ಒಂಬತ್ತು ಹೊಸ ರಾತ್ರಿಗಳಲ್ಲಿ ದುರ್ಗೆಗೆ ಪೂಜಾ ಸಂಭ್ರಮ


Team Udayavani, Oct 12, 2018, 6:00 AM IST

z-22.jpg

ನಾವು ಚಿಕ್ಕವರಿದ್ದಾಗ ನವರಾತ್ರಿ ಹಬ್ಬ ಬಂತೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ. ಯಾಕೆಂದರೆ, ನಮ್ಮ ಶಾಲೆಯಲ್ಲಿ ಪ್ರತಿವರ್ಷ ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಹಾನವಮಿಯವರೆಗಿನ ನಂತರದ ಮೂರು ದಿನಗಳಲ್ಲಿ ಯಾವುದಾದರೂ ಒಂದು ದಿನ ಶಾರದಾ ಪೂಜೆಯನ್ನು ಮಾಡುವುದಿತ್ತು. ಶಾರದಾ ಮಾತೆ ಎಂದರೆ ಸರಸ್ವತೀ ದೇವಿ. ವಿದ್ಯೆಗೆ ಅಧಿಪತಿ, ವಿದ್ಯಾಧಿದೇವತೆ ಅವಳೇ ಅಲ್ಲವೆ! ಶಾರದೆಯನ್ನು ಶ್ರದ್ಧೆ-ಭಕ್ತಿಯಿಂದ ಪೂಜಿಸಿದರೆ ಆ ತಾಯಿ ನಮಗೆ, “ವಿದ್ಯೆ-ಬುದ್ಧಿ ಕೊಡುತ್ತಾಳೆ’ ಎಂದು ನಮ್ಮ ಮೇಷ್ಟು ಹೇಳುತ್ತಿದ್ದು ನಮ್ಮ ಎಳೆಮನಸ್ಸಿಗೆ ನಾಟಿಬಿಡುತ್ತಿದ್ದಂತೂ ಸತ್ಯ. ನವರಾತ್ರಿಯ ಸಂದರ್ಭದಲ್ಲಿ ಆ ಮಾತೆಯಲ್ಲಿ ವಿಶೇಷವಾಗಿ ಬೇಡಿಕೊಳ್ಳಲೂ ಶಾರದಾ ಪೂಜೆ ನಮಗೊಂದು ಅಪೂರ್ವ ಅವಕಾಶವೇ ಆಗಿತ್ತು. ಅಂದು ಶಾಲೆಯಲ್ಲೆೆಲ್ಲ ಸಂಭ್ರಮದ ವಾತಾವರಣ. ಹೇಳಿಕೇಳಿ ನಮ್ಮದು ಹಳ್ಳಿಯ ಪರಿಸರದ ಶಾಲೆ. ಹಳ್ಳಿಯೆಂದರೆ ಹಾಗೆಯೇ ತಾನೆ, ಒಂದೊಂದು ಹಳ್ಳಿಯ ಹಬ್ಬವು ಸಹ ತನ್ನದೇ ವಿಶಿಷ್ಟ ಆಚರಣೆಯಿರುವಾಗ, ನಮ್ಮ ಮೇಷ್ಟ್ರು ಪೂಜೆಯ ಮೊದಲ ದಿನ, “”ಮಕ್ಕಳೇ, ನಾಳೆ ಪೂಜೆಗೆ ಹೂವನ್ನು ತೆಗೆದುಕೊಂಡು ಬನ್ನಿ” ಎಂದು ಹೇಳುತ್ತಿದ್ದರು. ಅಧ್ಯಾಪಕರ ಮಾತನ್ನು ಚಾಚೂತಪ್ಪದ ನಾವು ನಮ್ಮ ಮನೆಯಲ್ಲಿ ಇಲ್ಲದಿದ್ದರೂ ಅಕ್ಕಪಕ್ಕದ ಮನೆಯವರಲ್ಲಿ ಕೇಳಿ ಮುತ್ತುಮಲ್ಲಿಗೆ, ಅಬ್ಬಮಲ್ಲಿಗೆ, ಚೆಂಡು ಹೂಗಳನ್ನು ಕೊಯ್ದು ಹಿಂದಿನ ದಿನವೇ ಮಾಲೆ ಕಟ್ಟುತ್ತಿದ್ದೆವು. ಆಗೆಲ್ಲ ಹಣ ತೆತ್ತು ಮಾರ್ಕೆಟ್ಟಿನಿಂದ ಹೂ-ಹಣ್ಣು ತರುವ ಕ್ರಮ ಇರಲಿಲ್ಲ. ಅಕ್ಟೋಬರ್‌-ನವೆಂಬರ್‌ ತಿಂಗಳಲ್ಲಿ ಮಳೆ ಮರೆಯಾಗುತ್ತಿದ್ದಂತೆ ಮನೆಯಂಗಳದಲ್ಲಿ, ಮನೆಯ ಹಿತ್ತಿಲಿನಲ್ಲಿ, ಬೇಲಿ ಬದಿಯಲ್ಲಿ ನೆಟ್ಟಿರುವ ಹೂವಿನ ಗಿಡಗಳು ಯಾವುದೇ ಆರೈಕೆ ಇಲ್ಲದಿದ್ದರೂ ಹೇರಳವಾಗಿ ಹೂಗಳನ್ನು ಬಿಡುತ್ತಿದ್ದವು. ದೊಡ್ಡ ದೊಡ್ಡ ಸೂರ್ಯಕಾಂತಿ, ಕಮಲಕಾಂತಿ, ದಾಸವಾಳಗಳ‌ನ್ನು ಕೊಯ್ದು ಚೀಲದಲ್ಲಿ ತುಂಬಿ ಬೆಳಗ್ಗೆ ಎಂದಿಗಿಂತಲೂ ತುಸು ಬೇಗನೆ ಎದ್ದು ಸ್ನಾನ ಮಾಡಿ, ಹೊಸಬಟ್ಟೆ ಧರಿಸಿ ಬೇಗನೆ ಹೊರಟುಬಿಡುತ್ತಿದ್ದೆವು. ಅಧ್ಯಾಪಕರು ಮರದ ಕುರ್ಚಿಯ ಮೇಲೆ ಶಾರದೆಯ ಫೋಟೋವನ್ನು ಇಟ್ಟು  ನಮ್ಮನ್ನೆಲ್ಲ ಕೂಡಿಕೊಂಡು ಸುತ್ತಲೂ ಮಂಟಪ ತಯಾರಿಸಿ, ತಳಿರು-ತೋರಣ ಕಟ್ಟಿ , ನಾವು ಒಯ್ದ ಹೂವನ್ನು ದೇವಿಗೆ ಅರ್ಪಿಸಿ ಅಲಂಕಾರ ಮಾಡುತ್ತಿದ್ದರು. ಪ್ರತಿಯೊಂದು ತರಗತಿಯಿಂದ ಪ್ರತಿಯೊಬ್ಬ ವಿದ್ಯಾರ್ಥಿ ತಂದ ಹೂವಿನದ್ದೇ ಒಂದು ದೊಡ್ಡ ರಾಶಿಯಾಗುತ್ತಿತ್ತು! ಅಲಂಕೃತಗೊಂಡ ಶಾರದಮಾತೆಯನ್ನು ಕಾಣಲು ನೂರುಕಣ್ಣು ಸಾಲುತ್ತಿರಲಿಲ್ಲ. ಸೂರ್ಯಕಾಂತಿ-ಕಮಲಕಾಂತಿಗಳ ಹೂವಿನ ನಡುವೆ ರಾರಾಜಿಸುತ್ತಿದ್ದ ದೇವಿಯನ್ನು ಕಾಣುವಾಗ ಸಾಕ್ಷಾತ್‌ ಶಾರದಾ ಮಾತೆಯನ್ನೇ ಕಂಡಂತಾಗಿ, ಕಮಲದಾ ಮೊಗದವಳೆ ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ ಎಂಬ ಹಾಡು ಮನದಲ್ಲೇ ಹಾಡಿ ಕಣ್ಣು ಬಾಯಿಬಿಟ್ಟು ನೋಡುತ್ತ ಮೈಮರೆಯುತ್ತಿದ್ದದ್ದು ಸುಳ್ಳಲ್ಲ. ನಂತರ, ನಮ್ಮ ಪುಸ್ತಕಗಳನ್ನೆಲ್ಲ ದೇವರ ಮುಂದಿಟ್ಟು ಭಜನೆಯನ್ನು ಹಾಡಿಸುವುದಿತ್ತು. ಮೊದಲು ಅಧ್ಯಾಪಕರೇ, ಶಾರದಾ ದೇವಿಗೆ ವಂದಿಸುವೆವು ನಾವು ವಿದ್ಯಾಧಿದೇವತೆಗೆ ವಂದಿಸುವೆವು ಎಂದು ರಾಗವಾಗಿ ಹಾಡಿ, ಕೊನೆಯಲ್ಲಿ ಪೂಜೆ ಮಾಡಿ ಪಂಚಕಜ್ಜಾಯ ಹಂಚಿ ತಿಂದ ಬಳಿಕ ಏನೋ ಒಂಥರಾ ಧನ್ಯತಾಭಾವ ಮನದಲ್ಲಿ ಮೂಡಿಬಿಡುತ್ತಿತ್ತು.

