ಕಿಶೋರ ಯಕ್ಷೋತ್ಸವಕ್ಕೆ ಚಾಲನೆ
Team Udayavani, Jan 19, 2020, 5:41 PM IST
ಕಾರ್ಕಳ: ಯಕ್ಷ ಕಲಾರಂಗದ ವತಿಯಿಂದ 8ನೇ ವರ್ಷದ ಕಿಶೋರ ಯತ್ಸವ 2020ಕ್ಕೆ ಮಾರಿಗುಡಿ ವಠಾರದ ಕುಕ್ಕುಂದೂರು ದಿ. ಗೋಪಾಲಕೃಷ್ಣ ಶೆಟ್ಟಿ ವೇದಿಕೆಯಲ್ಲಿ ಜ. 18ರಂದು ಚಾಲನೆ ನೀಡಲಾಯಿತು.
ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಎಂ.ಆರ್. ವಾಸುದೇವ ಯಕ್ಷೋತ್ಸವ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೃತ್ಯ, ಮಾತುಗಾರಿಕೆ, ಹಾಡುಗಾರಿಕೆ, ವೇಷಭೂಷಣ ಎಲ್ಲವನ್ನೂ ಒಳಗೊಂಡಿರುವ ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತೀಕ. ಯಕ್ಷಗಾನದಿಂದ ಕನ್ನಡ ಭಾಷೆ ಸಮೃದ್ಧಗೊಂಡಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವತ್ತ ನಾವೆಲ್ಲರೂ ಮುಂದಾಗಬೇಕೆಂದರು.
ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಶುಭಹಾರೈಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ, ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್, ಹಿರಿಯ ವಿದ್ವಾಂಸ, ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಷಿ, ಯಕ್ಷಕಲಾರಂಗದ ಗೌರವಾಧ್ಯಕ್ಷ ಡಾ| ಸಿ.ಪಿ. ಅತಿಕಾರಿ, ಗೌರವ ಸಲಹೆಗಾರ ಡಾ| ಮಂಜುನಾಥ ಕಿಣಿ, ರೋಟರಿ ಕ್ಲಬ್ ಅಧ್ಯಕ್ಷ ಟಿ.ಎ. ಜಗದೀಶ್ ಉಪಸ್ಥಿತರಿದ್ದರು.
ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಪ್ರೊ| ಬಿ. ಪದ್ಮನಾಭ ಗೌಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.