಆತನ ಕನಸಿನ ಕಾಳಿ ನದಿ ನೀರು ಕೃಷಿಗೆ ಪೂರೈಸುವ ಯೋಜನೆಯ ಇಂಗಿತವನ್ನು ಸರ್ಕಾರಕ್ಕೆ ಕೊನೆಗೂ ಕಳುಹಿಸಿಕೊಟ್ಟಿತು. 

ಅಂದು ಸಿದ್ದಪ್ಪ ಕುರುಬರ ಒಬ್ಬಂಟಿಯಾಗಿ ಆರಂಭಿಸಿದ್ದ ಈ ಹೋರಾಟ ಇದೀಗ ಮತ್ತೆ ನಿಧಾನಕ್ಕೆ ಚಿಗುರೊಡೆಯತೊಡಗಿದೆ. ಧಾರವಾಡ ಜಿಲ್ಲೆಯ ಧಾರವಾಡ ಮತ್ತು ಕಲಘಟಗಿ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ,ಶಿರಸಿ ಮತ್ತು ಮುಂಡಗೋಡ, ಹಾವೇರಿ ಜಿಲ್ಲೆಯ ಹಾನಗಲ್‌, ಹಿರೇಕೇರೂರ ಸೇರಿದಂತೆ ಅರೆಮಲೆನಾಡಿನ ಹಳ್ಳಿಗಳಿಗೆ ಕಾಳಿ ದರ್ಶನವಾಗಬೇಕು ಎನ್ನುವ ಒತ್ತಡ ಹೆಚ್ಚುತ್ತಿದೆ. ಈ ಪ್ರದೇಶದಲ್ಲೀಗ ಮಳೆಯ ಕೊರತೆಯಿಂದ ಹಳ್ಳ ಕೊಳ್ಳಗಳು ಬತ್ತಿ ಹೋಗುತ್ತಿವೆ. ಕೆರೆಗಳು ಒಣಗುತ್ತಿದ್ದು ಕೃಷಿ ಗೆ ಮಾತ್ರವಲ್ಲ, ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಕಾಳಿನದಿ ನೀರು ಇತ್ತ ಹರಿಯಲಿ ಎನ್ನುವ ಆಗ್ರಹ ರೈತಾಪಿ ಜನರಿಂದ ಕೇಳಿಬರುತ್ತಿದೆ. ತೆರೆಮರೆಯಲ್ಲಿಯೇ ಕಾಳಿಗಾಗಿ ರೈತರು ಜನಾಂದೋಲನ ರೂಪಿಸುವ ನೀಲನಕ್ಷೆ ಸಜ್ಜುಗೊಳಿಸುತ್ತಿದ್ದಾರೆ. 

ಕಾಳಿ ಯಾಕೆ ಬೇಕು ? 
ಸತತ ಬರಗಾಲ, ಪಾತಾಳ ಸೇರುತ್ತಿರುವ ಅಂತರ್ಜಲ, ಮಳೆಯ ಕೊರತೆ, ಬರೀ ನೆಲವೇ ಕಾಣುತ್ತಿರುವ ಕೆರೆಕಟ್ಟೆಗಳು, ಇದರಿಂದಾಗಿ ಸೊರಗಿ ಹೋಗಿರುವ ಸಸ್ಯಸಂಕುಲ. ಪಕ್ಕದಲ್ಲೇ 164 ಟಿಎಂಸಿ ನೀರಿದ್ದರೂ, ಸುತ್ತಲಿನ ಜಿಲ್ಲೆಗಳಲ್ಲಿ ನೀರಿಗಾಗಿ ಹಾಹಾಕಾರ..,!! ಕೃಷಿ, ಪಶು ಸಂಗೋಪನೆ, ಹೈನುಗಾರಿಕೆ ಸಮೃದ್ಧವಾಗಿದ್ದ ಧಾರವಾಡ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಿಂದ ಇಂತಹ ದೃಶ್ಯಗಳು ಗೋಚರಿಸುತ್ತಿವೆ. 