ಹೀಗೆ ಪ್ರಾಥಮಿಕ ಶಾಲೆಯಿಂದಲೇ ಇಂತಹ ಸಾಂಪ್ರದಾಯಿಕ ಸೊಗಸಿನ ಆಚರಣೆಗಳಲ್ಲಿ ನಮ್ಮ ಬಾಲ್ಯವನ್ನು ಕಳೆದೆವು ಎನ್ನುವಾಗ ಹೆಮ್ಮೆಯೆನಿಸುತ್ತದೆ. ತರಗತಿಯಲ್ಲಿ  ಪಾಠ ಮಾಡುವಾಗಲೂ ನಡುವೆ ನಮ್ಮ ಮೇಷ್ಟ್ರುಗಳು ಹಬ್ಬಗಳ ಕುರಿತು, ಅದರ ಆಚರಣೆ, ಹಬ್ಬಗಳ ವೈಶಿಷ್ಟಗಳ ಕುರಿತು ನಮಗೆ ಮನಮುಟ್ಟುವಂತೆ ಹೇಳುತ್ತಿದ್ದರು. ಮೈಸೂರು ಚರಿತ್ರೆಯ ಪಾಠ ಮಾಡುವಾಗ ದಸರಾ ಹಬ್ಬದ ಬಗ್ಗೆ  ಹೇಳಿದುದು, ಅದು ನಮ್ಮ ನಾಡಹಬ್ಬ ಹೇಗೆ? ಅದಕ್ಕೆ ನವರಾತ್ರಿ ಎಂಬ ಹೆಸರು ಬರಲು ಏನು ಕಾರಣವೇನೆಂದು ಅದರ ಕಥೆಯನ್ನು ಸ್ವಾರಸ್ಯಕರವಾಗಿ ವಿವರಿಸಿದ್ದು ನನಗೆ ಇನ್ನೂ ನೆನಪಿದೆ. ಮೇಷ್ಟು ದಸರಾ ಬಗ್ಗೆ ಹೇಳುತ್ತ¤, ದಸರಾ ನಮ್ಮ ನಾಡಹಬ್ಬ. ನವರಾತ್ರಿ ಎಂದರೆ ಚಾಮುಂಡೇಶ್ವರಿ, ದುರ್ಗಾದೇವಿಯು ಮಹಿಷಾಸುರ ಮರ್ದಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಎಲ್ಲೆಮೀರಿ  ಎಲ್ಲೆಡೆ ಅನ್ಯಾಯವು ಅತಿಯಾಗಿ ಅಧರ್ಮವು ನೆಲೆನಿಂತ ಸಂದರ್ಭದಲ್ಲಿ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ಬಂದಿರುವಾಕೆಯೇ ಈ ದುರ್ಗಾ ಮಾತೆ. ಈ ಜಗನ್ಮಾತೆಯನ್ನು ನವವಿಧವಾಗಿ ವಿಶೇಷ ರೀತಿಯಲ್ಲಿ ಪೂಜಿಸುವುದೇ ನವರಾತ್ರಿಯ ವೈಶಿಷ್ಟéವೆಂದು ಹೇಳಿದುದು ಇನ್ನೂ ನೆನಪಿನಂಗಳದಲ್ಲಿ ಹುದುಗಿಹೋಗಿದೆ. ಅಂದಿನ ಅವರ ಆ ಕಥೆಗಳನ್ನು ಇಂದು ನಮ್ಮ ಮಕ್ಕಳಿಗೆ ಹೇಳುವ ಕೆಲಸವನ್ನು ನಾವು ಮಾಡಬೇಕಾಗಿದೆ. ನಮ್ಮ ಸಂಸ್ಕೃತಿಯ ಪ್ರತೀಕಗಳಾದ ಹಬ್ಬಗಳ ಆಚರಣೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾಗಿದೆ.

