ಪಾರದರ್ಶಕ ತೆರಿಗೆ ಪಾವತಿಗೆ ಗಣಕೀಕೃತ ಮೌಲ್ಯಮಾಪನ
Team Udayavani, Nov 4, 2019, 5:46 AM IST
ಈಗಾಗಲೇ ಎಲ್ಲರೂ ಆದಾಯ ತೆರಿಗೆ ಫೈಲಿಂಗ್ಮಾಡಿದ್ದಾಗಿದೆ. ಅದರ ಮೌಲ್ಯಮಾಪನ (ಅಸೆಸ್ಮೆಂಟ್) ನಡೀತಿದೆ. ಅಲ್ಲಿ ತೆರಿಗೆ ಪಾವತಿದಾರ ಏನಾದರೂ ತಪ್ಪು ಮಾಹಿತಿ ನೀಡಿದ್ದಲ್ಲಿ ಅಂಥವರಿಗೆ ನೋಟಿಸ್ಹೋಗುತ್ತದೆ. ನಂತರ ವಿಚಾರಣೆ ನಡೆಯುತ್ತದೆ. ಇವಿಷ್ಟೂ ಪ್ರಕ್ರಿಯೆಯನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಯಂತ್ರಗಳೇ ನಿರ್ವಹಿಸುವ ವ್ಯವಸ್ಥೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಇದರ ಕಾರ್ಯಚಟುವಟಿಕೆಯ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಬಹುದು.
ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ ಅನಂತರ ಅದರ ಮೌಲ್ಯಮಾಪನ ನಡೆಯುವುದೆಂಬ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುವ ಸಲುವಾಗಿ ಕೇಂದ್ರ ಸರಕಾರ ಹೊಸ “ಇ- ಅಸೆಸ್ಮೆಂಟ್” (ಇ- ಮೌಲ್ಯಮಾಪನ) ಎಂಬ ನೀತಿಯನ್ನು ಜಾರಿಗೊಳಿಸಿದೆ. ಇದರ ಹಿಂದೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಪಾರದರ್ಶಕತ್ವ ತರುವ ಉದ್ದೇಶವನ್ನು ಹೊಂದಲಾಗಿದೆ ಎಂಬುದು ಸರಕಾರದ ಪ್ರತಿಪಾದನೆಯಾಗಿದೆ.
ತೆರಿಗೆ ಪಾವತಿದಾರ, ಅಧಿಕಾರಿಗಳ ನಡುವೆ ಯಾವುದೇ ರೀತಿಯ ಸಂಪರ್ಕ ಏರ್ಪಡುವುದು ಈ ವ್ಯವಸ್ಥೆಯಿಂದ ತಪ್ಪುತ್ತದೆ. ಇ- ಅಸೆಸ್ಮೆಂಟ್ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಿದ್ದು ಪೂರ್ತಿಯಾಗಿ ಯೋಜನೆ ಜಾರಿಗೊಂಡಾಗ ಪ್ರತಿಯೊಂದು ಕೆಲಸ ಆರ್ಟಿಫಿಶಿಯಲ್ಇಂಟೆಲಿಜೆನ್ಸ್ ತಂತ್ರಜ್ಞಾನದ ಸಹಾಯದಿಂದ, ಮನುಷ್ಯರ ನೆರವಿಲ್ಲದೆ ಆಟೋಮೇಟೆಡ್(ಸ್ವಯಂಚಾಲಿತ) ಆಗಿ ನಡೆಯಲಿವೆ. ಆದರೆ ಸದ್ಯ ಪರೀಕ್ಷಾ ಹಂತದಲ್ಲಿರುವುದರಿಂದ, ಈ ಯೋಜನೆಯಲ್ಲಿ ಸದ್ಯದ ಮಟ್ಟಿಗೆ ಕೆಲ ಸಂದರ್ಭಗಳಿಗೆ ವಿನಾಯಿತಿ ನೀಡಲಾಗಿದೆ. ಉದಾಹರಣೆಗೆ, ಮೌಲ್ಯಮಾಪನದ ವಿರುದ್ಧ ತೆರಿಗೆ ಪಾವತಿದಾರ ಪಿಟಿಶನ್(ದೂರು) ಸಲ್ಲಿಸುವ ಸಂದರ್ಭಗಳಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಬೇಕಾಗುತ್ತದೆ.