ಪಕ್ಕದಲ್ಲೇ ಕಾಳಿ ಸಮೃದ್ಧವಾಗಿ ಹರಿಯುತ್ತಿದ್ದರೂ, ಅದನ್ನು ಮುಟ್ಟುವಂತಿಲ್ಲ. ಕಾರಣ ಆ ನೀರನ್ನು ಬರೀ ವಿದ್ಯುತ್‌ಗಾಗಿ ಮೀಸಲಿಡಲಾಗಿದೆ. ಇಲ್ಲಿ ಉತ್ಪಾದನೆ ಮಾಡುವ ವಿದ್ಯುತ್‌ನ ಪ್ರಮಾಣ ಕೇವಲ 100 ಮೆ.ವ್ಯಾ.ಆದರೆ ಇಂದು ವಿದ್ಯುತ್‌ಗಿಂತ ಕುಡಿಯುವ ನೀರು ಮತ್ತು ನೀರಾವರಿಗೆ ಕಾಳಿ ನದಿಯ ನೀರು ಬಳಕೆಯಾಗವ ಅನಿವಾರ್ಯತೆ ಈ ಭಾಗದಲ್ಲಿ ಸೃಷ್ಟಿಯಾಗುತ್ತಿದೆ. ಒಂದು ಕಾಲದಲ್ಲಿ ಜಲವಿದ್ಯುತ್‌ ಉತ್ಪಾದನೆಗಾಗಿ ಮೀಸಲಿಟ್ಟು  ಕಟ್ಟಿರುವ 164 ಟಿಎಂಸಿ ನೀರು ಸಂಗ್ರಹಿಸುವ ಸೂಪಾ ಅಣೆಕಟ್ಟೆಯಿಂದ ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೃಷಿ ಹಾಗೂ ನೀರಿನ ಕುಡಿಯುವ ದಾಹ ತೀರಬೇಕಾಗಿದೆ. ಒಂದೆಡೆ ಕಳಸಾ-ಬಂಡೂರಿ,ಮಹದಾಯಿ ನೀರು ಮರೀಚಿಕೆಯಾಗುತ್ತಿದ್ದರೆ, ಇತ್ತ ನಮ್ಮ ರಾಜ್ಯದ ನೀರನ್ನು ಬಳಸಿಕೊಳ್ಳಲು ನಾವೇ ಕಠಿಣ ನಿಮಯ ಮಾಡಿಕೊಂಡಿದ್ದು ಈ ಮೂರು ಜಿಲ್ಲೆಯ ಅರೆಮಲೆನಾಡು ರೈತರನ್ನು ಕಂಗಾಲು ಮಾಡಿಟ್ಟಿದೆ. 

ಏತ ನೀರಾವರಿಗೆ ಹಲವು ದಾರಿ 

ಕಾಳಿ ನದಿಯ ನೀರನ್ನು ಕೃಷಿಗೆ ಮತ್ತು ಕುಡಿಯಲು ಬಳಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಕಾಯಿದೆಗೆ ತಿದ್ದುಪಡಿ ತರಬೇಕಾಗಿದೆ. ನೀರು ವಿದ್ಯುತ್‌ ಉತ್ಪಾದನೆಗೆ ಬಳಕೆಯಾಗುವ ಜೊತೆಗೆ ಕೃಷಿ, ಪಶುಸಂಗೋಪನೆ ಮತ್ತು ಕುಡಿಯಲು ಬಳಕೆ ಮಾಡುವ ಅನಿವಾರ್ಯತೆ ಈ ಭಾಗದಲ್ಲಿ ಎದುರಾಗಿದೆ. ಹೀಗಾಗಿ ಸೂಪಾ ಅಣೆಕಟ್ಟೆ ಮತ್ತು ಕಾಳಿನದಿ ನೀರಿನ ಬಳಕೆ ವಿಚಾರದಲ್ಲಿ ಕಾಯಿದೆಗೆ ತಿದ್ದುಪಡಿ ತಂದಾದರೂ ನೀರು ಹರಿಸಬೇಕು ಎನ್ನುವ ಒತ್ತಡವನ್ನು ಈ ಭಾಗದ ರೈತರು ಹಾಕುತ್ತಿದ್ದಾರೆ. 

ಈ ವರೆಗೆ ನಡೆಸಿದ ಸಮೀಕ್ಷೆಗಳ ಪ್ರಕಾರ, ಹಲವು ಕಡೆಗಳಲ್ಲಿ ಏತ ನೀರಾವರಿ ಯೋಜನೆಗಳ ಆಧಾರದ ಮೇಲೆ ಕಾಳಿ ನದಿಯ ನೀರನ್ನು ಪೂರ್ವಕ್ಕೆ ಹರಿಸಲು ಸಾಧ್ಯವಿದೆ. ಈ ಪೈಕಿ ಮೊದಲನೆಯದು ಆಲಮಟ್ಟಿಯ ಮುಳವಾಡ ಏತ ನೀರಾವರಿ ಮಾದರಿಯಲ್ಲಿ ಕಾಳಿ ನದಿಯ ತಟ್ಟಿಹಳ್ಳದ ಹಿನ್ನೀರಿನಿಂದ ನೀರನ್ನು ಮೇಲಕ್ಕೆತ್ತಿ ಮುಂಡಗೋಡ ತಾಲೂಕಿನ ನಿಚ್ಚನಕಿ ಮತ್ತು ಕಲಘಟಗಿ ತಾಲೂಕಿನ ನೀರಸಾಗರ ಕೆರೆಗಳಿಗೆ ತುಂಬಿಸಬಹುದು ಅನ್ನೋದು ಲೆಕ್ಕಾಚಾರ.  ಅಲ್ಲಿಂದ ಗುರುತ್ವಾಕರ್ಷಣೆ ಆಧಾರದ ಮೇಲೆಯೇ ಕೆಳಗಡೆ ಪ್ರದೇಶಕ್ಕೆ ನೀರು ಹರಿಸಿದರೆ,  ಇಲ್ಲಿ 22 ಲಕ್ಷ ಎಕರೆಗೂ ಅಧಿಕ ಜಮೀನು ನೀರಾವರಿಗೆ ಒಳಪಡಿಸಲು ಸಾಧ್ಯವಿದೆ. ಈ ಕುರಿತು ಈಗಾಗಲೇ ಅಧ್ಯಯನ ನಡೆಸಿರುವ ನೀರಾವರಿ ತಜ್ಞ ಮತ್ತು ನಿವೃತ್ತ ಇಂಜಿನೀಯರ್‌ ಪ್ರಕಾಶ ಕುದರೆ ಅವರು ಕಾಳಿ ಏತ ನೀರಾವರಿ ಯೋಜನೆಯ ನೀಲನಕ್ಷೆಯನ್ನೇ ಸಜ್ಜುಗೊಳಿಸಿದ್ದಾರೆ. 

2ನೆಯದಾಗಿ ಸೂಪಾ ಅಣೆಕಟ್ಟೆಯಿಂದಲೇ (ಮೊದಲ ಸೇತುವೆ ಸಮೀಪದಲ್ಲಿ) ಏತ ನೀರಾವರಿ ಪಂಪ್‌ಗ್ಳನ್ನು ಅಳವಡಿಸಿ ಅಲ್ಲಿಂದಲೇ ನೀರೆತ್ತಿ ಹಳಿಯಾಳ,ಕಲಘಟಗಿ ಮತ್ತು ಧಾರವಾಡ ತಾಲೂಕಿನ ದೈತ್ಯ ಕೆರೆಗಳನ್ನು ತುಂಬಲು ಸಾಧ್ಯವಿದೆ. ಇದನ್ನು ಕೇಂದ್ರದ ಮಾಜಿ ಕೃಷಿ ಸಚಿವ, ರೈತ ನಾಯಕ ಬಾಬಾಗೌಡ ಪಾಟೀಲ ಅವರು ಕೂಡ ಅನೇಕ ಬಾರಿ ಉಚ್ಚರಿಸಿದ್ದು, ಸರ್ಕಾರದ ಇಚ್ಛಾಶಕ್ತಿಯ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ. ಕಾಳಿಯ ಉಪನದಿಗಳಿಂದ ಈಗಾಗಲೇ ನೀರು ಹಳಿಯಾಳ,ಅಳ್ನಾವರ ಸೇರಿದಂತೆ ಅನೇಕ ಪಟ್ಟಣ ಮತ್ತು ಹಳ್ಳಿಗಳನ್ನು ತಲುಪಿದೆ. 