ಬಹುವಿಧ ನವರಾತ್ರಿ
 ಈಗ ನವರಾತ್ರಿ ಮತ್ತೆ ಬಂದಿದೆ. ಮಳೆ ಕಡಿಮೆಯಾಗಿದೆ. ಎಲ್ಲೆಲ್ಲೂ ಭೂಮಿಯು ಹಸುರಿನಿಂದ ಕಂಗೊಳಿಸಿ ಹೊಚ್ಚಹೊಸದಾಗಿ ನಳನಳಿಸುತ್ತಿರುವುದರಿಂದ ನವರಾತ್ರಿಗೆ ಒಂದು ಹೊಸ ಅರ್ಥ ಹುಟ್ಟಿಕೊಳ್ಳುತ್ತದೆ. ನವರಾತ್ರಿ ದುರ್ಗೆಯನ್ನು ಪೂಜಿಸಲು ಇದು ಪರ್ವಕಾಲ. ನವ ಎಂಬುದಕ್ಕೆ ಒಂಬತ್ತು ಎಂಬರ್ಥವಿದೆ. ಹೊಸದು ಎಂಬ ಮತ್ತೂಂದರ್ಥವೂ ಇದೆ. ಒಂಬತ್ತು ದಿನಗಳು ನಡೆಯುವ ಈ ಸಂಭ್ರಮ ನಮ್ಮ ದೇಶಾದ್ಯಂತ ಶಕ್ತಿಸ್ವರೂಪಿಣಿಯಾದ ದೇವಿಯನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಹಾಗೆ ನೋಡಿದರೆ, ದೇವಿಯ ಪೂಜೆಯ ಆಚರಣೆ ಹಿಂದೂ ಧರ್ಮದಲ್ಲಿ ವೇದಗಳ ಕಾಲದಿಂದಲೂ ಬಂದಿದ್ದರೂ ನವರಾತ್ರಿಯಲ್ಲಿ ಅವಳ ಪೂಜೆ-ಆರಾಧನೆ ವಿಶೇಷವಾದುದೆನ್ನಬಹುದು. ಶ್ರೀ ದುರ್ಗಾಪೂಜೆ, ದೀಪ ನಮಸ್ಕಾರ, ಚಂಡಿಕಾಹವನ, ಸರಸ್ವತೀ-ಲಕ್ಷ್ಮೀಪೂಜೆಯ ವಿಶೇಷ ಆರಾಧನಾ ವಿಧಾನಗಳು.

ನವರಾತ್ರಿಯನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ, ನಮ್ಮ ದೇಶದ ಅನೇಕ ರಾಜ್ಯಗಳಲ್ಲಿನ ಜನರು ವಿಜೃಂಭಣೆಯಿಂದ ಆಚರಿಸುತ್ತಾರೆ. ಮಹಾರಾಷ್ಟ್ರ , ಗುಜರಾತ್‌, ನೇಪಾಳ, ಪಶ್ಚಿಮ ಬಂಗಾಲಗಳಲ್ಲಿ ಅವರದ್ದೇ ಆದ ವಿಶಿಷ್ಟ ರೀತಿಯಲ್ಲಿ ಆಚರಣೆ ನಡೆಯುತ್ತದೆ. ಗುಜರಾತಿನಲ್ಲಿ ಸಾಂಪ್ರದಾಯಿಕ ದಾಂಡಿಯಾ, ಗರ್ಭಾ ನೃತ್ಯವೂ ಅತ್ಯಂತ ಜನಪ್ರಿಯ. ಈ ನೃತ್ಯಗಳಿಗೆ ಧಾರ್ಮಿಕ ಹಾಗೂ ಭಾವಭಕ್ತಿಯ ವೈಭವ ಹೆಚ್ಚು. ನವರಾತ್ರಿಯಲ್ಲಿ ವಿಶೇಷವಾಗಿ, ತಂದೆ-ತಾಯಿ ಅಕ್ಷರ ಕಲಿಯಲು ಹೊರಟ ಮಕ್ಕಳನ್ನು ಕರೆದುಕೊಂಡು ಸರಸ್ವತಿ ಮಂದಿರಗಳಿಗೆ ತೆರಳಿ ಅಕ್ಷರಾಭ್ಯಾಸ ಮಾಡಿಸಿಕೊಂಡು ಬರುವ ವಾಡಿಕೆಯೂ ಇದೆ.

