15ಕ್ಕೂ ಅಧಿಕ ಬಾವಿ ನೀರು ಹಾಳು; ತಪ್ಪಲಿಲ್ಲ ಜನರ ಗೋಳು
ಅಡ್ಕದಕಟ್ಟೆ ಬಳಿ ಡ್ರೈನೇಜ್ ಪೈಪ್ಲೈನ್ ಸೋರಿಕೆ
Team Udayavani, Dec 8, 2019, 5:54 AM IST
ಉಡುಪಿ: ಅಡ್ಕದಕಟ್ಟೆ ಮಾರ್ಗದಿಂದ ಮೂಡು ತೋಟ ಮೂಲಕ ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ (ಎಸ್ಟಿಪಿ) ಸಾಗುವ ಒಳಚರಂಡಿ ಪೈಪ್ಲೈನ್ ಸ್ಥಳೀಯರ ಪಾಲಿಗೆ ನರಕ ವಾಗಿದೆ. ಬರೀ ಕಾಯಿಲೆಯಲ್ಲ, ಈ ಪೈಪ್ಲೈನ್ ಅವಾಂತರದಿಂದ ಬಾವಿಗಳ ನೀರು ಹಾಳಾಗಿ ಸ್ಥಳೀಯರು ಜಲ ಕ್ಷಾಮ ಎದುರಿಸುವಂತಾಗಿದೆ. ಆದರೂ ನಗರಸಭೆ ಅಧಿಕಾರಿಗಳು ತಾತ್ಕಾಲಿಕ ಕಾಮಗಾರಿಯಲ್ಲೇ ನಿರತರಾಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳೂ ಪರಿಹಾರ ಹುಡುಕುತ್ತಿದ್ದಾರೆ. ಅಷ್ಟಕ್ಕೂ ಈ ಸಮಸ್ಯೆ ಎರಡು ವರ್ಷಗಳ ಹಿಂದಿನದ್ದು.
ಮೂಡು ತೋಟದ ಮೂಲಕ ಹಾದು ಹೋಗುವ ಒಳಚರಂಡಿ ಡ್ರೈನೇಜ್ ಪೈಪ್ ಒಂದು ವರ್ಷದಲ್ಲಿ 13 ಬಾರಿ ಒಡೆದಿದೆ. ಸ್ಥಳೀಯರು ನಗರಸಭೆ ಹಾಗೂ ಜನಪ್ರತಿನಿಧಿಗಳಲ್ಲಿ ತಮ್ಮ ಅಹವಾಲು ತೋಡಿಕೊಂಡರೆ ಲೆಕ್ಕ ಭರ್ತಿಗೆ ದುರಸ್ತಿಗೊಳ್ಳುತ್ತದೆ. ಅದಾದ ಒಂದೇ ವಾರದಲ್ಲಿ ಮತ್ತೆ ಒಡೆಯುತ್ತದೆ ಎಂಬ ದೂರು ಇಲ್ಲಿಯವರದ್ದು.
ಜಲಕ್ಷಾಮ
ಮೂಡುತೋಟದಲ್ಲಿ ಸುಮಾರು 50-60 ಮನೆಗಳಿದ್ದು, ಸುಮಾರು 25 ಬಾವಿಗಳಿವೆ. ಬೇಸಗೆಯಲ್ಲಿ ಸಹ ಈ ಬಾವಿಗಳ ನೀರು ಬತ್ತದು. ಆದರೆ ಎರಡು ವರ್ಷದಿಂದ ನಿರಂತರವಾಗಿ ಡ್ರೈನೇಜ್ ಪೈಪ್ಲೈನ್ಗಳು ಒಡೆದು ಹೋಗಿರುವುದರಿಂದ ಸುಮಾರು 15ಕ್ಕೂ ಹೆಚ್ಚಿನ ಬಾವಿಗಳ ನೀರು ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗಿದೆ. ಇದು ಅಡ್ಕದ ಕಟ್ಟೆ ಮಾರ್ಗದಲ್ಲಿ ಕೊಳಚೆ ನೀರು ಸೋರಿಕೆಯಾಗುತ್ತಿದೆ ಎನ್ನುವ ಸ್ಥಳೀಯರ ಆರೋಪಕ್ಕೆ ಪುಷ್ಟಿ ನೀಡಿದೆ.