ವ್ಯಯವಾಗುವ 30 ಟಿಎಂಸಿ ಕೆರೆಗೆ ಬರಲಿ 
ಆಲಮಟ್ಟಿ,ತುಂಗಭದ್ರಾ ಸೇರಿದಂತೆ ಬಯಲು ಸೀಮೆಯಲ್ಲಿ ಹರಿಯುವ ನದಿಗಳಿಂದ ಎಡದಂಡೆ-ಬಲದಂಡೆ ಕಾಲುವೆಗಳ ಮೂಲಕ ನೀರಾವರಿ ಮಾಡಿದಂತೆ ಇಲ್ಲಿ ಕಷ್ಟಸಾಧ್ಯ. ಕಾರಣ, ಇದೆಲ್ಲವೂ ದಟ್ಟ ಅರಣ್ಯ ಪ್ರದೇಶವೇ ಆಗಿದೆ. ಇಲ್ಲಿ, ಮೂರ್‍ನಾಲ್ಕು ಕಡೆಗಳಲ್ಲಿ ಏತ ನೀರಾವರಿಯ ಮೂಲಕವೇ ನೀರೆತ್ತಿ ನೀರಾವರಿ ಯೋಜನೆ ರೂಪಿಸಬೇಕಿದೆ. 

ಸೂಪಾ ಅಣೆಕಟ್ಟೆಯಲ್ಲಿ ವಿದ್ಯುತ್‌ ಉತ್ಪಾದಿಸಿದ ನಂತರವೂ 30 ಟಿಎಂಸಿಯಷ್ಟು ನೀರು ವ್ಯಯವಾಗುತ್ತಿದೆ ಎನ್ನುತ್ತಿದ್ದಾರೆ ನೀರಾವರಿ ತಜ್ಞರು. ಕಾಳಿಯಿಂದ ಮೇಲೆತ್ತಿದ ನೀರಿನ ಮೂಲಕ ಧಾರವಾಡ, ಕಲಘಟಗಿ, ಮುಂಡಗೋಡ, ಹಳಿಯಾಳ ತಾಲೂಕಿನಲ್ಲಿನ 1200 ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಿದೆ. ಈ ಪೈಕಿ 450 ರಷ್ಟು ಕೆರೆಗಳಿಗೆ ನಿರ್ದಿಷ್ಟ ಪ್ರದೇಶಕ್ಕೆ ನೀರನ್ನು ಕೊಂಡೊಯ್ದು ಗುರುತ್ವದ ಮೂಲಕವೇ ನೀರು ಹರಿಸಬಹುದಾಗಿದೆ. ಕಾಳಿ ನದಿಯಿಂದ ಅಂದಾಜು 250 ಅಡಿಯಷ್ಟು ಎತ್ತರದ ಪ್ರದೇಶದಲ್ಲಿ ನೀರು ಹರಿಸಬೇಕಿದೆ ಅಷ್ಟೇ. 

