ದಸರಾ ರಜೆಯ ನೆನಪುಗಳು
Team Udayavani, Nov 1, 2019, 4:05 AM IST
ನಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ರಜೆಯೆಂದರೆ ತುಂಬಾ ಸಂತೋಷ. ಅದರಲ್ಲಿ ಶನಿವಾರ ಬಂತೆಂದರೆ ನಮಗೆ ಖುಶಿಯೋ ಖುಶಿ. ಏಕೆಂದರೆ, ಭಾನುವಾರ ಆಟ ಆಡಬಹುದಲ್ಲ ! ಆಗ ನಾವು ಐದು ಮಂದಿ ಗೆಳೆಯರಿದ್ದೆವು. ನಮ್ಮ ಶಾಲೆ ಎರಡು ಕಿ. ಮೀ. ದೂರದಲ್ಲಿದ್ದರೂ ಎಲ್ಲರೂ ಒಟ್ಟಿಗೆ ಶಾಲೆಗೆ ಹೋಗುವುದು, ಒಟ್ಟಿಗೆ ಮನೆಗೆ ಬರುವುದು ನಮ್ಮ ದಿನಚರಿ.
ಒಂದು ದಿನ ನಮ್ಮಲ್ಲಿ ಒಬ್ಬನಿಗೆ ಜ್ವರ ಬಂದು, “ಇವತ್ತು ನಾನು ಶಾಲೆಗೆ ಬರುವುದಿಲ್ಲ’ ಎಂದು ಹೇಳಿ ಮನೆಯಲ್ಲೇ ಉಳಿದುಬಿಟ್ಟ. ನನಗೂ ಹೀಗೆಯೇ ಜ್ವರ ಬಂದರೆ ಒಳ್ಳೆಯದಿತ್ತು. ಮನೆಯಲ್ಲೇ ಇರಬಹುದಿತ್ತು ಎಂದು ಅನಿಸಿತು. ಸರಿ, ನಾವೆಲ್ಲರೂ ಸೇರಿ “ಇವತ್ತು ಶಾಲೆಗೆ ಹೋಗುವುದು ಬೇಡ’ ಎಂದು ನಿರ್ಧರಿಸಿದೆವು. ಹಾಗಂತ ಮನೆಗೆ ಹೋದರೆ ಅಮ್ಮನಿಂದ ಪೆಟ್ಟು ತಿನ್ನಬೇಕಾಗುತ್ತದೆ. ಒಬ್ಬ ಅಲ್ಲೇ ಸ್ವಲ್ಪ ದೂರದಲ್ಲಿ ಇರುವ ಅಜ್ಜಿ ಮನೆಗೆ ಹೋಗುತ್ತೇನೆಂದ. ಅದಕ್ಕೆ ನಾನು ಹೇಳಿದೆ, “ಎಲ್ಲಿಯೂ ಹೋಗುವುದು ಬೇಡ. ಇಲ್ಲೇ ಇರುವ ಗುಡ್ಡದಲ್ಲಿ ನಾವೆಲ್ಲ ಕುಳಿತುಕೊಂಡು ಸಮಯ ಕಳೆಯೋಣ’ ಎಂದೆ. ಎಲ್ಲರೂ ಒಪ್ಪಿದರು. ಅಲ್ಲೇ ಸೇರಿ ಸಮಯ ಕಳೆದೆವು. ಸ್ವಲ್ಪ ಹೊತ್ತಿನಲ್ಲಿ ನಮಗೆ ಹಸಿವೆಯಾಗಲು ಶುರುವಾಯಿತು. ಏನು ಮಾಡುವುದು ನಮ್ಮಲ್ಲಿ ತಿನ್ನಲೂ ಏನೂ ಇರಲಿಲ್ಲ. ಹಾಗೆ ಅತ್ತಿತ್ತ ಕಣ್ಣು