ಹಸಿದ ಹೊಟ್ಟೆಗಳ ಸರ್ವರ್‌


Team Udayavani, Nov 19, 2019, 6:35 AM IST

cc-2

ಶ್ರೀಮಂತಿಕೆ ಪ್ರದರ್ಶನದ ಸೋಗಿನಲ್ಲಿ ಅಗತ್ಯವಿಲ್ಲದಿದ್ದರೂ ಸಭೆ, ಸಮಾರಂಭಗಳಲ್ಲಿ ಯಥೇಚ್ಛವಾಗಿ ಅಡುಗೆ ಮಾಡಿಸಿ ಉಳಿದ ಆಹಾರವನ್ನು ಬೀದಿಗೆ ಚೆಲ್ಲುವ ಸಂದರ್ಭದಲ್ಲೇ ಮೈಸೂರಿನ ರಾಜೇಂದ್ರ ಪಾತ್ರೆ ಒಡ್ಡುತ್ತಾರೆ. ಹೀಗೆ ಸಂಗ್ರಹಿಸಿದ ಆಹಾರವನ್ನು ಹಸಿದು ಕೂತಿರುವ ಮಂದಿಗೆ ಹಂಚಿ ಸಂಭ್ರಮ ಪಡುತ್ತಾರೆ. ಇದು ಯಾವ ಮಟ್ಟಕ್ಕೆ ಎಂದರೆ, ರಾಜೇಂದ್ರ ಅವರೇ ಊಟ ಉಳಿದಿದೆ ಬನ್ನಿ ಅಂತ ತಗೊಂಡು ಹೋಗಿ ಅಡಿಗೆಯವರೇ ಕರೆ ಮಾಡುತ್ತಾರಂತೆ. ಯಾರ ತುತ್ತಿನ ಮೇಲೆ ಯಾರ ಹೆಸರು ಬರೆದಿದೆಯೋ…

ಪ್ರತಿಯೊಂದು ಅನ್ನದ ಅಗುಳಿನ ಮೇಲೆ ತಿನ್ನುವವನ ಹೆಸರು ಬರೆದಿರುತ್ತದೆ ಎಂಬ ಮಾತಿದೆ. ಈ ಹೆಸರನ್ನು ಹುಡುಕಿ, ಅವರ ವಿಳಾಸ ತಡಕಾಡಿ ಅವರಿಗೆ ಅನ್ನುವನ್ನು ತಲುಪಿಸುವ ಕೆಲಸವನ್ನು ಮೈಸೂರಿನ ಎಚ್‌.ಆರ್‌. ರಾಜೇಂದ್ರ ಮಾಡುತ್ತಿದ್ದಾರೆ.

ಈ ಸೇವೆಯ ಹೆಸರು ಆಹಾರ ಜೋಳಿಗೆ. ಮೈಸೂರಿನ ಕಲ್ಯಾಣ ಮಂಟಪಗಳಲ್ಲಿ ಎಲ್ಲೇ ಅನ್ನ ಮಿಕ್ಕಿದರೂ, ರಾಜೇಂದ್ರ ಅಂಡ್‌ ಟೀಂ ಅಲ್ಲಿ ಹಾಜರ್‌. ಇದಕ್ಕೆ ರಾಜೇಂದ್ರ ಅವರ ಹೆಂಡತಿ ಶ್ವೇತಾ ಕೂಡ ಹೆಗಲು ಕೊಟ್ಟಿದ್ದಾರೆ. ಸುಮಾರು ಏಳು ವರ್ಷಗಳ ಹಿಂದೆ ಶುರುವಾದ ಸೇವೆ, ಈಗಲೂ ಮುಂದುವರಿಯುತ್ತಿದೆ. ಅಂದಹಾಗೆ, ಈ ರಾಜೇಂದ್ರ ಅವರಿಗೆ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ಸಂಗ್ರಹಾಲಯದಲ್ಲಿ ಉದ್ಯೋಗ. ಇವರು ಕುಣಿಗಲ್‌ ತಾಲೂಕಿನ ಅರಮನೆ ಹೊನ್ನ ಮಾಚನಹಳ್ಳಿ. ರೈತ ಕುಟುಂಬದಿಂದ ಬಂದವರು.