ಫೇಸ್ಲೆಸ್ ಮೌಲ್ಯಮಾಪನ
ಈ ಹಿಂದೆ ಜಾರಿಯಲ್ಲಿದ್ದ ವ್ಯವಸ್ಥೆಯಲ್ಲಿ ತೆರಿಗೆ ಮೌಲ್ಯಮಾಪನ ನಡೆಯುವ ವೇಳೆ ತೆರಿಗೆ ಪಾವತಿದಾರ ಮತ್ತು ತೆರಿಗೆ ಇಲಾಖೆಯ ನಡುವೆ ಸಂಪರ್ಕ ಏರ್ಪಡುತ್ತಿತ್ತು. ಇದರಿಂದಾಗಿ ಲೋಪ,ದೋಷಗಳು ಉಂಟಾಗುವ ಸಾಧ್ಯತೆಗಳು ತುಂಬಾ ಇದ್ದವು. ವೈಯಕ್ತಿಕ ಹಿತಾಸಕ್ತಿಯಿಂದ ತಮಗೆ ಬೇಕಾದ ಹಾಗೆ ದಾಖಲೆಗಳನ್ನು ತಿರುಚುವ, ಆ ಮೂಲಕ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವ ಅವಕಾಶಗಳೂ ಇದ್ದವು. ಇದನ್ನು ಗಮನಿಸಿಯೇ ಕೇಂದ್ರ ಸರ್ಕಾರ, ಆದಾಯ ತೆರಿಗೆ ಇಲಾಖೆ ಮತ್ತು ತೆರಿಗೆ ಪಾವತಿದಾರರ ನಡುವೆ ಮುಖತಃ ಭೇಟಿಯನ್ನು ತಪ್ಪಿಸುವ ಸಲುವಾಗಿ ಇ- ಅಸೆಸ್ಮೆಂಟ್ ಸ್ಕೀಮ್ನ್ನು ಜಾರಿಗೆ ತಂದಿದೆ. ಮುಖತಃ ಭೇಟಿಯನ್ನು ಈ ವ್ಯವಸ್ಥೆ ದೂರವಾಗಿಸುವುದರಿಂದ ಇದನ್ನು “ಫೇಸ್ಲೆಸ್ ಆಸೆಸ್ಮೆಂಟ್’ ಎಂದು ಕರೆಯಲಾಗಿದೆ. ಪ್ರಧಾನಿಯವರ ಭವಿಷ್ಯದ ಯೋಜನೆಗಳಿಗೆ ಇದರಿಂದ ಸಹಾಯವಾಗುವುದು ಎಂಬ ವಿಶ್ವಾಸವನ್ನು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ವ್ಯಕ್ತಪಡಿಸಿದ್ದಾರೆ.
ಕೆಲಸ ವಹಿಸುತ್ತೆ ಕಂಪ್ಯೂಟರ್!
ಯೋಜನಾ ವ್ಯವಸ್ಥೆಯ ಸಂಪೂರ್ಣ ನಿಯಂತ್ರಣಕ್ಕಾಗಿ ದಿಲ್ಲಿಯಲ್ಲಿ ಪ್ರತ್ಯೇಕ ಕೇಂದ್ರ ಕಚೇರಿ, ನ್ಯಾಶನಲ್ ಇ- ಅಸೆಸ್ಮೆಂಟ್ ಸೆಂಟರ್(ಎನ್ಇಎಸಿ) ನ್ನು ಸ್ಥಾಪಿಸಲಾಗಿದೆ. ಈ ಕೇಂದ್ರ ಕಚೇರಿಯಲ್ಲಿ ಒಟ್ಟು 16 ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಕಚೇರಿಯನ್ನು ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರು ಮುನ್ನಡೆಸಲಿದ್ದಾರೆ. ಈ ಕೇಂದ್ರ, ಸ್ವಾಯತ್ತ ಸಂಸ್ಥೆಯಾಗಿ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದ್ದು, ತೆರಿಗೆ ಮೌಲ್ಯಮಾಪನದ ನಂತರ ಎನ್ಇಎಸಿ ತೆರಿಗೆ ಪಾವತಿದಾರರಿಗೆ ನೋಟೀಸ್ಗಳನ್ನು ಕಳಿಸಲಿದೆ. ಅದರ ಜತೆಯಲ್ಲಿಯೇ ನೋಟಿಸ್ ಕಳಿಸಿದ್ದರ ಕಾರಣವನ್ನು ತಿಳಿಸಲಾಗುವುದು.
