ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪ್ರತಿಭಟನೆ
Team Udayavani, May 4, 2019, 3:46 PM IST
ಕುಷ್ಟಗಿ: ರಾಯಚೂರಿನ ಇಂಜನಿಯರಿಂಗ್ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದವರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಲು ಒತ್ತಾಯಿಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಇಲ್ಲಿನ ಕಾರ್ಗಿಲ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿ ತಲುಪಿತು. ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾಧ್ಯಕ್ಷ ಈಶಪ್ಪ ಬಡಿಗೇರ ಮಾತನಾಡಿ, ರಾಯಚೂರಿನ ಇಂಜನಿಯರಿಂಗ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಮನುಕುಲವೇ ತಲೆ ತಗ್ಗಿಸುವ ನೀಚ ಕೃತ್ಯವಾಗಿದೆ. ಇದು ಮತ್ತೂಂದು ನಿರ್ಭಯ ಪ್ರಕರಣವಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿ, ತಪ್ಪಿತಸ್ಥ ಸುದರ್ಶನ ಯಾದವ ಹಾಗೂ ಆತನ ಸ್ನೇಹಿತರನ್ನು ಮರಣ ದಂಡನೆ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಗುರಪ್ಪ ಬಡಿಗೇರ ಮಾತನಾಡಿ, ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಮುಚ್ಚಿಹಾಕಿಸಿ ಆರೋಪಿಗಳನ್ನು ಶಿಕ್ಷೆಯಿಂದ ಪಾರು ಮಾಡಲು ಯತ್ನಿಸಲಾಗುತ್ತಿದೆ. ಈ ಕೃತ್ಯ ಪೂರ್ವನಿಯೋಜಿತ ಕೊಲೆಯಾಗಿದೆ. ರಾಕ್ಷಸಿಹೇಯ ಕೃತ್ಯದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಶುರುವಾಗಿದ್ದು, ಸರ್ಕಾರ ನಿಷ್ಪಕ್ಷಪಾತ ತನಿಖೆಯಿಂದ ಆರೋಪಿಗಳಿಗೆ ಉಗ್ರ ಶಿಕ್ಷೆಯಾದರೆ ಇಂತಹ ಪ್ರಕರಣಗಳು ಪುನರಾವರ್ತನೆಯಾಗುವುದಿಲ್ಲ. ಈ ಪ್ರಕರಣ ಬಗ್ಗೆ ಸಿಒಡಿ ತನಿಖೆಯಿಂದ ಯಾವುದೇ ಪ್ರಯೋಜನೆಯಾಗದು, ಸಿಬಿಐ ತನಿಖೆಯಾಗಬೇಕೆಂದು ಆಗ್ರಹಿಸಿದರು.
ನಂತರ ಗ್ರೇಡ್-2 ತಹಶೀಲ್ದಾರ್ ವಿಜಯಾ ಅವರಿಗೆ ಮನವಿ ಸಲ್ಲಿಸಿದರು. ವಿಶ್ವಕರ್ಮ ಸಮಾಜದ ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ರಾಯಚೂರು ಜಿಲ್ಲಾಧ್ಯಕ್ಷ ಚಂದಪ್ಪ ಬಡಿಗೇರ, ರಾಮಚಂದ್ರ ಬಡಿಗೇರ, ಶರಣಪ್ಪ ಬಡಿಗೇರ, ಶಿವಕುಮಾರ ಬಡಿಗೇರ, ವಾಸಪ್ಪ ಕಮ್ಮಾರ, ವಾಸಪ್ ಪತ್ತಾರ, ಕೆ.ಬಿ. ಬಡಿಗೇರ, ಮಾನಪ್ಪ ಕಮ್ಮಾರ, ಮಳಿಯಪ್ಪ ಪತ್ತಾರ, ಭೀಮಣ್ಣ ಬಡಿಗೇರ, ನಟರಾಜ ಸೋನಾರ, ಮಹೇಶ ಬಡಿಗೇರ, ರಾಮಣ್ಣ ಬ್ಯಾಲಿಹಾಳ ಮತ್ತಿತರಿದ್ದರು.