ನವರಾತ್ರಿ ಬಂತೆಂದರೆ ಹೆಂಗಳೆಯರೆಲ್ಲರಿಗೂ ಸಂಭ್ರಮ, ಸಡಗರ. ಅಲಂಕಾರ ಮಾಡಿಕೊಂಡು ಮನೆಯ ಹಿರಿಯರು, ಮಕ್ಕಳೊಂದಿಗೆ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಕೆಲವರು ಒಂಬತ್ತು ದಿನವೂ ಒಂದೊಂದು ದೇವಿಯ ದೇವಸ್ಥಾನಗಳಿಗೆ ಭೇಟಿ ನೀಡುವುದಿದೆ. ಇದಕ್ಕಾಗಿ ಒಂದು ತಿಂಗಳ ಮೊದಲೇ ಸಂಭ್ರಮದ ತಯಾರಿ ಶುರುವಾಗುತ್ತದೆ. ಒಂಬತ್ತು ದಿನದಲ್ಲಿ ಯಾವ ಯಾವ ಬಣ್ಣದ ಸೀರೆ ಅಥವಾ ಉಡುಪು ಧರಿಸುವುದು ಎಂದು ಸ್ನೇಹಿತೆಯರಲ್ಲಿ, ಅಕ್ಕಪಕ್ಕದವರಲ್ಲಿ ತಿಳಿದು ತೊಟ್ಟು ಆನಂದಿಸಿ ಸಂಭ್ರಮೋತ್ಸವವನ್ನು ಆಚರಿಸುತ್ತಾರೆ.

ತುಳುನಾಡಿನ ನವರಾತ್ರಿ
ತುಳುನಾಡಿನಲ್ಲಿ ನವರಾತ್ರಿಯನ್ನು “ಮಾರ್ನೆಮಿ’ಯೆಂದು ಕರೆಯಲಾಗುತ್ತದೆ. ಹಳ್ಳಿಹಳ್ಳಿಯ ಮೂಲೆ ಮೂಲೆಯಲ್ಲಿ ಇರುವ ದೇವಿಯ ದೇವಾಲಯಗಳಲ್ಲಿ ದುರ್ಗಾಮಾತೆಯ ಆರಾಧನೆ ನಡೆಯುತ್ತದೆ. ಕೆಲವರ ಮನೆಗಳಲ್ಲಿ ಒಂಬತ್ತು ದಿನಗಳಲ್ಲಿ ಒಂದು ದಿನ ಅಥವಾ ಎಲ್ಲಾ ದಿನಗಳಲ್ಲಿ ದೇವಿಯ ವಿಗ್ರಹವಿಟ್ಟು ಪೂಜಿಸುವುದಿದೆ. ಪ್ರತಿ ಸಂಜೆ ಕುಟುಂಬಸ್ಥರನ್ನು, ನೆರೆಹೊರೆಯವರನ್ನು ಕರೆದು ಭಜನೆ ಮಾಡುತ್ತಾರೆ. ನವರಾತ್ರಿಯನ್ನು ಹೀಗೇ ಆಚರಿಸಬೇಕೆಂದೇನೂ ನಿಯಮವಿಲ್ಲ. ಭಕ್ತಿಯಿಂದ ದೇವಿಯನ್ನು ಪೂಜಿಸಿದರೆ  ಸಾಕು, ಮನಸ್ಸಿನಲ್ಲೇ ನೆನೆದರೂ ಅಷ್ಟೇ  ಸಾಕು. ಆಕೆ ನಮ್ಮನ್ನು ಕಾಪಾಡುತ್ತಾಳೆ. ಇಲ್ಲಿ  ನಂಬಿಕೆ ಮುಖ್ಯ.