ರಾಜೇಂದ್ರ ಒಂದು ದಿನ (2012ರಲ್ಲಿ) ಕುಟುಂಬ ಸಮೇತರಾಗಿ ಮದುವೆ ಸಮಾರಂಭಕ್ಕೆ ಹೋಗಿದ್ದರು. ಛತ್ರಕ್ಕೆ ತಲುಪುವ ಹೊತ್ತಿಗೆ ರಾತ್ರಿಯಾಗಿದ್ದರಿಂದ, ಇವರದೇ ಕೊನೇ ಪಂಕ್ತಿಯ ಊಟ. ಕೈತೊಳೆಯಲು ಹೋದವರು ಅಡಿಗೆ ಮನೆಯತ್ತ ತಿರುಗಿದರು. ನೋಡಿದರೆ, ರಾಶಿ ರಾಶಿ ಊಟ ಉಳಿದು ಹೋಗಿತ್ತು. ಊಟ ಮುಗಿಸಿ ಛತ್ರದಿಂದ ಹೊರಟರೆ, ಕಸದ ತೊಟ್ಟಿಯಲ್ಲಿ ಸುರಿದ ಆಹಾರವನ್ನು ಹೆಕ್ಕಿ ತಿನ್ನುತ್ತಿದ್ದವರ ದೃಶ್ಯಕಂಡರು. ಜೊತೆಯಲ್ಲಿದ್ದ ತಾಯಿ- “ಅಲ್ನೋಡೋ ಮಗ. ಅಲ್ಲಿ ಊಟ ಉಳಿದಿತ್ತು. ಅದನ್ನೇ ಈ ಹುಡುಗರಿಗೆ ಬಡಿಸಿದ್ದರೆ ಚೆನ್ನಾಗಿತ್ತು ಅಲ್ವಾ?’ ಅಂದರು. ತಾಯಿಯ ಮಾತು ಕೇಳಿ ರಾಜೇಂದ್ರರ ಕರುಳು ಚಿವುಟಿದಂತಾಯಿತು. ಹೀಗೆ, ಆಹಾರ ಪೋಲಾಗುವ ಬದಲು ಹಸಿದವರಿಗೆ ಅನ್ನ ಪೂರೈಸುವ ಕೆಲಸ ಏಕೆ ಮಾಡಬಾರದು? ಅಂತ ಯೋಚಿಸಿದರು. ಹಾಗೆ ಮಾಡಲು ಯಾರನ್ನು ಕೇಳುವುದು? ಕೇಳುವುದಕ್ಕಿಂತ ಮೊದಲು ನಾವೇ ಏಕೆ ಶುರು ಮಾಡಬಾರದು? ಅಂತೆಲ್ಲ ಯೋಚನೆ ಬಂತು.

