ಪುತ್ತೂರು: ಎಸೆಸೆಲ್ಸಿ ಪರೀಕ್ಷೆಗೆ 5,750 ವಿದ್ಯಾರ್ಥಿಗಳು
Team Udayavani, Mar 20, 2019, 9:45 AM IST
ಪುತ್ತೂರು : ಈ ವರ್ಷದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಮಾ. 21ರಿಂದ ಆರಂಭಗೊಳ್ಳಲಿದ್ದು, ಪುತ್ತೂರು ತಾಲೂಕಿನ 12 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 5,750 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
4,852 ವಿದ್ಯಾರ್ಥಿಗಳು, 174 ಖಾಸಗಿ ವಿದ್ಯಾರ್ಥಿಗಳು, 246 ಪುನರಾವರ್ತಿತ ಹಾಗೂ 79 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ತಾಲೂಕಿನ ಸಂತ ಫಿಲೋಮಿನಾ ಪರೀಕ್ಷಾ ಕೇಂದ್ರದಲ್ಲಿ 650, ಕೊಂಬೆಟ್ಟು ಸ.ಪ.ಪೂ. ಕಾಲೇಜಿನಲ್ಲಿ 474, ಸೈಂಟ್ ವಿಕ್ಟರನ ಬಾಲಿಕಾ ಪ್ರೌಢ ಶಾಲೆಯಲ್ಲಿ 450, ತೆಂಕಿಲ ವಿವೇಕಾನಂದ ಆಂ. ಮಾ. ಶಾಲೆಯಲ್ಲಿ 700, ಉಪ್ಪಿನಂಗಡಿ ಸ.ಪ.ಪೂ. ಕಾಲೇಜಿನಲ್ಲಿ 650, ಕಡಬ ಕ್ನಾನಾಯಜ್ಯೋತಿ ಶಾಲೆಯಲ್ಲಿ 400, ನೆಲ್ಯಾಡಿ ಸೈಂಟ್ ಜಾರ್ಜ್ ಪ.ಪೂ. ಕಾಲೇಜಿನಲ್ಲಿ 450, ರಾಮಕುಂಜೇಶ್ವರ
ಪ.ಪೂ. ಕಾಲೇಜಿನಲ್ಲಿ 425, ಸವಣೂರು ವಿದ್ಯಾರಶ್ಮಿ ಪ್ರೌಢ ಶಾಲೆಯಲ್ಲಿ 400, ಕಡಬ ಸ. ಪೂ. ಕಾಲೇಜಿನಲ್ಲಿ 650, ಈಶ್ವರಮಂಗಲ ಗಜಾನನ ಆಂ. ಮಾ. ಶಾಲೆಯಲ್ಲಿ 450, ಕುಂಬ್ರ ಸ. ಪ.ಪೂ. ಕಾಲೇಜಿನಲ್ಲಿ 350 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಓರ್ವ ಮುಖ್ಯ ಅಧೀಕ್ಷಕ, 350-500 ವಿದ್ಯಾರ್ಥಿಗಳಿರುವ ಕೇಂದ್ರಗಳಿಗೆ ಒಬ್ಬ ಉಪಾಧೀಕ್ಷಕ ಹಾಗೂ ಅದಕ್ಕಿಂತ ಮಿಕ್ಕಿ ವಿದ್ಯಾರ್ಥಿಗಳಿರುವಲ್ಲಿ ಇಬ್ಬರು ಉಪ ಅಧೀಕ್ಷಕರು, ಕಸ್ಟೋಡಿಯನ್, ಒಬ್ಬ ಸ್ಥಾನಿಕ ಜಾಗೃತ ದಳದ ಅಧಿಕಾರಿ ಹಾಗೂ ಪ್ರತಿ ತರಗತಿಗತಳಿಗೆ ಮೇಲ್ವಿಚಾರಕರು ಕರ್ತವ್ಯ
ನಿರ್ವಹಣೆ ಮಾಡಲಿದ್ದಾರೆ. ಜತೆಗೆ ಸ್ವ್ಯಾಡ್ ಮತ್ತು ಜಿಲ್ಲಾ ವೀಕ್ಷಕರು ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ.
ಗೊಂದಲ ಬೇಡ
ವಿದ್ಯಾರ್ಥಿಗಳು ಪೂರ್ವಾಹ್ನ 8.45ಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸೂಚನೆ ನೀಡಲಾಗಿದೆ. 9.15ರ ಒಳಗೆ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಹಾಜರಿರಬೇಕು. 9.30ಕ್ಕೆ ಪರೀಕ್ಷೆ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ಯಾವುದೇ ಅನುಮಾನ, ತೊಂದರೆಗಳ ಕುರಿತು ಪರೀಕ್ಷಾ ಕೇಂದ್ರದ ಪ್ರಮುಖರು ಅಥವಾ ಶಿಕ್ಷಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವಿನಂತಿಸಿದ್ದಾರೆ.
ಸಹಾಯವಾಣಿ
ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಸಂದೇಹಗಳಿದ್ದಲ್ಲಿ ಸಹಾಯವಾಣಿ
ಸಂಖ್ಯೆ 9449449148, 9480577893 ಸಂಪರ್ಕಿಸಬಹುದು.