ಕ್ವಾರಂಟೈನ್ನಲ್ಲಿರುವವರನ್ನು ಕೀಳಾಗಿ ಕಾಣದಿರಿ
Team Udayavani, Apr 30, 2020, 5:04 PM IST
ಸಾಂದರ್ಭಿಕ ಚಿತ್ರ
ಹೊಳೆನರಸೀಪುರ: ಹೊರ ಊರುಗಳಿಂದ ಬಂದು ಹೋಂ ಕ್ವಾರಂಟೈನ್ನಲ್ಲಿರುವವರನ್ನು ಕೋವಿಡ್ ಪೀಡಿತರೆಂದು ಭಾವಿಸಿ ಕೀಳಾಗಿ ಕಾಣಬಾರದು ಎಂದು ಕೋವಿಡ್-19 ಜಿಲ್ಲಾ ಮೇಲ್ವಿಚಾರಕ ಕೆ. ವಿನಯ್ ತಿಳಿಸಿದರು.
ತಾಲೂಕಿನ ಗುಡ್ಡೇಹಳ್ಳಿ ಗ್ರಾಮಕ್ಕೆ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕ್ವಾರಂಟೈನ್ ಆಗಿದ್ದ ವ್ಯಕ್ತಿ ಮಾತನಾಡಿ, ನಾನು ಹೊರ ಊರಿನಿಂದ ಬಂದಿರುವುದರಿಂದ ಕ್ವಾರಂಟೈನ್ನಲ್ಲಿದ್ದೇನೆ. ನಮ್ಮ ಮನೆಯಲ್ಲಿ ಶೌಚಾಲಯವಿಲ್ಲದಿರುವುದರಿಂದ ಶೌಚಕ್ಕಾಗಿ ತೋಟದ ಕಡೆ ಹೋಗಿ ಬರುವಾಗಗ್ರಾಮದಲ್ಲಿ ಕೆಲವರು ನನ್ನನ್ನು ಕೋವಿಡ್ ರೋಗಿಯೆಂದು ಕೀಳಾಗಿ ಕಾಣುತ್ತಿದ್ದಾರೆ ಎಂದು
ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕೋವಿಡ್ -19 ಜಿಲ್ಲಾ ಮೇಲ್ವಿಚಾರಕ ಕೆ.ವಿನಯ್, ಕೋವಿಡ್ ಸೋಂಕಿನ ಭೀತಿಯಿಂದ ಹೊರಗಿನಿಂದ ಊರಿಗೆ ಬಂದವರನ್ನು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿಡುತ್ತೇವೆ. ಆದರೆ ಅವರು ಕೋವಿಡ್ ಸೋಂಕಿತರಲ್ಲ. ಅವರನ್ನು ಗೌರವದಿಂದ ಕಾಣಬೇಕು ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು. ಹಳೇಕೋಟೆ ಹಿರಿಯ ಆರೋಗ್ಯ ಸಹಾಯಕ ಆರ್.ಬಿ.ಪುಟ್ಟೇಗೌಡ ಮಾತನಾಡಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು ಎಂದರು. ಪ್ರೊಬೆಷನರಿ ಪಿಎಸ್ಐ
ಎಂ .ಮಾಲಾ ಇದ್ದರು.