ಆಗ, ಮನೆಯವರಿಗೆ ರಾಜೇಂದ್ರ ಹೇಳಿದರು; “ಪ್ರತಿದಿನ 10 ಜನ ಗೆಳೆಯರಿಗೆ ಊಟ ಬೇಕು’ ಅಂತ ಸುಳ್ಳು ಹೇಳಿ ಅಡಿಗೆ ಮಾಡಿಸಿ, ಅದನ್ನು ದ್ವಿಚಕ್ರವಾಹನದಲ್ಲಿ ಇಟ್ಟುಕೊಂಡು ಹೋಗಿ ಇರ್ವಿನ್‌ ರೋಡಲ್ಲಿ ಕುಳಿತಿರೋ ನಿರ್ಗತಿಕರಿಗೆ ಹಂಚುತ್ತಿದ್ದರು. ಹೆಚ್ಚು ಕಮ್ಮಿ ಒಂದು ತಿಂಗಳು ಹೀಗೇ ನಡೆಯಿತು. ಕೊನೆಗೆ, ಪಕ್ಕದಮನೆಯವರಿಗೆ ಈ ವಿಷಯ ತಿಳಿದು ಹೋಯಿತು. ಅವರು ರಾಜೇಂದ್ರರ ಪತ್ನಿಯವರಲ್ಲಿ ವಿಚಾರಿಸಿದಾಗ ಶುರುವಾಯಿತು ವಿಚಾರಣೆ. ಆಗ ರಾಜೇಂದ್ರರು, ಇದ್ದದ್ದನ್ನು ಹೆಂಡತಿಗೆ ಹೇಳಿದರು. ಪತ್ನಿ ಶ್ವೇತ ಖುಷಿಗೊಂಡು, ಈ ಕೆಲಸದಲ್ಲಿ ತಾವೂ ಕೈ ಜೋಡಿಸಿದರು. ಆನಂತರ ಶುರುವಾದದ್ದೇ ಕಲ್ಯಾಣ ಮಂಟಪದಲ್ಲಿ ಊಟ ಕೇಳುವ ಪರಿಪಾಠ.

ಮೊದಲ ಬಾರಿಗೆ ಗಂಡ-ಹೆಂಡತಿ ಒಂದು ಕಲ್ಯಾಣ ಮಂಟಪಕ್ಕೆ ಹೋಗಿ, ಮಿಕ್ಕಿರುವ ಊಟ ಕೊಡ್ತಿರಾ? ಅಂತ ಕೇಳಿದಾಗ ಯಾರಿಗೆ ಹಂಚುತ್ತೀರಿ, ಹೇಗೆ ಹಂಚ್ಚುತ್ತೀರಿ ಅಂತೆಲ್ಲ ನೂರಾರು ಪ್ರಶ್ನೆಗಳು ಎದುರಾದವು. ಎಲ್ಲದಕ್ಕೂ ಉತ್ತರ ಕೊಟ್ಟಾಗ, ಕೈಗೆ ಎರಡು ಬಕೆಟ್‌ ಕೇಸರಿ ಬಾತ್‌ ಕೊಟ್ಟರು. ಅದನ್ನು ಗಂಡ-ಹೆಂಡತಿ ದ್ವಿಚಕ್ರವಾಹನದಲ್ಲಿ ತೆಗೆದು ಕೊಂಡು ಹೋಗಿ ಒಂದಷ್ಟು ಬಡವರ ಹೊಟ್ಟೆ ತುಂಬಿಸಿದರು. ಅಲ್ಲಿಂದ ಶುರುವಾಯಿತು ಇವರ ಗರೀಬಿ ಹಠಾವೋ ಹವ್ಯಾಸ. ಹೀಗೆ, ಎಂಟು ವರ್ಷಗಳ ಹಿಂದೆ, ಎರಡು ಬಕೆಟ್‌ ಕೇಸರಿಬಾತ್‌ನೊಂದಿಗೆ ಆರಂಭವಾದ ಈ ಕೈಂಕರ್ಯ ಇಂದು ಹೆಸರಿಗೆ ತಕ್ಕಂತೆ ಅಕ್ಷಯವಾಗುತ್ತಿದೆ. ನಿತ್ಯ ಮದುವೆ, ಸಭೆ, ಸಮಾರಂಭಗಳಲ್ಲಿ ಮಿಕ್ಕುಳಿದ ಆಹಾರವನ್ನು ಸ್ವೀಕರಿಸುತ್ತಾ, ಇನ್ನೊಬ್ಬರ ಹೊಟ್ಟೆ ತುಂಬಿಸುತ್ತಾ ಇದ್ದಾರೆ. ಇದಕ್ಕಾಗಿ ಬರುವ ಕರೆಗಳನ್ನು ಸ್ವೀಕರಿಸಿ, ಸೂಕ್ತ ಸಮಯಕ್ಕೆ ಅಲ್ಲಿಗೆ ಹೋಗಿ ಆಹಾರ ಸಂಗ್ರಹಿಸುವ ಸವಾಲಿನ ಕೆಲಸವನ್ನೂ ನಿಭಾಯಿಸುತ್ತಿದ್ದಾರೆ.