ಧಾರವಾಡ ತಾಲೂಕಿಗೆ ಕಾಳಿಯ ಉಪನದಿ ಪಂಡರಿ ನದಿಯಿಂದಲೇ ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಮಾರ್ಗವಾಗಿ ಅಳ್ನಾವರ ಪಟ್ಟಣಕ್ಕೆ ನೀರು ಲಭಿಸಿದೆ. ಇದೇ ಮಾರ್ಗ ವಿಸ್ತರಣೆಯಾಗಿ 2ನೇ ಹಂತದ ಯೋಜನೆಯಾಗಿ ಮಾರ್ಪಟ್ಟರೆ, ಅಳ್ನಾವರ ಪೂರ್ವ ಮತ್ತು ಧಾರವಾಡದ ಪಶ್ಚಿಮ ಭಾಗದಲ್ಲಿರುವ 45 ಕ್ಕೂ ಹೆಚ್ಚು ಹಳ್ಳಿಗಳ ಕೆರೆಗಳನ್ನು ತುಂಬಬಹುದು. ಇಲ್ಲಿನ ಮುಗದ ಕೆರೆ ನೂರಾರು ಎಕರೆ ಇದ್ದು, ಈ ಕೆರೆ ತುಂಬಿ ಕೋಡಿ ಮೂಲಕ ಹರಿಬಿಟ್ಟರೆ, ಅದು ನೇರವಾಗಿ ನೀರುಸಾಗರ ಜಲಾಶಯಕ್ಕೂ ತಲುಪಿದರೆ ಸಿದ್ದಪ್ಪಣ್ಣನ ಕನಸು ನನಸಾಗಿ ಜೀವವೈವಿಧ್ಯತೆಯಲ್ಲಿ ಅಗಾಧವಾದ ಮಾರ್ಪಾಡುಗುತ್ತದೆ, ಸ್ಥಳೀಯರ ನೀರ ಬಾಧೆಗೆ ಕಡಿಮೆ ಖರ್ಚಲ್ಲಿ ಮುಕ್ತಿ ಸಿಕ್ಕಂತಾಗುತ್ತದೆ.  

ಎತ್ತಿನಹೊಳೆ ಸಾಧ್ಯವಾಯ್ತು, ಕಾಳಿ ಯಾಕಿಲ್ಲ ? 
ಬೆಂಗಳೂರು ಗ್ರಾಮಾಂತರ, ಮಲೆನಾಡಿನ ಜನರ ನಡುವೆ ಸಾಕಷ್ಟು ಕಿತ್ತಾಟಕ್ಕೆ ಕಾರಣವಾಗಿದ್ದ ಎತ್ತಿನ ಹೊಳೆ ಯೋಜನೆ ಹತ್ತು ವರ್ಷಗಳ ಹಿಂದೆ ಚರ್ಚೆಗೆ ಬಂದಾಗ ಎಲ್ಲಿಯ ಮಲೆನಾಡು, ಎಲ್ಲಿಯ ತುಮಕೂರು,ಕೋಲಾರ, ಚಿಕ್ಕಬಳ್ಳಾಪೂರ ಜಿಲ್ಲೆ, ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂದು ಅನೇಕರು ಅಪಹಾಸ್ಯ ಮಾಡಿ ನಕ್ಕಿದ್ದುಂಟು. ಆದರೆ ಇಂದು ಹೋರಾಟಕ್ಕೆ ಮಣಿದು ಅನಿವಾರ್ಯವಾಗಿ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. 

ಮಹದಾಯಿ-ಮಲಪ್ರಭೆ, ಭದ್ರ ಮೇಲ್ದಂಡೆ, ಸಿಂಗಟಾಲೂರು ಏತ ನೀರಾವರಿ, ಮುಳವಾಡ ಏತ ನೀರಾವರಿ ಸೇರಿದಂತೆ ಅನೇಕ ಏತ ನೀರಾವರಿ ಯೋಜನೆಗಳು ಆರಂಭದಲ್ಲಿ ಹಾಸ್ಯಾಸ್ಪದವೇ ಅನಿಸಿದ್ದವು. ಆದರೆ ಆಯಾ ಭಾಗದ ರಾಜಕೀಯ ಮುಖಂಡರ ಇಚ್ಛಾಶಕ್ತಿ ಮತ್ತು ಜನರ ಸಂಘಟನಾತ್ಮಕ ಹೋರಾಟಗಳು ಈ ಯೋಜನೆಗಳನ್ನು ಸಾಕಾರಗೊಳಿಸಿದವು. ಹೀಗಾಗಿ ಇಂದಲ್ಲ ನಾಳೆ ಪಶ್ಚಿಮದ ಕಾಳಿ ಪೂರ್ವಾಭಿಮುಖವಾಗಿ ಹರಿಯಲೇಬೇಕು. ನೆಲ ಮತ್ತು ಜನರ ದಾಹ ತಣಿಯಲೇಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ ಅರೆ ಮಲೆನಾಡಿಗರು. 

