ನೀ ಶೀತಲ, ನೀ ಕೋಮಲ
Team Udayavani, Jan 2, 2019, 12:30 AM IST
ಚಳಿಗಾಲದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಕೊಂಚ ಕಷ್ಟದ ಕೆಲಸ. ಒಡೆಯುವ ಚರ್ಮ, ಕೈಕಾಲು ಗಂಟಿನಲ್ಲಿ ಕಾಣಿಸಿಕೊಳ್ಳುವ ನೋವು, ಬಿರಿಯುವ ತುಟಿ, ನೆಗಡಿ… ಮುಂತಾದ ಸಮಸ್ಯೆಗಳು ನಮ್ಮನ್ನು ಹೈರಾಣಾಗಿಸುತ್ತವೆ. ಆಗೇನು ಮಾಡಬೇಕು ಅಂತ ನಿಮಗ್ಗೊತ್ತಾ?
•ಚಳಿಗಾಲದಲ್ಲಿ ಆಹಾರದಲ್ಲಿ ಶುದ್ಧ ತುಪ್ಪವನ್ನು ಬಳಸುವುದರಿಂದ ದೇಹ ಬೆಚ್ಚಗಿರುತ್ತದೆ.
•ಅಭ್ಯಂಜನ ಸ್ನಾನ ಮಾಡುವುದರಿಂದ ದೇಹದಲ್ಲಿ ತೇವಾಂಶ ಉಳಿದು, ತ್ವಚೆ ಕಾಂತಿಯುತವಾಗುತ್ತದೆ.
•ಚಳಿಗಾಲದಲ್ಲಿ ಬಿಸಿ ಬಿಸಿಯಾಗಿ ತುಳಸಿ, ಪುದೀನ, ಜೇನುತುಪ್ಪ, ಲಿಂಬೆಹಣ್ಣಿನ, ಶುಂಠಿ ರಸ ಮಿಶ್ರಿತ ಟೀಯನ್ನು ಕುಡಿಯಿರಿ.
•ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ಹಸಿವಾಗುತ್ತದೆ. ಹಾಗಾಗಿ, ದೇಹದ ಉಷ್ಣತೆಯನ್ನು ಕಾಪಾಡುವ ಹಾಗೂ ಸುಲಭವಾಗಿ ಜೀರ್ಣವಾಗುವ ಪೌಷ್ಟಿಕ ಆಹಾರವನ್ನು ತಿನ್ನಿ.
•ಚಳಿಗಾಲದಲ್ಲಿ ದೇಹದ ಉಷ್ಣತೆಯ ಪ್ರಮಾಣದಲ್ಲಿ ಏರಿಳಿಕೆ ಆಗುವುದರಿಂದ, ಮೂಳೆಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆದ್ದರಿಂದ, ನಡಿಗೆ ಮತ್ತು ವ್ಯಾಯಾಮವನ್ನು ನಿಯಮಿತವಾಗಿ ರೂಢಿಸಿಕೊಳ್ಳಿ.
•ದೇಹದಲ್ಲಿ ತೇವಾಂಶ ಕಡಿಮೆಯಾಗದಂತೆ, ಹೆಚ್ಚೆಚ್ಚು ನೀರನ್ನು ಕುಡಿಯಬೇಕು.
•ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ಚರ್ಮ ಸಮಸ್ಯೆಗಳು ಹೆಚ್ಚಾಗುತ್ತವೆ. ಆದ್ದರಿಂದ ಚರ್ಮಕ್ಕೆ ಬೇಕಾದ ವಿಟಮಿನ್ ಸಿಗುವ ಆಹಾರವನ್ನು ಸೇವಿಸಿ.
•ತುಟಿ ಒಡೆದು ರಕ್ತ ಒಸರುವುದರಿಂದ ಪಾರಾಗಲು, ಪ್ರತಿ ರಾತ್ರಿ ತುಟಿಗಳಿಗೆ ಲಿಪ್ ಬಾಮ್ ಹಚ್ಚಿ. ಒಣಚರ್ಮದವರು, ಬಾದಾಮಿ ಎಣ್ಣೆ/ ಆಲಿವ್ ಎಣ್ಣೆ ಹಚ್ಚಿದರೆ ಉತ್ತಮ.
•ವ್ಯಾಸಲಿನ್ ಜೊತೆ, ಸಕ್ಕರೆ ಬೆರೆಸಿ ತುಟಿಗಳನ್ನು ಸðಬ್ ಮಾಡಿದರೆ, ತುಟಿ ಬಿರುಕಾಗದಂತೆ ತಡೆಯಬಹುದು.
•ತಂಪಾದ ಗಾಳಿ ಚರ್ಮಕ್ಕೆ ತಾಕುವುದರಿಂದ ಚರ್ಮ ಒಣಗಿ, ಬಿಗಿಯಾಗುತ್ತದೆ. ಮನೆಯಿಂದ ಹೊರಗೆ ಹೋಗುವಾಗ ಜಾಕೆಟ್ ಅಥವಾ ಸ್ವೆಟರ್, ಶಾಲ್ಗಳನ್ನು ಧರಿಸಿದರೆ ಒಳಿತು.
ಜೆ. ಪುಷ್ಪಲತಾ