ಈ ರೀತಿ ಪ್ರತಿ ನಿತ್ಯ ಸಂಗ್ರಹಿಸಿದ ಆಹಾರವನ್ನು ಸುಮಾರು 77 ಕೊಳಚೆ ಪ್ರದೇಶಗಳು, 25 ವೃದ್ಧಾಶ್ರಮಗಳು, ಕೆ.ಆರ್‌.ಆಸ್ಪತ್ರೆ ಆವರಣದಲ್ಲಿ ರೋಗಿಗಳ ಜೊತೆ ಬಂದವರಿಗೆ ಹಂಚುತ್ತಾ , ಅವರ ಹಸಿವು ನೀಗಿಸುವ ಕಾಯಕದಲ್ಲಿ ತೊಡಗಿದ್ದಾರೆ. ಇವರ ಈ ಸೇವಾ ಕಾರ್ಯಕ್ಕೆ ಸ್ವಯಂ ಸೇವಕರಾಗಿ ಹಲವರು ಮುಂದೆ ಬರುತ್ತಾರೆ. ಆಹಾರವನ್ನು ಹೊತ್ತು ತಂದ ಜೋಳಿಗೆಯ ಗಾಡಿ ಬಂದು ನಿಲ್ಲುತ್ತಿದ್ದಂತೆ ಅಲ್ಲಿದ್ದವರೇ ಸ್ವಯಂಸೇವಕರಾಗಿ ಇವರ ಸೇವಾ ಕಾರ್ಯಕ್ಕೆ ಕೈಜೊಡಿಸುವುದೂ ಉಂಟಂತೆ. “ಕೆ.ಆರ್‌.ಆಸ್ಪತ್ರೆ ಆವರಣಕ್ಕೆ ಮಧ್ಯ ರಾತ್ರಿ 2ಗಂಟೆಗೆ ಆಹಾರ ಕೊಂಡೊಯ್ದರೂ ಊಟ ಮಾಡುವವರಿರುತ್ತಾರೆ. ಅವರಿಗೆ ಹಸಿವಿರುತ್ತೆ, ಅನ್ನ ಸಿಕ್ಕಿರುವುದಿಲ್ಲ, ಆ ದೃಶ್ಯವನ್ನು ಕಂಡಾಗ ಕರುಳು ಕಿತ್ತು ಬರುತ್ತೆ ಎನ್ನುತ್ತಾರೆ ರಾಜೇಂದ್ರ.

ಹಣ ಎಲ್ಲಿಂದ?
ಪ್ರತಿದಿನ ಹತ್ತಾರು ಫೋನ್‌ ಕರೆಗಳು. ಅದಕ್ಕೆ ತಕ್ಕಂತೆ ಪಾತ್ರೆಗಳನ್ನು ತೆಗೆದು ಕೊಂಡು ಹೋಗಿ, ಉಳಿದ ಊಟವನ್ನು ತಂದು, ಬಡವರಿಗೆ ಹಂಚುವುದು ಸುಲಭದ ಕೆಲಸವಲ್ಲ. ಊಟ ತರಲು ಪಾತ್ರೆ ಪಗಡ ಬೇಕು. ಸಾಗಿಸಲು ವಾಹನ, ಜನ ಇರಬೇಕು. ವಿತರಿಸಲು ತಟ್ಟೆ ಬೇಕು. ಇವಕ್ಕೆಲ್ಲ ಹಣ ಎಲ್ಲಿಂದ ಹೊಂದಿಸುತ್ತಾರೆ? ಇದಕ್ಕೆ ರಾಜೇಂದ್ರ ಹೇಳುತ್ತಾರೆ- “ಗೆಳೆಯರ ನೆರವಿದೆ. ನಾನೂ ಕೈಯಿಂದ ಹಣ ಹಾಕುತ್ತೇನೆ. ಇಲ್ಲಿ ಹಣಕ್ಕಿಂತ ಹೆಗಲು ಕೊಡೋರು ಮುಖ್ಯ. ನಾವು 9 ಜನ ಪ್ರತಿ ದಿನ ಇದೇ ಕೆಲಸ ಮಾಡುತ್ತೇನೆ. ಪುಣ್ಯಾತ್ಮರು ಮೂರು ವಾಹನ ಕೊಡಿಸಿದ್ದಾರೆ. ಬಾಳೆ ಎಲೆ ಇದೆ ತಗೊಳ್ಳಿ ಸಾರ್‌ ಅಂತ ಕೊಡೋರು ಇದ್ದಾರೆ. ಎಲ್ಲವನ್ನೂ ಜೊತೆ ಮಾಡಿಕೊಂಡು ಹೇಗೋ ಸರಿದೂಗಿಸುತ್ತಿದ್ದೇವೆ ಎನ್ನುತ್ತಾರೆ.