ಸಾಧ್ಯ ಎನ್ನುತ್ತಿದ್ದಾರೆ ತಜ್ಞರು 
ಕಾಳಿನದಿಯಿಂದ ನೀರು ಹರಿಸುವ ಸಾಧ್ಯತೆಗಳ ಕುರಿತು ಅನೇಕ ಬಾರಿ ಹಿರಿಯ ನೀರಾವರಿ ತಜ್ಞರು ಗಮನ ಸೆಳೆದಿದ್ದಾರೆ. ನಿವೃತ್ತ ಇಂಜಿನಿಯರ್‌ರಾದ ಎಸ್‌.ಎನ್‌.ಛಬ್ಬಿ, ರುದ್ರಮೂರ್ತಿ, ನಿವೃತ್ತ ಉಪಮುಖ್ಯ ಇಂಜಿನಿಯರ್‌ ಪ್ರಕಾಶ ಕುದರೆ, ನೀರಾವರಿ ತಜ್ಞ ರವಿ ದೊಡಮನಿ ಕೂಡ ಕಾಳಿ ಏತನೀರಾವರಿ ಸಾಧ್ಯ ಎನ್ನುತ್ತಿದ್ದಾರೆ. 

ಈ ಪೈಕಿ ಪ್ರಕಾಶ ಕುದರೆ ಅವರು ಅಧಿಕೃತವಾಗಿ ಕಾಳಿ ನದಿಯಿಂದ 22 ಲಕ್ಷ ಎಕರೆ ಭೂಮಿಗೆ ನೀರಾವರಿ ಮತ್ತು ಅಕ್ಕಪಕ್ಕದ ನಗರಗಳಿಗೆ ಸುಲಭವಾಗಿ ಕುಡಿಯಲು ನೀರು ಕೊಡಬಹುದು ಎನ್ನುವ ಕುರಿತು ಅಧ್ಯಯನ ಮಾಡಿ ಪುಸ್ತಕವನ್ನೇ ಪ್ರಕಟಿಸಿದ್ದಾರೆ. 
ಮುಳವಾಡ ಏತ ನೀರಾವರಿ ಮಾದರಿಯಲ್ಲಿ ಕಾಳಿ ನದಿಯ ನೀರನ್ನು ಧಾರವಾಡ,ಹಾವೇರಿ,ಉತ್ತರಕನ್ನಡ ಜಿಲ್ಲೆಯ ಎಂಟು ತಾಲೂಕಿಗೆ ಹರಿಸಬಹುದು ಎನ್ನುವ ವಿವರವನ್ನು ಅವರು ತಮ್ಮ ಪುಸ್ತಕದಲ್ಲಿ ನಮೂದಿಸಿದ್ದಾರೆ. 

ಆತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೈತ್ಯ ಪಂಪ್‌ಗ್ಳನ್ನು ಅಳವಡಿಸಿ ಕೆಲಸ ಆರಂಭಿಸಿದರೆ, ಈಗಾಗಲೇ ಸಿದ್ದವಿರುವ ಅಣೆಕಟ್ಟೆಗಳು, ಕೆರೆಗಳು, ಹಳ್ಳ,ಕೊಳ್ಳ ಎಲ್ಲದಕ್ಕೂ ಕಾಳಿ ನೀರು ಹರಿಸಲು ಸಾಧ್ಯವಿದೆ ಎನ್ನುವುದು ಇವರ ಅಭಿಮತ. 