ನೋಟಿಸ್ ಕಳಿಸಿದ 15 ದಿನಗಳಲ್ಲಿ ಆಯಾ ಕೇಸನ್ನು ಅಧಿಕಾರಿಗೆ ವಹಿಸಲಾಗುವುದು. ಅಧಿಕಾರಿಗಳಿಗೆ ಕೇಸು ವಹಿಸುವ ಕೆಲಸವನ್ನು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ಇಂಟೆಲಿಜೆನ್ಸ್) ತಂತ್ರಜ್ಞಾನದ ಸಹಾಯದಿಂದ ಕಂಪ್ಯೂಟರ್ಗಳೇ ಮಾಡುವುದು. ಇದರಿಂದ ತಮಗೆ ಬೇಕಾದ ಅಧಿಕಾರಿಗಳಿಗೆ ಕೇಸನ್ನು ವರ್ಗಾಯಿಸುವಂತೆ ಮಾಡುವ ಸಾಧ್ಯತೆಯೇ ಇರುವುದಿಲ್ಲ. ನೋಟಿಸ್ಸಿÌàಕರಿಸಿದ ಅನಂತರ ತೆರಿಗೆ ಪಾವತಿದಾರ ಕೇಸಿನ ಹಿಯರಿಂಗ್ಗೆ ಹಾಜರಾಗಬೇಕಾಗುತ್ತದೆ. ಇ- ಅಸೆಸ್ಮೆಂಟ್ ಯೋಜನೆಯಲ್ಲಿ, ಕೇಸಿನ ಹಿಯರಿಂಗ್, ವೀಡಿಯೊ ಕಾಲ್ ಮೂಲಕ ನಡೆಯಲಿದೆ. ಈ ಸಂದರ್ಭದಲ್ಲೂ ನೋಟಿಸ್ ಸ್ವೀಕರಿಸಿದ ತೆರಿಗೆ ಪಾವತಿದಾರ ಅಧಿಕಾರಿಗಳನ್ನು ಭೇಟಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಜನಸಾಮಾನ್ಯರಿಗೆ ಇ- ಅಸೆಸ್ಮೆಂಟ್ನಿಂದ ಆಗುವ ಮುಖ್ಯ ಪ್ರಯೋಜನ ಎಂದರೆ ಸಮಯದ ಉಳಿತಾಯ. ತೆರಿಗೆ ಪಾವತಿದಾರ ಆದಾಯ ತೆರಿಗೆ ಇಲಾಖೆಗೆ ಭೇಟಿ ನೀಡಿ, ಅಧಿಕಾರಿಗಳನ್ನು ಭೇಟಿ ಮಾಡಿ ಗಂಟೆಗಳ ಕಾಲ, ದಿನಗಳ ಕಾಲ ಸಮಯ ವ್ಯಯ ಮಾಡುವುದನ್ನು ಈ ವ್ಯವಸ್ಥೆ ತಪ್ಪಿಸುತ್ತದೆ. ಅಲ್ಲದೆ, ಕಾರಣಾಂತರಗಳಿಂದ ನಿಗಧಿತ ದಿನದಂದು ಅಧಿಕಾರಿಗಳನ್ನು ಭೇಟಿ ಮಾಡಲಾಗದೆ ಕೇಸು ಗಂಭೀರ ಸ್ವರೂಪ ಪಡೆದುಕೊಳ್ಳುವುದರಿಂದಲೂ ಬಚಾವಾಗಬಹುದು. ಸರಳವಾಗಿ ಹೇಳು ವುದಾದರೆ; ಸತಾಯಿಸುವಿಕೆ, ಕಾಯಿಸು ವಿಕೆಯಿಂದ ತೆರಿಗೆ ಪಾವತಿದಾರ ಮುಕ್ತಿ ಪಡೆಯ ಬಹುದಾಗಿದೆ. ನಿಷ್ಠಾವಂತ ತೆರಿಗೆ ಪಾವತಿ ದಾರರೂ ಅಧಿಕಾರಿಗಳ ಬೆದರಿಕೆಗಳಿಗೆ ಗುರಿ ಯಾದ ಅನೇಕ ನಿದರ್ಶನಗಳಿವೆ. ಅವರಿಗೆಲ್ಲಾ ಈಗ ನಿರಾಳವಾದಂತಾಗಿದೆ ಎನ್ನುವುದರಲ್ಲೂ ಸತ್ಯಾಂಶವಿದೆ.