ಮದುವೆ ಸೀಸನ್‌ಗಳಲ್ಲಿ ಹೆಚ್ಚು ಆಹಾರ ಸಿಗುತ್ತೆ. ಇನ್ನುಳಿದ ಸಂದರ್ಭದಲ್ಲಿ ಕಡಿಮೆ ಯಾಗುತ್ತದೆ. ಏನಿಲ್ಲವೆಂದರೂ ಪ್ರತಿ ನಿತ್ಯ 2 ಸಾವಿರ ಜನರಿಗೆ ಆಹಾರ ಪೂರೈಕೆಯಾಗುತ್ತಿದೆ. ಕಲ್ಯಾಣಮಂಟಪಗಳಲ್ಲಿ ಆಹಾರ ಉಳಿದರೆ ಅಡುಗೆಯವರೇ ಕರೆ ಮಾಡಿ ಆಹಾರ ಕೊಂಡೊಯ್ಯಲು ಹೇಳುತ್ತಾರೆ. ಕೆಲ ಸಭೆ, ಸಮಾರಂಭಗಳಲ್ಲಿ ಬ್ರೆಡ್‌, ಬಾಳೆಹಣ್ಣು ಉಳಿದರೂ ಕರೆ ಬರುತ್ತದೆ. ಕರೆ ಬಂದಲ್ಲಿಗೆ ಜೋಳಿಗೆ ಗಾಡಿಗಳು ಹೋಗಿ ಆಹಾರವನ್ನು ಸಂಗ್ರಹಿಸಿ ತರುತ್ತವೆ. ಮದುವೆ ಸೀಸನ್‌ಗಳಲ್ಲಿ ಕಲ್ಯಾಣಮಂಟಪಗಳಿಂದ ಬರುವ ಕರೆಗಳಿಗೆ ಸ್ಪಂದಿಸುವುದೇ ಸವಾಲಿನ ಕೆಲಸ. ನಿಗದಿತ ಸಮಯಕ್ಕೆ ಕಲ್ಯಾಣಮಂಟಪವನ್ನು ಖಾಲಿ ಮಾಡಬೇಕಿರುತ್ತದೆ. ಅಲ್ಲಿಗೆ ತಲುಪುವುದು ಕೊಂಚ ತಡವಾದರೂ ಆಹಾರವನ್ನು ಕಸದಬುಟ್ಟಿಗೆ ಸುರಿದುಹೋಗಿ ಬಿಡುವುದೂ ಉಂಟು ಅನ್ನುವ ರಾಜೇಂದ್ರ, ನಾವು ಬರುವವರೆಗೆ ಕಸದ ಬುಟ್ಟಿಗೆ ಸುರಿಯದೆ ಒಂದು ಪಾತ್ರೆಯಲ್ಲಿ ಆಹಾರವನ್ನು ಇಡುವಂತೆ ಮನವಿ ಮಾಡುತ್ತೇನೆ’ ಅನ್ನುತ್ತಾರೆ.