ಕಾಳಿ ನದಿಯ ಬಗ್ಗೆ ಒಂದಿಷ್ಟು…
*ಉತ್ತರ ಕನ್ನಡ ಜಿಲ್ಲೆಯ ಡಿಗ್ಗಿ ಎಂಬಲ್ಲಿ ಹುಟ್ಟಿ 184 ಕಿ.ಮೀ. ಹರಿದು ಅರಬ್ಬಿ ಸಮುದ್ರ ಸೇರುತ್ತದೆ.  ಕಾಳಿನದಿಯ ಜಲಾನಯನದಲ್ಲಿ ಶೇ.35 ರಷ್ಟು-ಕಾಡು ನಿತ್ಯಹರಿದ್ವರ್ಣ ಕಾಡಾಗಿದೆ. 1901 ರಿಂದ 1987ರ ವರೆಗೆ ಕಾಳಿನದಿ ಪಾತ್ರದಲ್ಲಿ ಗರಿಷ್ಠ 3427 ಮಿ.ಮಿ.ಮಳೆ ಸುರಿದಿದೆ. ಪ್ರಸ್ತುತ ಸರಾಸರಿ 2202 ಮಿ.ಮಿ.ಮಳೆ ಬೀಳುತ್ತಿದೆ. ಸೂಪಾದಿಂದ ಬಿಟ್ಟ ನೀರು ಕೊಡಸಳ್ಳಿ, ಕದ್ರಾ ಜಲಾಶಯಕ್ಕೂ ಹರಿಯುತ್ತದೆ.ನಂತರ ಕಾರವಾರದ ಬಳಿ ಇರುವ ಸದಾಶಿವಘಡ ಸಮೀಪ ಕಾಳಿನದಿಯು ಅರಬ್ಬಿ ಸಮುದ್ರವನ್ನು ಸೇರುತ್ತದೆ.  

ಕಾಳಿ ನದಿ ಉತ್ತರ ಕನ್ನಡ ಜಿಲ್ಲೆ ಡಿಗ್ಗಿ ಎಂಬಲ್ಲಿ ಹುಟ್ಟಿ ಸೂಪಾ ಅಣೆಕಟ್ಟೆಗೆ ಸೇರುತ್ತದೆ. ಇಲ್ಲಿಂದ ದಾಂಡೇಲಿ ಮಾರ್ಗವಾಗಿ, ಬೊಮ್ಮನಹಳ್ಳಿ ಜಲಾಶಯ, ನಾಗಝರಿ ವಿದ್ಯುತ್‌ ಉತ್ಪಾದನಾ ಕೇಂದ್ರದ ಬಳಸಿ ಕೊಡಸಳ್ಳಿ, ಕದ್ರಾ ಜಲಾಶಯದ ಮೂಲಕ ಕಾರವಾರದ ಸದಾಶಿವಘಡದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹಳಿಯಾಳ ತಾಲೂಕಿನಲ್ಲಿ ಹರಿಯುವ ತಟ್ಟಿಹಳ್ಳ ನದಿಗೆ ನಿರ್ಮಿಸಿದ ಜಲಾಶಯ ತಟ್ಟಿಹಳ್ಳ ಅಣೆಕಟ್ಟಿಗೆ ಕಾಳಿ ಜಲಾನಯನ ಪ್ರದೇಶದಲ್ಲಿಂದಲೇ ನೀರು ಸೇರುತ್ತದೆ. 
*ಸೂಪಾ ಅಣೆಕಟ್ಟೆಯಲ್ಲಿ 147 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. 
*ಕದ್ರಾ 13.47 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. 
* ಕೊಡಸಳ್ಳಿ 10.87 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. 
*ಬೊಮ್ಮನಹಳ್ಳಿ ಬ್ಯಾಲೆನ್ಸಿಂಗ್‌ ಜಲಾಶಯದಲ್ಲಿ 10 ಟಿ.ಎಂ.

ಬಸವರಾಜ ಹೊಂಗಲ್‌ 

ಟಾಪ್ ನ್ಯೂಸ್

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.