ಸಾಂಕ್ರಾಮಿಕ ರೋಗಗಳ ಭೀತಿ
ಕೊಳಚೆ ನೀರು ರಸ್ತೆ ಮೇಲೆ ಹರಿ ಯುತ್ತಿರುವ ಕಾರಣ, ಸ್ಥಳೀಯರು ಮಲೇರಿಯಾ, ಡೆಂಗ್ಯೂ, ಜಾಂಡೀಸ್ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಸೇರುವಂತಾಗಿದೆ. ಕೊಳಚೆ ನೀರಿನ ದುರ್ನಾತದಿಂದ ಶೇ. 60ರಷ್ಟು ಮನೆ ಯವರು ಬಾಗಿಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಈ ಮಾರ್ಗವಾಗಿ ಸಂಚರಿಸುವವರೂ ನರಕ ಯಾತನೆ ಅನುಭವಿಸಲೇಬೇಕು. ಜತೆಗೆ ಮನೆ ಖಾಲಿ ಮಾಡಿ ಬೇರೆ ಪ್ರದೇಶಕ್ಕೆ ಹೋಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಹೋಗುವ ಪೈಪ್ ಅಲ್ಲಲ್ಲಿ ಒಡೆದಿದೆ. 2005ರಲ್ಲಿ ಒಳ ಚರಂಡಿ ಪೈಪ್ಲೈನ್ಗಳನ್ನು ಅಳವಡಿಸಲಾಗಿತ್ತು. ನಗರದ ಎಲ್ಲ ಒಳಚರಂಡಿ ಪೈಪ್ ಲೈನ್ ಬದಲಾಯಿಸಿದರೆ ಮಾತ್ರ ಸರಿಯಾದೀತು ಎಂಬುದು ಕೇಳಿಬರುತ್ತಿರುವ ಜನಾಭಿಪ್ರಾಯ.
ಕೊಳಚೆ ನೀರು
ಮಳೆ ನೀರಿನ ಚರಂಡಿಗೆ ನಗರಸಭೆ ಅಧಿಕಾರಿಗಳು ಮೂಡುತೋಟದಲ್ಲಿ ಒಡೆದು ಹೋದ ಪೈಪ್ ದುರಸ್ತಿಗೆ ಶನಿವಾರ ಮುಂದಾಗಿದ್ದು, ಕೊಳಚೆ ನೀರು ಟ್ಯಾಂಕರ್ ಮೂಲಕ ಸಾಗಿಸದೆ ನೇರವಾಗಿ ಮಳೆ ನೀರಿನ ಚರಂಡಿಗೆ ಹರಿಬಿಟ್ಟಿದ್ದಾರೆ. ಈ ಕುರಿತು ಜನಪ್ರತಿನಿಧಿ ಹಾಗೂ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತಿದ್ದಂತೆ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಕೊಳಚೆ ನೀರನ್ನು ಟ್ಯಾಂಕರ್ ಮೂಲಕ ಸಾಗಿಸಲು ಮುಂದಾಗಿರುವುದು ನಗರಸಭೆಯ ನಿರ್ಲಕ್ಷ್ಯಕ್ಕೆ ನಿದರ್ಶನ.
ನೀರಿನ ಮಾದರಿ ಪರೀಕ್ಷೆ
ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಬಾವಿ ನೀರು ಪರೀಕ್ಷೆಗೆ ಒಳಪಡಿಸಲು ಮಾದರಿಗಳನ್ನು ಸಂಗ್ರಹಿಸಿದ್ದಾರೆ. 48 ಗಂಟೆಯೊಳಗೆ ನೀರಿನ ಬಳಕೆಗೆ ಯೋಗ್ಯವೋ ಅಥವಾ ಇಲ್ಲವೋ ಎನ್ನುವ ಕುರಿತು ವರದಿ ನೀಡುವರು.
ಊಟ ಮಾಡುವಂತಿಲ್ಲ!
ಪೈಪ್ ಲೈನ್ ಒಡೆದು ಹೋಗಿರುವ ಕುರಿತು ನಗರಸಭೆ ಹಾಗೂ ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ದುರಸ್ತಿ ಹೆಸರಿನಲ್ಲಿ ಒಳಚರಂಡಿ ಪೈಪ್ ಲೈನ್ ಅಗೆದು ವಾರಗಟ್ಟಲೇ ದುರಸ್ತಿ ಮಾಡುವುದಿಲ್ಲ. ಮನೆಯಲ್ಲಿ ನೆಮ್ಮದಿಯಲ್ಲಿ ಕುಳಿತು ಊಟ ಮಾಡುವಂತಿಲ್ಲ. ಫ್ಯಾನ್ ಗಾಳಿಯಲ್ಲೇ ಬದುಕು ನಡೆಸುವಂತಾಗಿದೆ.
-ಸ್ಥಳೀಯರು
ಪ್ರತಿಕ್ರಿಯೆ ಇಲ್ಲ
ಡ್ರೈನೇಜ್ ಪೈಪ್ಲೈನ್ ಒಡೆದು ಹೋಗುತ್ತಿರುವು ದರಿಂದ ಬಾವಿ ನೀರು ಹಾಳಾಗು ತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ನಮ್ಮ ಬಳಿ ಅಧಿಕಾರ ವಿಲ್ಲದ ಕಾರಣದಿಂದ ಅಧಿಕಾರಿ ಗಳನ್ನು ಪ್ರಶ್ನಿಸಲಾಗುತ್ತಿಲ್ಲ. ಹೊಸ ಡ್ರೈನೇಜ್ ಪೈಪ್ ಲೈನ್ ಆಳವಡಿಸಿದರೆ ಮಾತ್ರ ಮುಕ್ತಿ.