ಕಿಯೋಸ್ಕ್ಗಳ ಸ್ಥಾಪನೆ
ಆಹಾರವನ್ನು ಸ್ವೀಕರಿಸುವಂತೆಯೇ, ಮನೆಯಲ್ಲಿ ಉಳಿದ, ಮರೆತು ಹೋದ ತಿಂಡಿಗಳನ್ನೂ ತಂದು ಕೊಡಲು ಕಿಯೋಸ್ಕ್ಗಳ ಸ್ಥಾಪನೆ ಮಾಡಿದ್ದಾರೆ. ವಾಕಿಂಗ್‌ಗೆ ಹೋದಾಗ ತಂದು ಕೊಡುವವರೂ ಹೆಚ್ಚು. ಇದಕ್ಕಾಗಿ ನಗರದ ನಾಲ್ಕು ದಿಕ್ಕುಗಳಲ್ಲೂ ಕಿಯೋಸ್ಕ್ಗಳ ಸ್ಥಾಪನೆಗೆ ಮುಂದಾಗಿದ್ದಾರೆ. ಸದ್ಯ ಸಿದ್ಧಾರ್ಥ ಬಡಾವಣೆ, ಕುವೆಂಪುನಗರದ ಸಪ್ತಮಾತೃಕ ಉದ್ಯಾನದ ಎದುರು ಮಾತ್ರ ಸ್ಥಾಪಿಸಲಾಗಿದೆ. ಈ ಕಿಯೋಸ್ಕ್ಗಳಲ್ಲಿ 20 ರಿಂದ 25 ಪಾತ್ರೆಗಳನ್ನಿಟ್ಟು, ಅದರ ಉಸ್ತುವಾರಿಗೆ ಒಬ್ಬರು ಸ್ವಯಂಸೇವಕರನ್ನು ನಿಯೋಜಿಸಿ, ಕಿಯೋಸ್ಕ್ ಇರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಳಿದ ಆಹಾರವನ್ನು ಸಂಗ್ರಹಿಸುತ್ತಿದ್ದಾರೆ.

ಬಾಳೆ ಎಲೆ ಕೊಡ್ತಾರೆ
ರಾಜೇಂದ್ರ ಅವರು ಮೈಸೂರಿನ ಮಾರ್ಕೆಟ್‌ಗೆ ಹೋದರೆ ಸಾಕು. ಕೈಗೊಂದಷ್ಟು ಬಾಳೆ ಎಲೆ ಕೊಟ್ಟು ಹೋಗ್ತಾರೆ. ಯಾರಾದರೂ ಮನೆಯಲ್ಲಿ ಎಲೆ ಉಳಿದರೆ, ಸಾರ್‌, ತಗೊಳ್ಳಿ ಇದರಲ್ಲಿ ಯಾರಿಗಾದರೂ ಊಟ ಹಾಕಿ ಅಂತ ಕೊಟ್ಟು ಹೋಗ್ತಾರೆ. ಇವಿಷ್ಟೇ ಅಲ್ಲ, ಮನೆಯಲ್ಲಿ ಉಳಿದ ಹಣ್ಣುಗಳನ್ನು ತಂದು ರಾಜೇಂದ್ರಅವರ ಜೋಳಿಗೆಗೆ ಹಾಕುತ್ತಾರೆ. ಅವರು ಅದನ್ನು ಬೀದಿಯಲ್ಲಿ ಓಡಾಡುವ ಹಸುಗಳು ಹಾಗೂ ಗೋಶಾಲೆಗಳಿಗೆ ಹೋಗಿ ಕೊಡುತ್ತಾರೆ. ಹೀಗೆ, ಕೊಟ್ಟ ಪ್ರತಿಯೊಂದು ಪದಾರ್ಥವೂ ಸಾರ್ಥಕ ರೀತಿಯಲ್ಲಿ ಬಳಕೆಯಾಗುತ್ತಿದೆ.
ಜೋಳಿಗೆ ಮೊಬೈಲ್‌ 9148987375ಗೆ

ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.