ರೀತಿ ರಿವಾಜುಗಳು
1 ತೆರಿಗೆ ಪಾವತಿದಾರ ತನ್ನ ಆದಾಯವನ್ನು ಪೂರ್ತಿಯಾಗಿ ಬಹಿರಂಗಪಡಿಸದಿದ್ದಲ್ಲಿ ಅಥವಾ ನಷ್ಟವನ್ನು ಇರುವುದಕ್ಕಿಂತ ಹೆಚ್ಚು ತೋರಿಸಿದ ಸಂದರ್ಭದಲ್ಲಿ ಸೆಕ್ಷನ್143(2)ರ ಅಡಿಯಲ್ಲಿ ನೋಟಿಸ್ ರವಾನೆಯಾಗುತ್ತದೆ.
2 ನೋಟಿಸ್ನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ತೆರಿಗೆ ಪಾವತಿದಾರನಿಗೆ ತಲುಪಿಸಲಾಗುವುದು. ಇ-ಮೇಲ್, ಮೊಬೈಲ್ ನಂಬರ್ಗೂ ನೋಟಿಸ್ರವಾನೆಯಾಗಲ್ಪಡುವುದು.
3 ನೋಟಿಸ್ ತಲುಪಿದ 15 ದಿನಗಳೊಳಗೆ ತೆರಿಗೆದಾರ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಆ ಪ್ರತಿಕ್ರಿಯೆಯನ್ನು ಇ- ಅಸೆಸ್ಮೆಂಟ್ ಕೇಂದ್ರ ಎನ್ಇಎಸಿ ಮಾನ್ಯ ಮಾಡಿದ ಅನಂತರವೇ ನೋಟಿಸ್ತಲುಪಿದೆ ಎನ್ನುವುದು ಖಾತರಿಯಾಗುತ್ತದೆ.
4 ಎಲ್ಲ ರೀತಿಯ ಸಂವಹನ, ಸಂಪರ್ಕ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ ಜರಗುವುದು. ಇಲಾಖೆಯೊಳಗಿನ ಆಂತರಿಕ ಸಂಪರ್ಕವೂ ಇದೇ ರೀತಿ ನಡೆಯಲಿದೆ.
5 ಈ ಯೋಜನೆ ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಎನ್ಇಎಸಿ ಯಾವುದೇ ಕೇಸನ್ನು ಗಣಕೀಕೃತ ವ್ಯವಸ್ಥೆಯ ಮೂಲಕ ಪ್ರಾದೇಶಿಕ ಕೇಂದ್ರಗಳಿಗೆ ವರ್ಗಾಯಿಸುವ ಅಧಿಕಾರ ಹೊಂದಿರುತ್ತದೆ.
6 ಪ್ರಾದೇಶಿಕ ಕೇಂದ್ರಗಳಿಗೆ ಹೆಚ್ಚಿನ ಮಾಹಿತಿ ಬೇಕಿ ದ್ದಲ್ಲಿ , ಆಯಾ ಪ್ರಕರಣಕ್ಕೆ ಸಂಬಂಧಿಸಿದ ತೆರಿಗೆ ಪಾವತಿ ದಾರನಿಂದ ದಾಖಲೆಗಳೇನಾದರೂ ಬೇಕಿದ್ದಲ್ಲಿ ಅದು ಮೊದಲು ಎನ್ಇಎಸಿ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು.
7 ಪ್ರಾದೇಶಿಕ ಕೇಂದ್ರಗಳು ತಮಗೆ ವಹಿಸಿದ ಮೌಲ್ಯಮಾಪನದ ವರದಿಯನ್ನು ಮುಖ್ಯ ಕಛೇರಿ ಎನ್ಇಎಸಿಗೆ ಕಳುಹಿಸಿ ಕೊಡಬೇಕು. ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಕರಣದ ಗಂಭೀರತೆಯ ಅನ್ವಯ, ಮಾನದಂಡಗಳಿಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು.
- ಶಿವಾನಂದ ಪಂಡಿತ್