ಪುಣಚದಲ್ಲಿ ನೋಟಾ ಅಭಿಯಾನ
Team Udayavani, May 7, 2018, 12:28 PM IST
ಮಹಾನಗರ: ಪುತ್ತೂರು ವಿಧಾನ ಸಭಾಕ್ಷೇತ್ರದ ಪುಣಚಗ್ರಾಮ- ವಾರ್ಡ್ ಸಂಖ್ಯೆ 5ರಲ್ಲಿ ಎರ್ಮೆತೊಟ್ಟಿಯಿಂದ ಮುಂದಕ್ಕೆ ಬಾಳಂತಿಮೊಗರಿಗೆ ಸಾಗುವ ರಸ್ತೆತೀರಾ ಹದಗೆಟ್ಟು ಹೋಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ರಸ್ತೆ ದುರಸ್ತಿಗೆ ಸಂಬಂಧಿಸಿ ಜನಪ್ರತಿನಿಧಿಗಳ ನಡೆಗೆ ರೋಸಿಹೋಗಿರುವ ಗ್ರಾಮಸ್ಥರು ಈ ಬಾರಿಯ ಚುನಾವಣೆಗೆ ನೋಟಾ ಅಭಿಯಾನಕ್ಕೆ ಇಳಿದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಈ ರಸ್ತೆಯನ್ನು ಮೇಲ್ದರ್ಜೆಗೆ ಎರಿಸಬೇಕೆಂದು ಇಲ್ಲಿನ ಮತದಾರರು ಮನವಿ ಮಾಡುತ್ತಿದ್ದರೂ, ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ, ಕಾಂಗ್ರೆಸ್ ಸರಕಾರಗಳು ಸ್ಪಂದಿಸಲಿಲ್ಲ. ಮನವಿಗೆ ಆಡಳಿತ ಪಕ್ಷಗಳು ಸ್ಪಂದಿಸದ ಹಿನ್ನಲೆಯಲ್ಲಿ ಇಲ್ಲಿನ ಜನ ಈ ನಿರ್ಧಾರಕ್ಕೆ ಬಂದಿದ್ದಾರೆ. ವಾರ್ಡಿನ 18 ಮನೆಗಳಲ್ಲೂ ನೋಟಾ ಅಭಿಯಾನದ ಫಲಕಗಳು ರಾಜಕೀಯ ಪಕ್ಷಗಳನ್ನು ಸ್ವಾಗತಿಸುತ್ತಿವೆ. ಚುನಾವಣ ಪ್ರಕ್ರಿಯೆಗೆ ಮಾತ್ರ ನಾವೂ ಪುತ್ತೂರು ಕ್ಷೇತ್ರಕ್ಕೆ ಒಳಪಟ್ಟಿದ್ದು, ಆಡಳಿತಾತ್ಮಕವಾಗಿ ಬಂಟ್ವಾಳ ತಾಲೂಕು ವ್ಯಾಪ್ತಿಗೆ ಬರುತ್ತೇವೆ. ಸ್ಥಳೀಯ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯ ಮತದಾರರು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ ಎಂದು ಇಲ್ಲಿನ ಮತದಾರ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.