ಇವತ್ತು ನಾವು ವಿಚಿತ್ರವಾದ ಕಾಲಘಟ್ಟದಲ್ಲಿದ್ದೇವೆ. ಹೆಣ್ಣಿನ ಮೇಲೆ ಅತ್ಯಾಚಾರವಿಲ್ಲದ ದಿನವೇ ಇಲ್ಲ. ಕಾಲ ಇಷ್ಟೊಂದು ಮುಂದುವರಿದರೂ ಮನುಷ್ಯತ್ವಕ್ಕೆ ಮಸುಕು ಕವಿದಿರುವುದು ಸಂಕಟದ ಸಂಗತಿ. ಹೆಣ್ಣುಮಕ್ಕಳು ಭಯದಿಂದ ಸಂಚರಿಸುವ ದಿನಗಳಿವು. ಮತ್ತೂಂದೆಡೆ, ಶಬರಿಮಲೆಗೆ ಹೆಣ್ಣಿನ ಪ್ರವೇಶ ಪ್ರವೇಶ ತಪ್ಪೋ ಸರಿಯೋ ಎಂಬ ಚರ್ಚೆ ನಡೆಯುತ್ತಿದೆ. ಸುಪ್ರೀಂಕೋರ್ಟಿನ ಪ್ರವೇಶವಾಗಿದೆ. ಪ್ರತಿಭಟನೆಗಳು ನಡೆಯುತ್ತಿವೆ. ಇಲ್ಲಿ ಮೂರು ಸಂಗತಿಗಳಿವೆ. ಒಂದು, ಹೆಣ್ಣು ಕೂಡ ಮನುಷ್ಯಳೇ ಆಗಿರುವುದರಿಂದ ಆಕೆಗೆ ದೇವಸ್ಥಾನಕ್ಕೆ ಪ್ರವೇಶ ತಪ್ಪಲ್ಲ ಎಂಬುದು. ಹೆಣ್ಣಿನಂಥ ದೇಹದಲ್ಲಾಗುವ ಬದಲಾವಣೆಗಳಂತೆಯೇ ಗಂಡಿನಲ್ಲಿಯೂ ಬದಲಾವಣೆಗಳಾಗುವುದಿಲ್ಲವೆ ಎಂಬುದು ಒಂದು ಪ್ರಶ್ನೆ. ಎರಡನೆಯದಾಗಿ, ದೇವಸ್ಥಾನ ಎಂಬುದು ನಂಬಿಕೆಯ ಮೇಲೆ ನಿಂತಿರುವ ಜಾಗವಾಗಿರುವುದರಿಂದ ಅಲ್ಲಿ ನಂಬಿಕೆಗೆ ದ್ರೋಹ ಬಗೆಯಬಾರದು. ಹೆಣ್ಣುಗಳು ತಾವೇ ದೇವಸ್ಥಾನಕ್ಕೆ ಪ್ರವೇಶಿಸುವುದಿಲ್ಲ ಎಂದು ಹೇಳಿದಲ್ಲಿ ಕೋರ್ಟಿನ ತೀರ್ಪಿಗೆ ಏನು ಬೆಲೆಯಿದೆ? ಮೂರನೆಯದಾಗಿ, ದೇವಸ್ಥಾನವೇ ದೇವರ ತಾಣವೆಂದು ಏಕೆ ಭಾವಿಸಬೇಕು? ನೀವು ನಿಂತಲ್ಲಿಯೇ ನಮಸ್ಕಾರ ಮಾಡಿದರೆ ಅದು ದೇವರಿಗೆ ತಲುಪುತ್ತದೆ. ಹಾಗಿರುವಾಗ ದೇವಸ್ಥಾನಕ್ಕೆ ಹೋಗಲೇಬೇಕೆಂಬ ಹಠ ಹೆಣ್ಣುಮಕ್ಕಳಿಗೇಕೆ? ತಾವು ನಾವಿದ್ದಲ್ಲಿಯೇ ದೇವರಿಗೆ ನಮಸ್ಕರಿಸುತ್ತೇವೆ ಎಂದು ಭಾವಿಸುವ ಹೆಣ್ಣುಮಕ್ಕಳನ್ನು ಮತ್ತೆ ಅಪನಂಬಿಕೆಯ ಕೂಪಕ್ಕೆ ತಳ್ಳಿದಂತಾಗಲಿಲ್ಲವೆ, ಈ ತೀರ್ಪಿನಿಂದ?

ನವರಾತ್ರಿ ಎಂದರೆ ಹೆಣ್ಣುದೇವರ ಪೂಜೆ. ಹೆಣ್ಣಿನ ಕುರಿತ ಸಮಕಾಲೀನ ಚರ್ಚಾಸಂಗತಿಗಳೆಲ್ಲ ನವರಾತ್ರಿ ಕಾಲದಲ್ಲಿ ಮುನ್ನೆಲೆಗೆ ಬಂದಿರುವುದು ಅನುಚಿತವೇನೂ ಅಲ್ಲ. ಏನೇ ಇರಲಿ, ಮಹಿಳೆ ಸ್ವಾಭಿಮಾನದ ಬದುಕನ್ನು ನಡೆಸಲು ನವರಾತ್ರಿ ಪ್ರೇರಣೆ ನೀಡಲಿ. 

ಸ್ವಾತಿ ಎನ್‌.

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.