-ಸಂತೋಷ್, ನಿಟ್ಟೂರು ವಾರ್ಡ್ ನಗರಸಭೆ ಸದಸ್ಯ
ಕ್ರಮ ಕೈಗೊಳ್ಳುವೆ
ಡ್ರೈನೇಜ್ ನೀರು ತೆರೆದ ಚರಂಡಿಗೆ ಬಿಡುತ್ತಿರುವ ಕುರಿತು ಮಾಹಿತಿ ಸಿಕ್ಕ ತತ್ಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದ್ದೇನೆ. ಗುತ್ತಿಗೆ ದಾರರಿಗೆ ಈಗಾಗಲೇ ಎಚ್ಚರಿಸಿದ್ದು, ಮರುಕಳಿಸ ದಂತೆ ಕ್ರಮ ಕೈಗೊಳ್ಳಲಾಗಿದೆ.
-ಆನಂದ ಕೊಲ್ಲೋಳಿಕರ್, ಪೌರಾಯುಕ್ತ ನಗರಸಭೆ, ಉಡುಪಿ
ಬಾವಿಯಲ್ಲಿ ನೀರಿದ್ದರೂ ಬಳಕೆ ಇಲ್ಲ
ಲಕ್ಷಾಂತರ ರೂ.ವ್ಯಯಿಸಿ ಹೊಸ ಕಲ್ಲಿನ ಬಾವಿಯನ್ನು ಮಾಡಿದ್ದೇನೆ. ಡ್ರೈನೇಜ್ ಪೈಪ್ ಅಲ್ಲಲ್ಲಿ ಒಡೆದು ಹೋಗಿ ರುವುದರಿಂದ ಕೊಳಚೆ ನೀರು ಬಾವಿಯನ್ನು ಸೇರುತ್ತಿದೆ. ಸ್ವತ್ಛ ನೀರು ಹಳದಿ ಮಿಶ್ರಿತ ಬಣ್ಣಕ್ಕೆ ತಿರುಗಿದೆ. ನೀರಿನ ಮೇಲೆ ಎಣ್ಣೆ ಪದರ ನಿಂತಿದೆೆ. ಹಾಗಾಗಿ ಬೇರೆ ಪ್ರದೇಶ ನೀರಿಗೆ ಆಶ್ರಯಿಸಬೇಕಾಗಿದೆ.
-ಶೇಖರ್ ಶೇರಿಗಾರ್
ಒಂದು ತಿಂಗಳು ಆಸ್ಪತ್ರೆಯಲ್ಲಿ…
ಕಳೆದ 40 ವರ್ಷದಿಂದ ಮೂಡುತೋಟದಲ್ಲಿ ವಾಸವಾಗಿದ್ದೇನೆ. ಇಂತಹ ಸಮಸ್ಯೆ ಎಂದೂ ಕಂಡಿರಲಿಲ್ಲ. ಎರಡು ವರ್ಷಗಳಿಂದ ಡ್ರೈನೇಜ್ ಪೈಪ್ಲೈನ್ ನಿರಂತರವಾಗಿ ಒಡೆಯುತ್ತಿದೆ. ಮನೆಯ ಬಾವಿ ನೀರು ಸೇವಿಸಿದ ಪರಿಣಾಮ ಒಂದು ತಿಂಗಳು ಆಸ್ಪತ್ರೆಯಲ್ಲಿ ಕಳೆಯ ಬೇಕಾಯಿತು. ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡಿ.
-ಶಕುಂತಲಾ
ಶಾಶ್ವತ ಪರಿಹಾರ ಯಾವಾಗ
ಡ್ರೈನೇಜ್ ಪೈಪ್ ಲೈನ್ಗಳು ಹಾಳಾಗಿವೆ. ಇದರಿಂದಾಗಿ ಅಲ್ಲಲ್ಲಿ ಪೈಪ್ಗ್ಳು ಒಡೆಯುತ್ತಿವೆ. ಅಧಿಕಾರಿಗಳು ಉತ್ತಮ ಗುಣಮಟ್ಟದ ಪೈಪ್ಲೈನ್ ಹಾಕುಬೇಕು. ಇಲ್ಲವಾದರೆ ಈ ಡ್ರೈನೇಜ್ ಪೈಪ್ಲೈನ್ ಬೇರೆ ಕಡೆ ಸ್ಥಳಾಂತರ ಮಾಡಬೇಕು.
-ಗೋಪಾಲ
ನಾಗರಿಕ ಸಮಸ್ಯೆ ಇದ್ದರೆ ನಮಗೆ ತಿಳಿಸಿ
9148594259
ತೃಪ್ತಿ ಕುಮ್ರಗೋಡು