ಆಡಿಸುವಾಗ ಗಿಡಗಳ ಪೊದೆಯಲ್ಲೆಲ್ಲ ಸಿಕ್ಕಿದ ಹಣ್ಣುಗಳನ್ನು ತಿಂದು ಪಕ್ಕದಲ್ಲಿದ್ದ ಕೆರೆಯ ನೀರನ್ನು ಕುಡಿದು ಹೊಟ್ಟೆ ತಂಪಾಗಿಸಿದೆವು. ನಂತರ ಎಲ್ಲರೂ ಸೇರಿ ಆಟ ಆಡಿದೆವು. ಹಾಗೆ ಆಡುತ್ತ ಆಡುತ್ತ ಎಲ್ಲೆಲ್ಲೂ ಓಡಾಡುವಾಗ ಗುಡ್ಡದ ಪಕ್ಕದ ಮನೆಯವರ್ಯಾರೋ ನೋಡಿ ನಮ್ಮ ಬಗ್ಗೆ ನಮ್ಮ ಮನೆಗೆ ಹಾಗೂ ಶಾಲೆಗೆ ಹೇಳಿಬಿಟ್ಟರು. ನಾನು ಮನೆಗೆ ಕಾಲಿಡುತ್ತಿದ್ದಂತೆ ನನ್ನ ಅಮ್ಮ ಒಂದು ದೊಡ್ಡ ಬೆತ್ತದಿಂದ ಬೆನ್ನಿಗೆ ಎರಡು ಬಾರಿಸಿದರು. ಶಾಲೆಗೆ ಹೋಗದೆ ಗುಡ್ಡೆಯಲ್ಲಿ ಕಾಲಕಳೆಯಲು ನಿಮಗೆ ಯಾರು ಹೇಳಿದ್ದು ಎಂದು ಚೆನ್ನಾಗಿ ಬೈಯ್ದರು. ಶಾಲೆಯಲ್ಲೂ ಮೇಸ್ಟ್ರೆ ನಮಗೆ ಕೈಗೆ ಮುಂದಕ್ಕೆ ಚಾಚಲು ಹೇಳಿ ಎರಡೆರಡು ಪೆಟ್ಟು ಕೊಟ್ಟರು. ಮುಂದೆ ನಾನು ಇದರಿಂದ ಒಳ್ಳೆಯ ಪಾಠ ಕಲಿತೆ. ಶಾಲೆಗೆ ಹೋಗುವುದನ್ನು ಒಂದು ದಿನವೂ ತಪ್ಪಿಸಲಿಲ್ಲ.
ನಮಗೆ ದಸರಾ ಸಮಯದಲ್ಲಿ ತುಂಬಾ ದಿನ ರಜೆ ಕೊಡುತ್ತಿದ್ದರು. ದಸರಾ ರಜೆಯಲ್ಲಿ ಒಮ್ಮೆ ನಾವು ಐದು ಮಂದಿ ಗೆಳೆಯರು ಸೇರಿ ಯೋಚನೆ ಮಾಡಿ ಹುಲಿ ವೇಷ ಮಾಡಿದೆವು. ಒಬ್ಬ ವಾದ್ಯ, ಇನ್ನೊಬ್ಬ ಕೋವಿ ಹೆಗಲ ಮೇಲೆ ಇಟ್ಟುಕೊಂಡು ಬೇಟೆಗಾರನ ವೇಷ ಮಾಡಿದ. ಉಳಿದವರು ಹುಲಿವೇಷ ಹಾಕಿದರು. ಮನೆ ಮನೆಗೆ ಹೋಗಿ ಕುಣಿದೆವು. ಈ ನೆನಪು ನನ್ನಲ್ಲಿ ಇಂದಿಗೂ ಮರೆಯಲಾಗುತ್ತಿಲ್ಲ.
ಗೀತಾಶ್ರೀ
ದ್ವಿತೀಯ ಪಿಯುಸಿ, ವಿವೇಕಾನಂದ ಪದವಿಪೂರ್ವ ಕಾಲೇಜು, ಎಡಪದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!